
ಡಿ.ವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಆರ್ಸಿಬಿ ವರ್ಸಸ್ ಕೆಕೆಆರ್ ನಡುವಿನ ಪಂದ್ಯದಲ್ಲಿ ಕೊಲ್ಕತ್ತ ನೈಟ್ ರೈಡರ್ಸ್ ಆರ್ಸಿಬಿ ದಾಳಿಗೆ ತತ್ತರಿಸಿ 128 ರನ್ಗಳ ಸಾಧಾರಣ ಮೊತ್ತ ಕಲೆಹಾಕಿದೆ. ಶ್ರೀಲಂಕಾ ಮೂಲದ ಸ್ಪಿನ್ನರ್ ವಹಿಂದು ಹಸರಂಗ, ಹರ್ಷಲ್ ಪಟೇಲ್ ಹಾಗೂ ಆಕಾಶ್ ದೀಪ್ ದಾಳಿಗೆ ಪತರುಗುಟ್ಟಿದ ಕೊಲ್ಕತ್ತಾ ನೈಟ್ ರೈಡರ್ಸ್ ರನ್ಗಳಿಗೆ ತೃಪ್ತಿಪಟ್ಟಿತು.
ವೆಂಕಟೇಶ್ ಅಯ್ಯರ್ 10ರನ್ಗಳಿಗೆ ಆಕಾಶ್ ದೀಪ್ಗೆ ಮೊದಲು ವಿಕೆಟ್ ಬಲಿಯಾದ್ರೆ, ಅನುಭವಿ ಓಪನರ್ ಅಜಿಂಕ್ಯ ರಹಾನೆ 9 ರನ್ಗೆ ಸಿರಾಜ್ಗೆ ವಿಕೆಟ್ ಒಪ್ಪಿಸಿದ್ರು. ನಿತಿಶ್ ರಾಣಾ 12ರನ್ಗೆ ಆಕಾಶ್ ದೀಪ್ ಬೌಲಿಂಗ್ನಲ್ಲಿ ಔಟಾದ್ರೆ, ಇದ್ರ ಬೆನ್ನಲ್ಲೇ ನಾಯಕ ಶ್ರೇಯಸ್ ಅಯ್ಯರ್ ಕೆಟ್ಟ ಹೊಡೆತಕ್ಕೆ ಕೈ ಹಾಕಿ ಹಸರಂಗಗೆ ಮೊದಲ ವಿಕೆಟ್ ಒಪ್ಪಿಸಿದ್ರು.
ತನ್ನ ಸ್ಪಿನ್ ಚಾಕಚಾಕತ್ಯೆಯಿಂದ ಲಂಕಾ ಸ್ಪಿನ್ನರ್ ಹಸರಂಗ ಸುನಿಲ್ ನರೈನ್ ಮತ್ತು ಶೆಲ್ಡನ್ ಜಾಕ್ಸನ್ ವಿಕೆಟ್ ಕೂಡ ಕಬಳಿಸಿದ್ರು. ಸ್ಯಾಮ್ ಬಿಲ್ಲಿಂಗ್ (14), ಆಂಡ್ರೆ ರಸೆಲ್ (25) ವಿಕೆಟ್ ಪಡೆಯುವಲ್ಲಿ ಚಾಂಪಿಯನ್ ಬೌಲರ್ ಹರ್ಷಲ್ ಪಟೇಲ್ ಯಶಸ್ವಿಯಾದ್ರು.
99 ರನ್ಗೆ 8 ವಿಕೆಟ್ ಕಳೆದುಕೊಂಡ ಕೆಕೆಆರ್ ಪರ ಉಮೇಶ್ ಯಾದವ್ 18 ರನ್ ಹಾಗೂ ಟಿಮ್ ಸೌಥಿ 10ರನ್ಗಳ ಕೊಡುಗೆಯಿಂದ ಕೆಕೆಆರ್ 18.5 ಓವರ್ಗಳಿಗೆ 128 ರನ್ಗಳಿಗೆ ಸರ್ವಪತನಗೊಂಡಿತು. ಕೆಕೆಆರ್ ಪರ ರಸೆಲ್ 25ರನ್ಗಳಿಸಿದ್ದೇ ಗರಿಷ್ಠವಾಗಿತ್ತು.
ವಹಿಂದು ಹಸರಂಗ 4 ಓವರ್ಗಳಲ್ಲಿ ಕೇವಲ 20 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದ್ರೆ, ಹರ್ಷಲ್ ಪಟೇಲ್ 4 ಓವರ್ಗಳಲ್ಲಿ ಕೇವಲ 11 ರನ್ ನೀಡಿ 2 ವಿಕೆಟ್ ಕಬಳಿಸಿದ್ರು. ಹರ್ಷಲ್ ಪಟೇಲ್ ಮೊದಲೆರಡು ಓವರ್ ಮೇಡನ್ ಅನ್ನೋದು ವಿಶೇಷ. ಸಿರಾಜ್ ಬಳಿಕ ಐಪಿಎಲ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಎರಡನೇ ಬೌಲರ್ ಎನಿಸಿಕೊಂಡಿದ್ದಾರೆ.
ಇನ್ನು ಮೊದಲೆರಡು ವಿಕೆಟ್ ಕಬಳಿಸಿದ್ದ ಆಕಾಶ್ ದೀಪ್ 3.5 ಓವರ್ಗಳಲ್ಲಿ ಸ್ವಲ್ಪ ದುಬಾರಿಯಾಗಿ 45 ರನ್ ನೀಡಿ 3 ವಿಕೆಟ್ ಪಡೆದರು. ಮೊಹಮ್ಮದ್ ಸಿರಾಜ್ ಕೇವಲ 1 ವಿಕೆಟ್ ಉರುಳಿಸಿದರು.