ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿರುವ ಆರ್ಸಿಬಿ 18ನೇ ಆವೃತ್ತಿಯ ಫೈನಲ್ಗೆ ಅರ್ಹತೆ ಪಡೆದಿದೆ. ಈಗ ಪ್ರಶಸ್ತಿ ಸುತ್ತಿನ ಕಾದಾಟಕ್ಕೆ ತಯಾರಿ ನಡೆಸಿದೆ. ಇನ್ನು ಶುಕ್ರವಾರ ಎಲಿಮಿನೇಟರ್ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಹಾಗೂ ಗುಜರಾತ್ ಟೈಟಾನ್ಸ್ ತಂಡಗಳು ಎಲಿಮಿನೇಟರ್ನಲ್ಲಿ ಫೈಟ್ ನಡೆಸಲಿವೆ. ಈ ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಎರಡನೇ ಕ್ವಾಲಿಫೈಯರ್ನಲ್ಲಿ ಪಂಜಾಬ್ ಕಿಂಗ್ಸ್ ಸವಾಲು ಎದುರಿಸಲಿದೆ. ಹೀಗಾಗಿ ಇಂದಿನ ಪಂದ್ಯದಲ್ಲಿ ಎರಡೂ ತಂಡಗಳಿಗೆ ಸೋಲು ಎನ್ನುವ ಮಾತೇ ಇಲ್ಲ.
ಮುಲ್ಲಾನಪುರ್ ಪಿಚ್ ಬ್ಯಾಟರ್ ಹಾಗೂ ಬೌಲರ್ಗಳಿಗೆ ನೆರವು ನೀಡಲಿದೆ. ಈ ಪಿಚ್ ಮೇಲೆ 200ರ ಟಾರ್ಗೆಟ್ ಇಟ್ಟುಕೊಂಡು ಬ್ಯಾಟ್ ಮಾಡುವುದು ಕಷ್ಟ. ಸ್ಪರ್ಧಾತ್ಮಕ ಮೊತ್ತದ ಬೆನ್ನು ಹತ್ತಿದರೆ ಸುಲಭವಾಗಿ ಕಲೆ ಹಾಕಬಹುದು. ಈ ಮೈದಾನದಲ್ಲಿ ಆಕ್ರಮಣಕಾರಿಯಾಗಿ ಬ್ಯಾಟ್ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಈ ಪಂದ್ಯದಲ್ಲೂ ಟಾಸ್ ಮಹತ್ವದ ಪಾತ್ರವನ್ನು ವಹಿಸಲಿದೆ. ಟಾಸ್ ಗೆದ್ದ ತಂಡ ನಿಶ್ಚಿತವಾಗಿ ಫೀಲ್ಡಿಂಗ್ ಮಾಡಲು ಮುಂದಾಗಬಹುದು.

ಮುಂಬೈ ಇಂಡಿಯನ್ಸ್ ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದೆ. ಈ ಸ್ಟಾರ್ ಆಟಗಾರರು ತಮ್ಮ ಶಿಸ್ತು ಬದ್ಧ ಆಟದಿಂದ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿದ್ದಾರೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ರೋಹಿತ್ ಶರ್ಮಾ, ಜಾನಿ ಬೇರ್ಸ್ಟೊ ತಂಡಕ್ಕೆ ತಮ್ಮ ಅನುಭವವನ್ನು ಧಾರೆ ಎರೆಯಬಹುದು. ಇವರು ಆರಂಭದಲ್ಲಿ ಬಿಗ್ ಇನಿಂಗ್ಸ್ ಕಟ್ಟಿದರೆ ಗೆಲುವು ಆಸೆಗೆ ಬುನಾದಿ ಹಾಕಿದ ಹಾಗೆ ಆಗುತ್ತದೆ. ಇನ್ನು ಮಧ್ಯಮ ಕ್ರಮಾಂಕದಲ್ಲಿ ತಿಲಕ್ ವರ್ಮಾ, ಸೂರ್ಯಕುಮರ್ ಯಾದವ್, ಹಾರ್ದಿಕ್ ಪಾಂಡ್ಯ ತಂಡದ ಅಗತ್ಯದ ತಕ್ಕಂತೆ ಬ್ಯಾಟ್ ಮಾಡಬೇಕು. ಅಂದಾಗ ದೊಡ್ಡ ಮೊತ್ತದ ಕನಸು ನನಸಾಗುತ್ತದೆ.
ಮುಂಬೈ ತಂಡದಲ್ಲಿ ಬರೀ ಸ್ಟಾರ್ ಬ್ಯಾಟರ್ಗಳು ಅಷ್ಟೇ ಅಲ್ಲ ವಿಶ್ವ ದರ್ಜೆಯ ಬೌಲರ್ಗಳು ಸಹ ಇದ್ದಾರೆ. ಇವರು ಪಂದ್ಯದ ಗತಿಯನ್ನು ಬುಡಮೇಲು ಮಾಡಬಹುದು. ವೇಗದ ಬೌಲಿಂಗ್ ವಿಭಾಗದಲ್ಲಿ ದೀಪಕ್ ಚಹಾರ್, ಟ್ರೆಂಟ್ ಬೌಲ್ಟ್, ಜಸ್ಪ್ರಿತ್ ಬುಮ್ರಾ ಬಿಗುವಿನ ದಾಳಿ ನಡೆಸಿ ತಂಡಕ್ಕೆ ನೆರವಾಗಬಲ್ಲರು. ಸ್ಪಿನ್ ಬೌಲಿಂಗ್ನಲ್ಲಿ ಮಿಚೆಲ್ ಸ್ಯಾಂಟ್ನರ್, ಕರಣ್ ಶರ್ಮಾ ಎದುರಾಳಿ ಬ್ಯಾಟರ್ಗಳಿಗೆ ಕಾಟ ನೀಡಬಲ್ಲರು.
ಗುಜರಾತ್ ಟೈಟಾನ್ಸ್ ತಂಡದ ಟಾಪ್ ಆರ್ಡರ್ ಬಲಾಢ್ಯವಾಗಿದೆ. ಆರಂಭಿಕರಾಗಿ ಕಾಣಿಸಿಕೊಳ್ಳುವ ಸಾಯಿ ಸುದರ್ಶನ್ ಪ್ರಸಕ್ತ ಲೀಗ್ನಲ್ಲಿ ಅತಿ ಹೆಚ್ಚು ರನ್ ಕಲೆ ಹಾಕಿದ ಬೌಲರ್. ಇನ್ನು ಇವರ ಹಿಂದೆಯೇ ನಾಯಕ ಶುಭಮನ್ ಗಿಲ್ ಇದ್ದಾರೆ. ಜೋಸ್ ಬಟ್ಲರ್ ಸ್ಥಾನವನ್ನು ಕುಸಾಲ್ ಮೆಂಡೀಸ್ ತುಂಬಲಿದ್ದಾರೆ. ಶೆರ್ಫೇನ್ ರುದರ್ಫೋರ್ಡ್, ಶಾರೂಖ್ ಖಾನ್, ರಾಹುಲ್ ತೆವಾಟಿಯಾ ಸಮಯೋಚಿತ ಆಟವನ್ನು ಆಡಿದರೆ ಗೆಲುವಿನ ಕನಸು ನನಸಾಗುತ್ತದೆ.

ಗುಜರಾತ್ ತಂಡದಲ್ಲೂ ಸ್ಟಾರ್ ಬೌಲರ್ಗಳು ಇದ್ದಾರೆ. ವೇಗದ ಬೌಲರ್ ಮೊಹಮ್ಮದ್ ಸಿರಾಜ್, ಪ್ರಸಕ್ತ ಲೀಗ್ನಲ್ಲಿ ಅತಿ ಹೆಚ್ಚು ಡಾಟ್ ಬೌಲ್ಗಳನ್ನು ಹಾಕಿದ ಬೌಲರ್. ಇನ್ನು ಇವರಿಗೆ ಆರಂಭದಲ್ಲಿ ಅರ್ಷದ್ ಖಾನ್ ಉತ್ತಮ ಸಾಥ್ ನೀಡಬಲ್ಲರು. ಪವರ್ ಪ್ಲೇ ಮುಕ್ತಾಯವಾಗುತ್ತಿದ್ದಂತೆ ಕನ್ನಡಿಗ ಪ್ರಸಿದ್ಧ್ ಕೃಷ್ಣಾ ಬೌಲಿಂಗ್ನಲ್ಲಿ ಕಾಣಿಸಿಕೊಳ್ಳಬಲ್ಲರು. ಇವರು ಲೀಗ್ನಲ್ಲಿ ಸದ್ಯ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್. ಇನ್ನು ಈ ತಂಡದಲ್ಲಿ ವಿಶ್ವದ ಖ್ಯಾತ ಸ್ಪಿನ್ ಬೌಲರ್ ರಶೀದ್ ಖಾನ್, ಸಾಯಿ ಕಿಶೋರ್ ಇದ್ದು ಪಿರ್ಕಿ ಕಮಾಲ್ ನಡೆಸಬೇಕಿದೆ.