ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ 6155 ದಿನಗಳ ಬಳಿಕ ಚೆನ್ನೈನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಮಣಿಸಿದೆ. ಈ ಗೆಲುವು ನಿಶ್ಚಿತವಾಗಿ ತಂಡದ ಮನೋಬಲವನ್ನು ಹೆಚ್ಚಿಸಿದೆ. ಆಡಿದ 2 ಪಂದ್ಯಗಳಲ್ಲಿ ಜಯ ದಾಖಲಿಸಿರುವ ಆರ್ಸಿಬಿ ಅಂಕ ಪಟ್ಟಿಯಲ್ಲಿ ಅಗ್ರ ಸ್ಥಾನ ಕಾಯ್ದುಕೊಂಡಿದೆ. ಈ ಗೆಲುವಿನಲ್ಲಿ ಆರ್ಸಿಬಿ ಪರ ಸಂಘಟಿತ ಆಟ ಕಂಡು ಬಂದಿದೆ. 17 ವರ್ಷಗಳ ಬಳಿಕ ಬೆಂಗಳೂರು ತಂಡ, ಚೆನ್ನೈನಲ್ಲಿ ಆರ್ಭಟ ನಡೆಸಿದೆ. ಈ ಗೆಲುವಿಗೆ ಪ್ರಮುಖವಾಗಿ 5 ಕಾರಣಗಳು ಎದ್ದು ಕಾಣುತ್ತವೆ.
ಚೆನ್ನೈನ ಎಂ ಎ ಚಿದಂಬರಂ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 7 ವಿಕೆಟ್ಗೆ 196 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 20 ಓವರ್ಗಳಲ್ಲಿ 8 ವಿಕೆಟ್ಗೆ 146 ರನ್ ಸೇರಿಸಿತು. 50 ರನ್ ಜಯ ಸಾಧಿಸಿರು ಆರ್ಸಿಬಿ ಅಬ್ಬರಿಸಿದೆ. ಈ ಗೆಲುವಿಗೆ ಕಾರಣವಾದ ಆ ಐದು ಅಂಶಗಳ ಬಗ್ಗೆ ವರದಿ ಇಲ್ಲಿದೆ.

ಆರ್ಸಿಬಿ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಮನಮೋಹಕ ಪ್ರದರ್ಶನ ನೀಡಿದೆ. ಇದಕ್ಕೆ ಕಾರಣ ಆರ್ಸಿಬಿ ಬ್ಯಾಟಿಂಗ್ ಹಾಗೂ ಬೌಲಿಂಗ್ನ ಪವರ್ ಪ್ಲೇನಲ್ಲಿ ಪವರ್ ಫುಲ್ ಆಟವನ್ನು ಆಡಿದೆ. ಇದು ಗೆಲುವಿನಲ್ಲಿ ಪ್ರಮುಖವಾಗಿ ಕಂಡು ಬಂದಿದೆ. ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡ ಮೊದಲ 6 ಓವರ್ಗಳಲ್ಲಿ ಸ್ಥಿರ ಪ್ರದರ್ಶನ ನೀಡಿತು. ಈ ವೇಳೆ 9.53ರ ಸರಾಸರಿಯಲ್ಲಿ 56 ರನ್ ಕಲೆ ಹಾಕಿತು. ಈ ವೇಳೆ ಕೇವಲ ಒಂದು ವಿಕೆಟ್ ಮಾತ್ರ ಕಳೆದುಕೊಂಡಿತ್ತು. ಈ ವೇಳೆ ಆರಂಭಿಕ ಫಿಲ್ ಸಾಲ್ಟ್ ಕ್ಲಾಸಿಕ್ ಇನಿಂಗ್ಸ್ ಆಡಿ ತಂಡದ ಆರಂಭವನ್ನು ಉತ್ತಮ ಗೊಳಿಸಿದರು.
ಇನ್ನು ಆರ್ಸಿಬಿ ಬೌಲಿಂಗ್ನಲ್ಲೂ ಪವರ್ ಫುಲ್ ಪ್ರದರ್ಶನ ನೀಡಿತು. ಈ ವೇಳೆ ಮೊದಲ 6 ಓವರ್ಗಳಲ್ಲಿ ಬೆಂಗಳೂರು ತಂಡ 30 ರನ್ ನೀಡಿ ಚೆನ್ನೈ ತಂಡದ ಪ್ರಮುಖ ಮೂರು ವಿಕೆಟ್ ಕಬಳಿಸಿತು. ಚೆನ್ನೈ ತಂಡದ ಟಾಪ್ ಆರ್ಡರ್ ಬ್ಯಾಟರ್ಗಳು ಆರ್ಸಿಬಿ ವೇಗಿಗಳ ಕರಾರುವಕ್ ದಾಳಿಗೆ ಕಂಗಾಲಾದರು. ಜೋಶ್ ಹ್ಯಾಜಲ್ವುಡ್ ತಾವು ಎಸೆದ ಮೊದಲ ಓವರ್ನಲ್ಲಿ ಎರಡು ವಿಕೆಟ್ ಕಬಳಿಸಿದರು. ಭುವನೇಶ್ವರ್ ಕುಮಾರ್ ಸಹ ಪವರ್ ಪ್ಲೇನಲ್ಲಿ ಒಂದು ವಿಕೆಟ್ ಕಬಳಿಸಿದರು.
ಮಧ್ಯಮ ಕ್ರಮಾಂಕದ ಬ್ಯಾಟರ್ಗಳು ಜವಾಬ್ದಾರಿಯುತ ಆಟವನ್ನು ಆಡಿದರು. ಇದು ತಂಡ ಸ್ಪರ್ಧಾತ್ಮಕ ಮೊತ್ತವನ್ನು ಕಲೆ ಹಾಕಲು ಕಾರಣವಾಯಿತು. ನಾಯಕನಾಗಿ ರಜತ್ ಪಟಿದಾರ್ ಅರ್ಧಶತಕ ಬಾರಿಸಿ ಅಬ್ಬರಿಸಿದರು. ಮೂರನೇ ಕ್ರಮಾಂಕದಲ್ಲಿ ದೇವದತ್ ಪಡಿಕ್ಕಲ್ 14 ಎಸೆತಗಳಲ್ಲಿ 27 ರನ್ ಬಾರಿಸಿದರು. ಲಿಯಾಮ್ ಲಿವಿಂಗ್ಸ್ಟೋನ್ 10, ಜಿತೇಶ್ ಶರ್ಮಾ 12 ರನ್ ಬಾರಿಸಿದರು. ಕೆಳ ಮಧ್ಯಮ ಕ್ರಮಾಂಕದಲ್ಲಿ ಟೀಮ್ ಡೇವಿಡ್ ಆರ್ಭಟಿಸಿದರು. ತಂಡದಲ್ಲಿ ಇನ್ನು ವಿದೇಶಿ ಆಟಗಾರರು ಬೇರೆಯವರು ಇದ್ದರೂ ಇವರನ್ನು ಏಕೆ ಆಯ್ಕೆ ಮಾಡಲಾಗಿದೆ ಎಂಬುದನ್ನು ಸಾರಿ ಹೇಳಿದರು. ಕೊನೆಯ ಓವರ್ನಲ್ಲಿ ಇವರು ಮೂರು ಸಿಕ್ಸರ್ ಬಾರಿಸಿ ತಂಡದ ಮೊತ್ತವನ್ನು ಹಿಗ್ಗಿಸಿದರು.
ಪಂದ್ಯ ಆರಂಭವಾಗುವ ಮುನ್ನ ಎಲ್ಲರ ಮನದಲ್ಲಿದ್ದ ಪ್ರಶ್ನೆ ಒಂದೇ ಆಗಿತ್ತು. ಆರ್ಸಿಬಿ ಹೇಗೆ ಚೆನ್ನೈನ ಮೂವರು ಸ್ಪಿನ್ ಬೌಲರ್ಗಳನ್ನು ಎದುರಿಸುತ್ತದೆ ಎಂದು. ಈ ಪ್ರಶ್ನೆಗೆ ಆರ್ಸಿಬಿ ಬ್ಯಾಟರ್ಗಳು ಮೈದಾನದಲ್ಲೇ ಉತ್ತರ ನೀಡಿದರು. ನೂರ್ ಅಹ್ಮದ್ ಅವರನ್ನು ಎಚ್ಚರಿಕೆಯಿಂದ ಆಡಿದ ಬ್ಯಾಟರ್ಗಳು ಕೆಟ್ಟ ಎಸೆತವನ್ನು ದಂಡಿಸಿದರು. ಇವರು ಎಸೆದ 4 ಓವರ್ಗಳಲ್ಲಿ 36 ರನ್ ಸಿಡಿಸಿದರು. ಇದರಲ್ಲಿ 1 ಬೌಂಡರಿ, ಮೂರು ಸಿಕ್ಸರ್ ಸೇರಿತ್ತು.

ಇನ್ನು ರವೀಂದ್ರ ಜಡೇಜಾ ಹಾಗೂ ಆರ್ ಅಶ್ವಿನ್ ವಿರುದ್ಧ ಪಕ್ಕಾ ಪ್ಲ್ಯಾನ್ ಪ್ರಕಾರ ಬ್ಯಾಟ್ ಮಾಡಿದ ಆರ್ಸಿಬಿ ಅಬ್ಬರಿಸಿತು. ಆರ್ಸಿಬಿ ವಿರುದ್ಧ ಬೆಸ್ಟ್ ಬೌಲರ್ ಆಗಿದ್ದ ಜಡೇಜಾ ಅವರನ್ನು ದಂಡಿಸಿತು. ಈ ವೇಳೆ ಇವರು ಎಸೆದ 3 ಓವರ್ಗಳಲ್ಲಿ ಆರ್ಸಿಬಿ ಬ್ಯಾಟರ್ಸ್ 37 ರನ್ ಚಚ್ಚಿದ್ರು. ಇನ್ನು ಅಶ್ವಿನ್ 2 ಓವರ್ಗಳಲ್ಲಿ 22 ರನ್ ನೀಡಿ 1 ವಿಕೆಟ್ ಕಬಳಿಸಿದರು.
ರಜತ್ ಪಟಿದಾರ್ ತಮ್ಮಲ್ಲಿ ನಾಯಕತ್ವದ ಗುಣಗಳು ಇವೆ ಎಂಬುದನ್ನು ಸಾಬೀತು ಪಡಿಸಿದರು. ಪವರ್ ಪ್ಲೇನಲ್ಲಿ ಭುವನೇಶ್ವರ್ ಕುಮಾರ್ಗೆ ಮೂರು ಓವರ್ ನೀಡಿ ಸೈ ಎನಿಸಿಕೊಂಡರು. ಲೆಫ್ಟ್ ಹ್ಯಾಂಡ್ ಬ್ಯಾಟರ್ಗಳು ಬ್ಯಾಟ್ ಮಾಡಲು ಕ್ರೀಸ್ಗೆ ಬಂದಾಗ ರಿಸ್ಕ್ ತೆಗೆದುಕೊಂಡು ಸುಯೇಶ್ ಶರ್ಮಾ ಅವರಿಗೆ ಚೆಂಡು ನೀಡಿದರು. ಇನ್ನು ಲಿಯಾಮ್ ಲಿವಿಂಗ್ ಸ್ಟೋನ್ ಅವರನ್ನು ಸರಿಯಾಗಿ ಬಳಸಿಕೊಂಡರು. ಇದೆಲ್ಲಕ್ಕಿಂತ ದೊಡ್ಡದು ಕೆಕೆಆರ್ ವಿರುದ್ಧ ಮೂರು ವಿಕೆಟ್ ಪಡೆದಿದ್ದ ಕೃನಾಲ್ ಪಾಂಡ್ಯ ಅವರನ್ನು ಚೆನ್ನಾಗಿ ಬಳಸಿಕೊಂಡರು. ಇವರು ತಮ್ಮ ಮೊದಲ ಓವರ್ 15 ನೇ ಓವರ್ನಲ್ಲಿ ಬೌಲಿಂಗ್ ಬಂದರು. ಇವರನ್ನು ಬೇಗ ತರಬೇಕು ಎಂಬ ಯಾವುದೇ ಒತ್ತಡಕ್ಕೆ ರಜತ್ ಒಳಗಾಗಲಿಲ್ಲ. ಅಲ್ಲದೆ ಒಳ್ಳೆಯ ಫೀಲ್ಡ್ ಸೆಟ್ ಮಾಡಿ ಎದುರಾಳಿಗೆ ಖೆಡ್ಡ ತೋಡಿದರು.

ಮೊದಲ ಪಂದ್ಯಕ್ಕಿಂತ ಆರ್ಸಿಬಿ ತಂಡದ ಫೀಲ್ಡಿಂಗ್ ಎರಡನೇ ಪಂದ್ಯದಲ್ಲಿ ಬೊಂಬಾಟ್ ಆಗಿತ್ತು. ಯಾವುದೇ ಕ್ಯಾಚ್ಗಳನ್ನು ಕೈ ಚೆಲ್ಲದೇ ಸಿಕ್ಕ ಅವಕಾಶವನ್ನು ಚೆನ್ನಾಗಿ ಫೀಲ್ಡರಗಳು ಬಳಸಿಕೊಂಡರು. ಬದಲಿ ಆಟಗಾರನಾಗಿ ಮೈದನಾಕ್ಕೆ ಬಂದಿದ್ದ ಮನೋಜ್ ಭಾಂಡಗೆ ಸೊಗಸಾದ ಕ್ಯಾಚ್ ಪಡೆದರು. ಜೋಶ್ ಹ್ಯಾಜಲ್ವುಡ್ ಎಸೆತದಲ್ಲಿ ರುತುರಾಜ್ ಗಾಯಕ್ವಾಡ್ ಅವರ ಡಿಪ್ ಫೈನ್ ಲೆಗ್ನಲ್ಲಿ ಮನೋಜ್ ಉತ್ತಮ ಕ್ಯಾಚ್ ಪಡೆದರು. ಇನ್ನು ಅನುಭವಿ ಬ್ಯಾಟರ್ ಫಿಲ್ ಸಾಲ್ಟ್ ಕ್ಷೇತ್ರರಕ್ಷಣೆಯಲ್ಲಿ ಅಬ್ಬರಿಸಿದರು. ಇವರು ಈ ಪಂದ್ಯದಲ್ಲಿ ಮೂರು ಕ್ಯಾಚ್ಗಳನ್ನು ಪಡೆದು ಮಿಂಚಿದರು. ಈ ಮೂಲಕ ಬೆಂಗಳೂರು ಸಂಘಟಿತ ಆಟದ ಪ್ರದರ್ಶನ ನೀಡಿ ಎರಡನೇ ಗೆಲುವು ದಾಖಲಿಸಿದೆ.
ಇನ್ನು ಆರ್ಸಿಬಿ ತಂಡದ ಬೌಲರ್ಗಳ ಎಕನಾಮಿ ಚೆನ್ನಾಗಿತ್ತು. ಕೃನಾಲ್ ಪಾಂಡ್ಯ ಅವರನ್ನು ಬಿಟ್ಟರೆ ಬೇರೆ ಯಾವ ಬೌಲರ್ ಈ ವಿಷಯದಲ್ಲಿ ಡಬಲ್ ಡಿಜಿಟ್ ಮುಟ್ಟಲೇ ಇಲ್ಲ.