
ಏಪ್ರಿಲ್ 24, ಕನ್ನಡಿಗರ ಪಾಲಿಗೆ ಪ್ರಮುಖ ದಿನ. ಕನ್ನಡ ಚಲನಚಿತ್ರರಂಗ ಕಂಡ ದಿಗ್ಗಜ ಕಲಾವಿದ ಹಾಗೂ ಕರ್ನಾಟಕದ ಹೆಮ್ಮೆಯ ಕನ್ನಡಿಗ ಡಾ. ರಾಜ್ ಕುಮಾರ್ ಅವರ ಜನ್ಮದಿನ. ಸಿಂಗಾನಲ್ಲೂರು ಪುಟ್ಟಸ್ವಾಮಿ ಅವರ ಪುತ್ರ ಮುತ್ತುರಾಜ್ ಆಗಿ ಚಿತ್ರರಂಗ ಪ್ರವೇಶಿಸಿದ ಅವರು ಕನ್ನಡ ಚಲನಚಿತ್ರರಂಗ ಇರುವವರೆಗೂ ಅಚ್ಚಳಿಯದೇ ಉಳಿಯುವಂತಹ ಹಲವಾರು ಮಹಾನ್ ದಾಖಲೆಗಳನ್ನು ನಿರ್ಮಿಸಿ ಅಜರಾಮರರಾಗಿದ್ದಾರೆ.
ಕೇವಲ ಚಿತ್ರರಂಗ ಮಾತ್ರವಲ್ಲದೇ ಕನ್ನಡ ಭಾಷೆಯ ವಿಷಯವಾಗಿ ರಾಜಣ್ಣನವರಿಗೆ ಇದ್ದ ಕಾಳಜಿ ಮತ್ತು ಪ್ರೀತಿಯಿಂದಾಗಿ ಅವರು ಕನ್ನಡಿಗರ ಮನೆ ಮನದಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ. ಹೀಗೆ ಅಭಿಮಾನಿಗಳ ಹಾಗೂ ಹಲವು ಕನ್ನಡ ಪ್ರೇಮಿಗಳ ಆರಾಧ್ಯ ದೈವವಾಗಿ ಸ್ಥಾನ ಪಡೆದುಕೊಂಡಿರುವ ಡಾ ರಾಜ್ ಕುಮಾರ್ ಅವರ ಜನ್ಮ ದಿನವಾದ ಇಂದು ಹಲವಾರು ರಾಜಕೀಯ ಗಣ್ಯರು, ಚಲನಚಿತ್ರ ನಟ ನಟಿಯರು ಹಾಗೂ ವಿವಿಧ ಕ್ಷೇತ್ರಗಳ ಪ್ರಮುಖರು ಅಣ್ಣಾವ್ರನ್ನು ನೆನಪಿಸಿಕೊಳ್ಳುತ್ತಿದ್ದಾರೆ.
ಈ ಸಾಲಿಗೆ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಕೂಡ ಸೇರಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿನ ತಮ್ಮ ಅಧಿಕೃತ ಖಾತೆಗಳ ಮೂಲಕ ರಾಜ್ ಕುಮಾರ್ ಜನ್ಮ ದಿನದ ಕುರಿತು ವಿಶೇಷ ಪೋಸ್ಟ್ ಹಾಕುವುದರ ಮೂಲಕ ಅಣ್ಣಾವ್ರ ಅಭಿಮಾನಿಗಳು ಹಾಗೂ ಕನ್ನಡ ಪ್ರೇಮಿಗಳ ಹೃದಯ ಗೆದ್ದಿದೆ.
"ನಾವಾಡುವ ನುಡಿಯೇ ಕನ್ನಡ ನುಡಿ." ನಟ ಸಾರ್ವಭೌಮ, ಕನ್ನಡಿಗರ ಪ್ರೀತಿಯ ಅಣ್ಣಾವ್ರು, ಡಾ|| ರಾಜ್ ಕುಮಾರ್ ಅವರ 93ನೇ ಜನ್ಮಮಹೋತ್ಸವದ ನೆನಪಿನಲ್ಲಿ ಎಂದು ಬರೆದುಕೊಂಡು ರಾಜ್ ಕುಮಾರ್ ಅವರ ಫೋಟೋವನ್ನು ಹಂಚಿಕೊಳ್ಳುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಣ್ಣಾವ್ರನ್ನು ಅವರ ಜನ್ಮದಿನದಂದು ಸ್ಮರಿಸಿದೆ.
ಇನ್ನು ಇದೇ ದಿನದಂದು ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಅವರ ಹುಟ್ಟುಹಬ್ಬ ಕೂಡ ಇದ್ದು, ತೆಂಡೂಲ್ಕರ್ ಅವರಿಗೂ ಕೂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಾಮಾಜಿಕ ಜಾಲತಾಣದಲ್ಲಿನ ತನ್ನ ಅಧಿಕೃತ ಖಾತೆಗಳ ಮೂಲಕ ಶುಭಾಶಯ ಕೋರಿದೆ. ದಶಕಗಳ ಕಾಲ ಬಿಲಿಯನ್ ಕನಸುಗಳನ್ನು ತನ್ನ ಹೆಗಲ ಮೇಲೆ ಹೊತ್ತ ಕ್ರಿಕೆಟ್ ಕ್ಷೇತ್ರದ ನಿಜವಾದ ದಂತಕತೆ ಸಚಿನ್ ತೆಂಡೂಲ್ಕರ್ ಅವರಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರೆದುಕೊಂಡಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೆಂಡೂಲ್ಕರ್ ಅವರ ಕೆಲ ಚಿತ್ರಗಳನ್ನು ಹಂಚಿಕೊಂಡಿದೆ.