2023ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್)ನ 24ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳು ಸೋಮವಾರ, ಏಪ್ರಿಲ್ 17ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮುಖಾಮುಖಿಯಾಗಲಿವೆ.
ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಸಿಎಸ್ಕೆ ತಂಡಗಳ ನಡುವಿನ ಪಂದ್ಯವೆಂದರೆ, ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಅಭಿಮಾನಿಗಳಿಗೆ ಒಂದು ರೀತಿಯ ಪ್ರತಿಷ್ಠೆಯ ಕಾದಾಟವಾಗಿರುತ್ತದೆ. ಈ ಪಂದ್ಯದಲ್ಲಿ ಎರಡು ರಾಜ್ಯಗಳ ಜನರ ಭಾವನಾತ್ಮಕ ಕ್ರೀಡಾ ಯುದ್ಧವಾಗಿದೆ.

ಇದೇ ವೇಳೆ ಆರ್ಸಿಬಿ ಮತ್ತು ಸಿಎಸ್ಕೆ ನಡುವಿನ ಹೈ-ವೋಲ್ಟೇಜ್ ಪಂದ್ಯಕ್ಕೂ ಮುನ್ನ ಮಾಜಿ ಸಹ ಆಟಗಾರರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಅಭ್ಯಾಸದ ಅವಧಿಯಲ್ಲಿ ಪರಸ್ಪರ ಭೇಟಿಯಾಗಿ ಕುಶಲೋಪರಿ ನಡೆಸಿದರು. ಅಲ್ಲದೆ ಮುಖಾಮುಖಿಯಾಗುತ್ತಿದ್ದಂತೆಯೇ 2011ರ ವಿಶ್ವಕಪ್ ಗೆದ್ದ ಭಾರತದ ಮಾಜಿ ನಾಯಕನನ್ನು ವಿರಾಟ್ ಕೊಹ್ಲಿ ತಬ್ಬಿಕೊಳ್ಳುತ್ತಿರುವುದು ಭಾರೀ ಸದ್ದು ಮಾಡಿದೆ.
ಸೌರವ್ ಗಂಗೂಲಿ ಕೈಕುಲುಕದ ಕೊಹ್ಲಿ
ಇದೀಗ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಭೇಟಿಯಾಗಿ ತಬ್ಬಿಕೊಂಡು ತಮ್ಮ ಅನ್ಯೋನ್ಯತೆಯನ್ನು ಸಾಬೀತುಪಡಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ವಿರುದ್ಧದ ಸಮಯದಲ್ಲಿ ವಿರಾಟ್ ಕೊಹ್ಲಿ ಬಿಸಿಸಿಐ ಮಾಜಿ ಅಧ್ಯಕ್ಷ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರ ಕೈಕುಲುಕದೆ ಮುಂದೆ ಸಾಗಿದರು.
ಅದಕ್ಕೂ ಮುನ್ನ ವಿರಾಟ್ ಕೊಹ್ಲಿ ಬ್ಯಾಟಿಂಗ್ಗೆ ಅಣಿಯಾಗಿ ಖುರ್ಚಿಯಲ್ಲಿ ಕಾಲು ಮೇಲೆ ಕಾಲು ಹಾಕಿಕೊಂಡು ಕುಳಿತಿದ್ದರು. ಆಗ ಸೌರವ್ ಗಂಗೂಲಿ ಅವರ ಮುಂದೇನೆ ಸಾಗಿದಾಗ ಕೊಹ್ಲಿ ಗುರಾಯಿಸಿಕೊಂಡು ನೋಡುತ್ತಿರುವುದು ಕಂಡುಬಂದಿದೆ. ಅರ್ಧಶತಕ ಬಾರಿಸಿದಾಗಲೂ ಆಕ್ರಮಣಕಾರಿಯಾಗಿ ಆಚರಣೆ ಮಾಡಿದರು. ಫೀಲ್ಡಿಂಗ್ ಮಾಡುತ್ತಿದ್ದಾಗಲೂ ಸೌರವ್ ಗಂಗೂಲಿಯತ್ತ ಸಿಟ್ಟಿನಲ್ಲಿ ನೋಡುತ್ತಿರುವುದನ್ನು ತಪ್ಪಿಸಲಿಲ್ಲ.
ಆದರೆ, ಭಾರತ ತಂಡದ ಮಾಜಿ ನಾಯಕ ಎಂಎಸ್ ಧೋನಿಯೊಂದಿಗೆ ವಿರಾಟ್ ಕೊಹ್ಲಿ ಆತ್ಮೀಯವಾಗಿ ಬೆರೆತಿರುವುದನ್ನು ನೋಡಿ ಆರ್ಸಿಬಿ ಮತ್ತು ಸಿಎಸ್ಕೆ ಅಭಿಮಾನಿಗಳು ಪಂದ್ಯ ಮೀರಿ ಖುಷಿಪಟ್ಟಿದ್ದಾರೆ. ಒಂದು ಸಮಯದಲ್ಲಿ ವಿರಾಟ್ ಕೊಹ್ಲಿ ಭಾರತ ತಂಡದ ನಾಯಕತ್ವದಿಂದ ಕೆಳಗಿಳಿದಾಗ ಎಂಎಸ್ ಧೋನಿ ಒಬ್ಬರೇ ನನಗೆ ಸಂದೇಶ ಕಳಿಸಿ ಧೈರ್ಯ ತುಂಬಿದ್ದರು ಎಂದು ಸ್ವತಃ ವಿರಾಟ್ ಕೊಹ್ಲಿಯೇ ಹೇಳಿಕೊಂಡಿದ್ದಾರೆ.
ಎಂಎಸ್ ಧೋನಿ ನಾಯಕನಾಗಿದ್ದಾಗಲೇ ತಾನು ಅವರಿಂದ ನಾಯಕತ್ವದ ಗುಣಗಳನ್ನು ಕಲಿತಿದ್ದೇನೆ ಎಂದು ಬಹಿರಂಗಪಡಿಸಿದ್ದರು. ಒಟ್ಟಾರೆ ಈ ಇಬ್ಬರು ದಿಗ್ಗಜ ಆಟಗಾರರ ನಡುವಿನ ಬಾಂಧವ್ಯ ಉತ್ತಮವಾಗಿದೆ ಎಂದು ಹೇಳಬಹುದು.
ಆರ್ಸಿಬಿ vs ಸಿಎಸ್ಕೆ ರಣಾಂಗಣ
ಸೋಮವಾರದ ಪಂದ್ಯದ ಕುರಿತು ಮಾತನಾಡುವುದಾರೆ, ಸಿಎಸ್ಕೆ ತಂಡದಲ್ಲಿ ಗಾಯಾಳು ಆಟಗಾರರ ಸಂಖ್ಯೆ ಹೆಚ್ಚಾಗಿದ್ದು, ದೀಪಕ್ ಚಹಾರ್, ಬೆನ್ ಸ್ಟೋಕ್ಸ್, ಸಿಸಂಡಾ ಮಗಲಾ ಮತ್ತು ಸಿಮರ್ಜೀತ್ ಸಿಂಗ್ ಆರ್ಸಿಬಿ ವಿರುದ್ಧದ ಪಂದ್ಯಕ್ಕೆ ಸಂಪೂರ್ಣ ಫಿಟ್ ಆಗಿಲ್ಲ.
ಮಥೀಶ್ ಪತಿರಾನ ಇತ್ತೀಚೆಗೆ ಕೋವಿಡ್-19ನಿಂದ ಚೇತರಿಸಿಕೊಂಡಿದ್ದರೆ, ಮಹೀಶ್ ತೀಕ್ಷಣ ತನ್ನ ಅಂತಾರಾಷ್ಟ್ರೀಯ ಕರ್ತವ್ಯವನ್ನು ಪೂರ್ಣಗೊಳಿಸಿದ ನಂತರ ಸಿಎಸ್ಕೆ ತಂಡಕ್ಕೆ ಮರಳಿದ್ದಾರೆ.

ಹಾಗೆ ನೋಡಿದತರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವೂ ಗಾಯಾಳುಗಳಿಗೆ ತುತ್ತಾಗಿದ್ದರೂ, ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕಿಂತ ಉತ್ತಮ ಸ್ಥಿತಿಯಲ್ಲಿದೆ. ಮೊಹಮ್ಮದ್ ಸಿರಾಜ್ ಮತ್ತು ವೈಶಾಕ್ ವಿಜಯಕುಮಾರ್ ಬೌಲಿಂಗ್ ದಾಳಿಯಲ್ಲಿ ಪ್ರಭಾವಿ ಪ್ರದರ್ಶನ ನೀಡುತ್ತಿದ್ದು, ಸಿಎಸ್ಕೆ ವಿರುದ್ಧವೂ ಅದೇ ಆಟವನದನು ಮುಂದುವರೆಸಲು ಎದುರು ನೋಡುತ್ತಿದ್ದಾರೆ.
ಎಂಎಸ್ ಧೋನಿ ಮತ್ತು ವಿರಾಟ್ ಕೊಹ್ಲಿ ಭಾರತೀಯ ಕ್ರಿಕೆಟ್ನ ಇಬ್ಬರು ಶ್ರೇಷ್ಠ ಕ್ರಿಕೆಟಿಗರಾಗಿದ್ದು, ಹಾಗಾಗಿ ಸ್ಟೇಡಿಯಂನಲ್ಲಿ ಇದೊಂದು ಅದ್ಭುತ ವಾತಾವರಣವನ್ನು ಮೂಡಿಸುತ್ತದೆ. ಎಲ್ಲರನ್ನೂ ಮತ್ತೆ ನೋಡಲು ಮತ್ತು ನಂಬಲಾಗದ ವಾತಾವರಣದಲ್ಲಿ ಸ್ಪರ್ಧಿಸಲು ಇದು ಉತ್ತಮವಾಗಿರುತ್ತದೆ.
ಆರ್ಸಿಬಿ ಮತ್ತು ಸಿಡಸ್ಕೆ ಪಂದ್ಯಕ್ಕಾಗಿ ಎಂ ಚಿನ್ನಸ್ವಾಮಿ ಸ್ಟೇಡಿಯಂ ತುಂಬಿ ತುಳುಕುವ ನಿರೀಕ್ಷೆಯಿದ್ದು, ಹಲವು ಸೂಪರ್ಸ್ಟಾರ್ ಕ್ರಿಕೆಟಿಗರು ಪರಸ್ಪರ ಮುಖಾಮುಖಿಯಾಗಲಿದ್ದಾರೆ. ಸಿಎಸ್ಕೆ ಪ್ರಸ್ತುತ ಐಪಿಎಲ್ ಅಂಕಪಟ್ಟಿಯಲ್ಲಿ ನಾಲ್ಕು ಪಂದ್ಯಗಳಿಂದ 4 ಅಂಕಗಳೊಂದಿಗೆ ಆರನೇ ಸ್ಥಾನದಲ್ಲಿದ್ದರೆ, ಆರ್ಸಿಬಿ ಅಷ್ಟೇ ಪಂದ್ಯ ಹಾಗೂ ಅಂಕಗಳೊಂದಿಗೆ 7ನೇ ಸ್ಥಾನದಲ್ಲಿದೆ.