ಅಹಮದಾಬಾದ್: 19ನೇ ಆವೃತ್ತಿ ಐಪಿಎಲ್ನ 42ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಬ್ಯಾಟರ್ಗಳು ರನ್ ಕಲೆ ಹಾಕುವಲ್ಲಿ ವಿಫಲರಾದರು. ಪರಿಣಾಮ ಆರ್ಸಿಬಿ ಸ್ಪರ್ಧಾತ್ಮಕ ಮೊತ್ತದ ಗುರಿಯನ್ನು ಗುಜರಾತ್ ಟೈಟಾನ್ಸ್ (ಜಿಟಿ) ತಂಡಕ್ಕೆ ನೀಡಿದೆ.
ಟಾಸ್ ಸೊತರೂ ಮೊದಲು ಬ್ಯಾಟ್ ಮಾಡಿದ ಆರ್ಸಿಬಿ ತಂಡದ ಆರಂಭ ಸಾಧಾರಣವಾಗಿತ್ತು. ಫಿಲ್ ಸಾಲ್ಟ್ ಅವರ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಆಡುವ ಅವಕಾಶವನ್ನು ಪಡೆದಿರುವ ಜಾಕೇಬ್ ಬೆಥೆಲ್ ಬಳಸಿಕೊಳ್ಳುವಲ್ಲಿ ವಿಫಲರಾದರು. ಆರಂಭಿಕ ವಿರಾಟ್ ಕೊಹ್ಲಿ ಅವರೊಂದಿಗೆ ಇನಿಂಗ್ಸ್ ಆರಂಭಿಸಿದ ಬೆಥೆಲ್ ಮೊದಲ ವಿಕೆಟ್ಗೆ 2.4 ಓವರ್ಗಳಲ್ಲಿ 34 ರನ್ ಸೇರಿಸಿತು. ಬೆಥೆಲ್ (5) ದೊಡ್ಡ ಇನಿಂಗ್ಸ್ ಕಟ್ಟುವ ಆಸೆ ಮಣ್ಣುಪಾಲಾಯಿತು.

ವಿರಾಟ್ ಕೊಹ್ಲಿ ತಮ್ಮ ನೈಜ ಆಟವನ್ನು ಆಡಿ ರನ್ ರೇಟ್ ಹಿಗ್ಗಿಸುತ್ತಾ ಸಾಗಿದರು. ಆದರೆ ಇವರ ಆಟಕ್ಕೆ ಕಗಿಸೊ ರಬಾಡ ಬ್ರೇಕ್ ಹಾಕಿದರು. ಇವರು 13 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಾಯದಿಂದ 28 ರನ್ ಸಿಡಿಸಿದರು.
ಆರ್ಸಿಬಿ ತಂಡದ ನಾಯಕ ಸಹ ಆರಂಭದಿಂದಲೂ ಆಕ್ರಮಣಕಾರಿ ಬ್ಯಾಟಿಂಗ್ಗೆ ಮಣೆ ಹಾಕಿದರು. ರನ್ ರೇಟ್ ಒತ್ತಡವನ್ನು ತಂಡದ ಮೇಲೆ ಬೀಳದಂತೆ ನೋಡಿಕೊಂಡ ರಜತ್ ದೊಡ್ಡ ಹೊಡೆತಗಳ ಮೂಲಕ ಅಬ್ಬರಿಸಿದರು. ಆದರೆ ಇವರು 19 ರನ್ ಬಾರಿಸಿದ್ದಾಗ ವಿವಾದಾತ್ಮಕ ಕ್ಯಾಚ್ಗೆ ಬಲಿಯಾದರು. ನಂತರ ಬಂದ ಬ್ಯಾಟರ್ಗಳು ಜವಾಬ್ದಾರಿಯು ಬ್ಯಾಟಿಂಗ್ ನಡೆಸಲಿಲ್ಲ.
ಈ ಲೀಗ್ನಲ್ಲಿ ರನ್ ಕಲೆ ಹಾಕದೆ ಟೀಕೆಗೆ ಗುರಿಯಾಗಿದ್ದ ಜಿತೇಶ್ ಶರ್ಮಾ ಅವರಿಗೆ ಗುರುವಾರ ಒಳ್ಳೆಯ ಅವಕಾಶ ಒದಗಿ ಬಂದಿತ್ತು. ಆದರೆ ಈ ಅವಕಾಶವನ್ನು ಇವರು ಹಾಳು ಮಾಡಿಕೊಂಡರು. ಆಲ್ರೌಂಡರ್ ಟಿಮ್ ಡೇವಿಡ್ ಆಟ ಸಹ 9 ರನ್ಗಳಿಗೆ ಸೀಮಿತವಾಯಿತು. ಈ ಹಂತದಲ್ಲಿ ಆರ್ಸಿಬಿ 16 ರನ್ ಸೇರಿಸುವಷ್ಟದಲ್ಲಿ 4 ವಿಕೆಟ್ ಕಳೆದುಕೊಂಡಿತು.
ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ದೇವದತ್ ಪಡಿಕ್ಕಲ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಶ್ರಮಿಸಿದರು. ಇವರು 24 ಎಸೆತಗಳಲ್ಲಿ 5 ಬೌಂಡರಿ, 2 ಸಿಕ್ಸರ್ ಸಹಾಯದಿಂದ 40 ರನ್ ಬಾರಿಸಿ ಮಿಂಚಿದರು.
9ನೇ ವಿಕೆಟ್ಗೆ ಇಪ್ಯಾಕ್ಟ್ ಪ್ಲೇಯರ್ ವೆಂಕಟೇಶ್ ಅಯ್ಯರ್ ಹಾಗೂ ಭುವನೇಶ್ವರ್ ಕುಮಾರ್ ತಂಡದ ಮೊತ್ತವನ್ನು ಹಿಗ್ಗಿಸುವಲ್ಲಿ ಸಫಲರಾದರು. ಈ ಜೋಡಿ 30 ಎಸೆತಗಳಲ್ಲಿ 29 ರನ್ ಸೇರಿಸಿತು. ಈ ಹಂತದಲ್ಲಿ ವೆಂಕಟೇಶ್ ಅಯ್ಯರ್ 15 ಎಸೆತಗಳಲ್ಲಿ 12 ರನ್ ಬಾರಿಸಿ ಔಟ್ ಆದರು. ಅಂತಿಮವಾಗಿ ಆರ್ಸಿಬಿ 19.2 ಓವರ್ಗಳಲ್ಲಿ 155 ರನ್ಗಳಿಗೆ ಆಲೌಟ್ ಆಯಿತು.
ಗುಜರಾತ್ ಪರ ಅರ್ಷದ್ ಖಾನ್ 22 ರನ್ ನೀಡಿ 3 ವಿಕೆಟ್ ಪಡೆದರು. ಜೇಸನ್ ಹೋಲ್ಡರ್, ರಶೀದ್ ಖಾನ್ ತಲಾ 2 ವಿಕೆಟ್ ಪಡೆದರು.