ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಹಾಗೂ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ನಡುವಣ ಬಿಗ್ ಮ್ಯಾಚ್ ನಡೆಯಲಿದೆ. ಈ ಫೈಟ್ಗೆ ಬೆಂಗಳೂರಿನ ಎಂ.ಚಿನ್ನಸ್ವಾಮಿ ಮೈದಾನದಲ್ಲಿ ನಡೆಯಲಿದೆ. ದಕ್ಷಿಣ ಡರ್ಬಿ ನಡುವಿನ ಕಾದಾಟವನ್ನು ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಆದರೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ದೊಡ್ಡ ಚಿಂತೆ ಆರಂಭವಾಗಿದೆ. ಆ ಚಿಂತೆಯಾದರೂ ಏನು ಎಂಬ ಬಗ್ಗೆ ವರದಿ ಇಲ್ಲಿದೆ.
ಆರ್ಸಿಬಿ ಈ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿ ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) ತಂಡವನ್ನು ಸೋಲಿಸಿತು. ಈ ವೇಳೆ ತಂಡದ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ಹಾಗೂ ಮಧ್ಯ ಕ್ರಮಾಂಕದ ಆಟಗಾರ ದೇವದತ್ ಪಡಿಕ್ಕಲ್ ಭರ್ಜರಿ ಬ್ಯಾಟಿಂಗ್ ನಡೆಸಿ ತಂಡಕ್ಕೆ ಗೆಲುವಿನ ಮಾಲೆಯನ್ನು ತೊಡಿಸಿದರು. ಬೌಲಿಂಗ್ನಲ್ಲಿ ಜೋಶ್ ಹ್ಯಾಜಲ್ವುಡ್ ಅನುಪಸ್ಥಿತಿಯಲ್ಲಿ ಸ್ಥಾನ ಪಡೆದ ಜೇಕಬ್ ಡಫಿ ಬಿಗುವಿನ ದಾಳಿ ನಡೆಸಿ ಮೂರು ವಿಕೆಟ್ ಕಬಳಿಸಿದರು. ಆದರೆ ಈ ಬಾರಿಯ ಐಪಿಎಲ್ ಹರಾಜಿನಲ್ಲಿ ಆರ್ಸಿಬಿ ದುಬಾರಿ ಬೆಲೆ ನೀಡಿ ಖರೀದಿಸಿದ ಆಟಗಾರನನ್ನು ಎಲ್ಲಿ ಆಡಿಸ ಬೇಕು ಎಂಬ ಚಿಂತೆ ಆರಂಭವಾಗಿದೆ.

ಆರ್ಸಿಬಿ ಕಳೆದ ಬಾರಿಯ ಐಪಿಎಲ್ ಹರಾಜಿನಲ್ಲೂ ಸ್ಟಾರ್ ಆಲ್ರೌಂಡರ್ ವೆಂಕಟೇಶ್ ಅಯ್ಯರ್ ಅವರಿಗೆ ಭಾರೀ ಹಣದ ಹೊಣೆಯನ್ನು ಹರಿಸಿ ಕೈ ಸುಟ್ಟುಕೊಂಡಿತ್ತು. ಆದರೆ 18ನೇ ಆವೃತ್ತಿಯ ಐಪಿಎಲ್ನಲ್ಲಿ ಇವರು ಸ್ಥಿರ ಪ್ರದರ್ಶನ ನೀಡುವಲ್ಲಿ ವಿಫಲರಾದರು. ಹೀಗಾಗಿ ಕೆಕೆಆರ್ ಇವರನ್ನು ರಿಲೀಸ್ ಮಾಡಿತು. ಇವರು ಹರಾಜಿನಲ್ಲಿ 2 ಕೋಟಿ ರೂ. ಮೂಲ ಬೆಲೆಯೊಂದಿಗೆ ಅಂಗಳಕ್ಕೆ ಪ್ರವೇಶಿಸಿದರು. ಆರ್ಸಿಬಿ ಈ ಪ್ಲೇಯರ್ಗೆ 7 ಕೋಟಿ ರೂ. ನೀಡಿ ತಂಡಕ್ಕೆ ಸೇರಿಸಿಕೊಂಡಿತು.
ಆರ್ಸಿಬಿ ವೆಂಕಟೇಶ್ ಅಯ್ಯರ್ ಅವರಲ್ಲಿನ ಆಲ್ರೌಂಡರ್ ಪ್ರದರ್ಶನವನ್ನು ಗಮನಿಸಿ ಇವರಿಗೆ ತಂಡದಲ್ಲಿ ಮಣೆ ಹಾಕಿತು. ಆದರೆ ಮ್ಯಾನೇಜ್ಮೆಂಟ್ಗೆ ಈಗ ದೊಡ್ಡ ಚಿಂತೆ ಆರಂಭವಾಗಿದೆ. ಇವರನ್ನು ಯಾರ ಬದಲಿಗೆ ಆಡಿಸಬೇಕು ಎಂಬ ಚಿಂತೆ ಶುರುವಾಗಿದೆ. ಆರಂಭದಲ್ಲಿ ದೇವದತ್ ಪಡಿಕ್ಕಲ್ ಬದಲಿಗೆ ಇವರಿಗೆ ಪ್ಲೇಯಿಂಗ್ ಇಲೆವೆನ್ನಲ್ಲಿ ಸ್ಥಾನ ಲಭಿಸುತ್ತದೆ ಎಂಬ ಮಾತುಗಳು ಕೇಳಿ ಬಂದಿದ್ದವು. ಆದರೆ ಸನ್ ವಿರುದ್ಧ ದೇವದತ್ ಆಡಿದ ಧಾಟಿಯನ್ನು ನೋಡಿದರೆ, ಅವರನ್ನು ತಂಡದಿಂದ ಕೈ ಬಿಡುವ ಪ್ರಶ್ನೆಯೇ ಇಲ್ಲ ಎಂದು ಅನಿಸುತ್ತದೆ.

ವೆಂಕಟೇಶ್ ಅಯ್ಯರ್ ಒಬ್ಬ ಟಾಪ್ ಆರ್ಡರ್ ಆಟಗಾರ. ಇವರು ಕೆಕೆಆರ್ ಪರ ಕೆಲವು ಪಂದ್ಯಗಳನ್ನು ಆರಂಭಿಕರಾಗಿ, ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿ ಅಬ್ಬರಿಸಿದ್ದಾರೆ. ಆದರೆ ಆರ್ಸಿಬಿ ತಂಡದ ಟಾಪ್ ಆರ್ಡರ್ ಫುಲ್ ಪ್ಯಾಕ್ಡ್ ಇದೆ. ಇನ್ನು ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ ಸುಲಭವಾಗಿ ತಮಗೆ ಸಿಕ್ಕ ಅವಕಾಶವನ್ನು ಬಿಟ್ಟುಕೊಡುವ ಆಟಗಾರನಲ್ಲ. ನಾಲ್ಕನೇ ಕ್ರಮಾಂಕವನ್ನು ನಾಯಕ ರಜತ್ ಪಾಟಿದಾರ್ ಹಿಡಿದುಕೊಂಡಿದ್ದಾರೆ. ವೆಂಟಕೇಶ್ ಅಯ್ಯರ್ ಅವರಿಗೆ ಸ್ಥಾನ ನೀಡಲು ಯಾರನ್ನು ಕೈ ಬಿಡಬೇಕು ಎಂಬ ಚಿಂತೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಆರಂಭವಾಗಿದೆ.

ಐದನೇ ಕ್ರಮಾಂಕದಲ್ಲಿ ಜಿತೇಶ್ ಶರ್ಮಾ, ಆರನೇ ಕ್ರಮಾಂಕದಲ್ಲಿ ಟೀಮ್ ಡೇವಿಡ್, ಏಳನೇ ಕ್ರಮಾಂಕದಲ್ಲಿ ರೊಮಾರಿಯೋ ಶೆಫರ್ಡ್ ಅವರು ಕಣಕ್ಕೆ ಇಳಿಯಲಿದ್ದಾರೆ. ಹೀಗಾಗಿ ದುಬಾರಿ ಆಟಗಾರನನ್ನು ಯಾವ ಕ್ರಮಾಂಕದಲ್ಲಿ ಆಡಿಸಬೇಕು ಎಂಬ ಚಿಂತೆ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಆರಂಭವಾಗಿದೆ. ಈ ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದಾಗ ಮಾತ್ರ ತಂಡ ಬೇರೆ ಆಟಗಾರರತ್ತ ಮುಖ ಮಾಡಲಿದೆ. ಇಲ್ಲದಿದ್ದಲ್ಲಿ ಗೆಲುವು ಸಾಧಿಸುತ್ತಿರುವ ತಂಡದ ಸಂಯೋಜನೆ ಬದಲಿಸುವುದು ತಂಡಕ್ಕೆ ಪೆಟ್ಟು ಬೀಳುವ ಸಾಧ್ಯತೆ ಇದೆ.