ಅಹಮದಾಬಾದ್: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಈ ಆವೃತ್ತಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿದೆ. ಆದರೆ ಗುರುವಾರ ಗುಜರಾತ್ ಟೈಟಾನ್ಸ್ (ಜಿಟಿ) ವಿರುದ್ಧದ ಪಂದ್ಯದಲ್ಲಿ ಮುಗ್ಗರಿಸಿದೆ. 19ನೇ ಆವೃತ್ತಿ ಐಪಿಎಲ್ನ 42ನೇ ಪಂದ್ಯದಲ್ಲಿ ರಜತ್ ಪಾಟಿದಾರ್ ಪಡೆ 4 ವಿಕೆಟ್ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಸೋಲು ಕಂಡರೂ ಆರ್ಸಿಬಿ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಭದ್ರ ಪಡಿಸಿಕೊಂಡಿದೆ. ಜಿಟಿ ಐದನೇ ಸ್ಥಾನದಲ್ಲಿದೆ.
ನರೇಂದ್ರ ಮೋದಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಆರಂಭಿಕ ಜಾಕೊಬ್ ಬೆಥೆಲ್ ಮತ್ತೊಮ್ಮೆ ನಿರಾಸೆ ಅನುಭವಿಸಿದರು. ಇವರು ತಮ್ಮ ಮೇಲೆ ತಂಡ ಇಟ್ಟ ನಂಬಿಕೆಗೆ ಪೂರಕವಾಗಿ ಬ್ಯಾಟ್ ಮಾಡಲಿಲ್ಲ. ಈ ಹಂತದಲ್ಲಿ ಭರ್ಜರಿಯಾಗಿ ಆಡುತ್ತಿದ್ದ ವಿರಾಟ್ ಕೊಹ್ಲಿ ಸಹ ಇಲ್ಲದ ಹೊಡೆತಕ್ಕೆ ಮುಂದಾಗಿ ರಬಾಡ ಎಸೆತದಲ್ಲಿ ಔಟ್ ಆದರು. ಇವರು 13 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 28 ರನ್ ಸಿಡಿಸಿದರು.

ಮೂರನೇ ವಿಕೆಟ್ಗೆ ರಜತ್ ಪಾಟಿದಾರ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ ಕೊಂಚ ಸಮಯೋಚಿತ ಆಟದ ಪ್ರದರ್ಶನ ನೀಡಿತು. ಆದರೆ ಈ ಜೋಡಿ ದೊಡ್ಡ ಇನಿಂಗ್ಸ್ ಕಟ್ಟುವಲ್ಲಿ ಎಡವಿತು. ರಜತ್ ಪಾಟಿದಾರ್ 19 ರನ್ ಬಾರಿಸಿದ್ದಾಗ ಅರ್ಷದ್ ಖಾನ್ ಎಸೆತದಲ್ಲಿ ಇಲ್ಲದ ಹೊಡೆತಕ್ಕೆ ಮುಂದಾಗಿ ಜೇಸನ್ ಹೋಲ್ಡರ್ ಹಿಡಿದ ವಿವಾದಿತ ಕ್ಯಾಚ್ಗೆ ಬಲಿಯಾದರು. ಈ ಜೋಡಿ 26 ಎಸೆತಗಳಲ್ಲಿ 44 ರನ್ ಸೇರಿಸಿತು.

ನಂತರ ಬಂದ ಬ್ಯಾಟರ್ಗಳು ದೇವದತ್ ಪಡಿಕ್ಕಲ್ಗೆ ಉತ್ತಮ ಸಾಥ್ ನೀಡಲಿಲ್ಲ. ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದೇವದತ್ 24 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಆರ್ಸಿಬಿ 19.2 ಓವರ್ಗಳಲ್ಲಿ 155 ರನ್ಗಳಿಗೆ ಆಲೌಟ್ ಆಯಿತು. ಆರ್ಸಿಬಿ ತಂಡ 342 ದಿನಗಳ ಬಳಿಕ ಮೊದಲ ಬಾರಿಗೆ ಆಲೌಟ್ ಆಯಿತು.
156 ರನ್ಗಳ ಗುರಿಯನ್ನು ಬೆನ್ನಟ್ಟಿದ ಗುಜರಾತ್ ಟೈಟಾನ್ಸ್ ಆರಂಭ ಭರ್ಜರಿಯಾಗಿತ್ತು. ಆರಂಭಿಕರಾದ ಶುಭಮನ್ ಗಿಲ್ ಹಾಗೂ ಸಾಯಿ ಸುದರ್ಶನ್ (6) ಮೊದಲ ವಿಕೆಟ್ಗೆ 2.6 ಓವರ್ಗಳಲ್ಲಿ 42 ರನ್ ಸೇರಿಸಿತು. 18 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್ ಸಹಾಯದಿಂದ 43 ರನ್ ಬಾರಿಸಿದ್ದ ಶುಭಮನ್ ಗಿಲ್ ಭುವನೇಶ್ವರ್ ಕುಮಾರ್ ಎಸೆತದಲ್ಲಿ ವಿರಾಟ್ ಕೊಹ್ಲಿಗೆ ಕ್ಯಾಚ್ ನೀಡಿದರು.

ಗುಜರಾತ್ ಟೈಟಾನ್ಸ್ ತಂಡಕ್ಕೆ ಬೇಗನೆ ಗೆಲುವಿನ ಮಾಲೆ ತೊಡಿಸಬೇಕು ಎಂಬ ಇರಾದೆಯಲ್ಲಿದ್ದ ಜೋಸ್ ಬಟ್ಲರ್ ಅವರ ಆಟ 39 ರನ್ಗಳಿಗೆ ಕೊನೆಯಾಯಿತು. ಇವರು 2 ಬೌಂಡರಿ, 4 ಸಿಕ್ಸರ್ ಸಿಡಿಸಿದ್ದರು. ಇವರ ಆಟಕ್ಕೆ ಭುವನೇಶ್ವರ್ ಕುಮಾರ್ ಬ್ರೇಕ್ ಹಾಕಿದರು. ಮಧ್ಯಮ ಕ್ರಮಾಂಕದಲ್ಲಿ ವಾಷಿಂಗ್ಟನ್ ಸುಂದರ್ (12), ಶಾರೂಖ್ ಖಾನ್ (8), ಜೇಸನ್ ಹೋಲ್ಡರ್ (12) ತಂಡವನ್ನು ಗೆಲುವಿನ ದಡಕ್ಕೆ ತಂದು ನಿಲ್ಲಿಸಿದರು. ಭರವಸೆಯ ಬ್ಯಾಟರ್ ರಾಹುಲ್ ತೆವಟಿಯಾ 17 ಎಸೆತಗಳಲ್ಲಿ 4 ಬೌಂಡರಿ ಸಹಾಯದಿಂದ ಅಜೇಯ 27 ರನ್ ಬಾರಿಸಿದರು. ಅಂತಿಮವಾಗಿ ಗುಜರಾತ್ 16.5 ಓವರ್ಗಳಲ್ಲಿ 6 ವಿಕೆಟ್ಗೆ 158 ರನ್ ಸೇರಿಸಿತು.
ಆರ್ಸಿಬಿ ತಂಡದ ಪರ ಭುವನೇಶ್ವರ್ ಕುಮಾರ್ 28 ರನ್ ನೀಡಿ 3 ವಿಕೆಟ್ ಕಬಳಿಸಿದರು. ರೊಮಾರಿಯೊ ಶೆಫರ್ಡ್ 2 ವಿಕೆಟ್ ಉರುಳಿಸಿದರು.