ಕೊಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಬೆಂಗಳೂರಿನಲ್ಲಿ ನಡೆದ ಪಂದ್ಯದಲ್ಲಿಯೂ ಆರ್ಸಿಬಿ ತಂಡ ಆಘಾತಕಾರಿ ರೀತಿಯಲ್ಲಿ ಸೋಲು ಅನುಭವಿಸಿದೆ. ಬೌಲಿಂಗ್, ಫೀಲ್ಡಿಂಗ್ ನಂತರ ಬ್ಯಾಟಿಂಗ್ ಎಲ್ಲಾ ವಿಭಾಗದಲ್ಲಿಯೂ ಹೀನಾಯ ಪ್ರದರ್ಶನ ನೀಡಿದ ಆರ್ಸಿಬಿ ತಂಡ ತವರಿನಲ್ಲಿಯೇ ಮುಖಭಂಗಕ್ಕೆ ಒಳಗಾಗಿದೆ. ಈ ಸೋಲಿನ ಬಳೀಕ ಮಾತನಾಡಿದ ಆರ್ಸಿಬಿ ತಂಡದ ಹಂಗಾಮಿ ನಾಯಕ ವಿರಾಟ್ ಕೊಹ್ಲಿ ತಂಡದ ಸಹ ಆಟಗಾರರ ಪ್ರದರ್ಶನಕ್ಕೆ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ.
ಪಂದ್ಯದ ಬಳಿಕ ಮಾತನಾಡಿದ ವಿರಾಟ್ ಕೊಹ್ಲಿ ಕೆಕೆಆರ್ ವಿರುದ್ಧದ 21 ರನ್ಗಳ ಅಂತರದ ಸೋಲಿಗೆ ತಂಡದ ಫೀಲ್ಡಿಂಗ್ ವಿಭಾಗವನ್ನು ದೂರಿದ್ದಾರೆ. ಬೌಲಿಂಗ್ ಸಂದರ್ಭದಲ್ಲಿ ವೈಶಾಕ್ ವಿಜಯ್ಕುಮಾರ್ ಹಾಗೂ ವನಿಂದು ಹಸರಂಗ ವಿಕೆಟ್ಗಳನ್ನು ಪಡೆದು ಎದುರಾಳಿಗೆ ಹಿನ್ನಡೆಯಾಗುವಂತೆ ಮಾಡಿದರು. ಆದರೆ ಕೆಲ ಮಹತ್ವದ ಕ್ಯಾಚ್ಗಳನ್ನು ಫೀಲ್ಡರ್ಗಳು ಕೈಚೆಲ್ಲಿದ್ದು ದುಬಾರಿಯಾಯಿತು. ಇನ್ನು ಬ್ಯಾಟಿಂಗ್ನಲ್ಲಿ ಉತ್ತಮ ಆರಂಭವನ್ನು ಪಡೆದರೂ ಮತ್ತೆ ಮಧ್ಯಮ ಕ್ರಮಾಂಕದ ಆಟಗಾರರು ಹೀನಾಯ ಪ್ರದರ್ಶನ ನೀಡಿದ ಕಾರಣ ಹೋರಾಟ ನೀಡದೆಯೇ ಆರ್ಸಿಬಿ ಸೋಲು ಕಾಣುವಂತಾಯಿತು.

ಈ ಸೋಲಿನ ಬಳಿಕ ವಿರಾಟ್ ಕೊಹ್ಲಿ ಅಸಮಾಧಾನದಿಂದಲೇ ಪ್ರತಿಕ್ರಿಯೆ ನೀಡಿದರು. "ಪ್ರಮಾಣಿಕವಾಗಿ ಹೇಳಬೇಕೆಂದರೆ ನಾವು ನಮ್ಮ ಕೈಯಾರೆ ಪಂದ್ಯವನ್ನು ಅವರಿಗೆ ನೀಡಿದೆವು. ಈ ಸೋಲಿಗೆ ನಾವು ಅರ್ಹರಾಗಿದ್ದೇವೆ. ನಾವು ಅವರ ಕೈಗೆ ಗೆಲುವನ್ನು ನೀಡಿದ್ದೇವೆ. ನಮ್ಮ ಸಾಮರ್ಥ್ಯಕ್ಕೆ ತಕ್ಕ ಆಟವಾಡಲಿಲ್ಲ. ಪಂದ್ಯವನ್ನು ನೋಡಿದಾಗ ನಮಗೆ ಸಿಕ್ಕ ಅವಕಾಶವನ್ನು ನಾವು ಬಳಸಿಕೊಳ್ಳಲಿಲ್ಲ. ಕೆಲ ಕ್ಯಾಚ್ಗಳನ್ನು ಕೈಚೆಲ್ಲಿದ್ದು 25-30 ರನ್ಗಳಷ್ಟು ನಮಗೆ ದುಬಾರಿಯಾಯಿತು. ಉತ್ತಮ ಅಡಿಪಾಯವನ್ನು ಹಾಕಿದ್ದರೂ ಸೋಲು ಕಾಣುವಂತಾಯಿತು" ಎಂದಿದ್ದಾರೆ ವಿರಾಟ್ ಕೊಹ್ಲಿ.
ಇನ್ನು ಬ್ಯಾಟಿಂಗ್ ವಿಭಾಗ ಮಾಡಿದ ತಪ್ಪುಗಳನ್ನು ಕೂಡ ಕೊಹ್ಲಿ ಬಿಟ್ಟು ಮಾಡಿದ್ದಾರೆ. "ವಿಕೆಟ್ ಪಡೆಯುವಂತಾ ಎಸೆತಗಳಲ್ಲದಿದ್ದರೂ ಫೀಲ್ಡರ್ಗಳ ಕೈಗೆ ಕ್ಯಾಚ್ ನೀಡಿ ವಿಕೆಟ್ ಕಳೆದುಕೊಂಡೆವು. ಇದು ಸ್ಕೋರ್ಬೋರ್ಡ್ನಲ್ಲಿ ರನ್ ಏರಿಸುವ ರೀತಿಯಲ್ಲ. ರನ್ ಬೆನ್ನಟ್ಟುವಾಗ ವಿಕೆಟ್ಗಳನ್ನು ಕಳೆದುಕೊಳ್ಳುತ್ತಿದ್ದರೂ ಒಂದು ಜೊತೆಯಾಟ ಬಂದಿದ್ದರೆ ಪಂದ್ಯ ನಮ್ಮದಾಗಿರುತ್ತಿತ್ತು. ತವರಿನಲ್ಲಿ ಗೆಲ್ಲಬೇಕಾದರೆ ಒಂದು ಜೊತೆಯಾಟದ ಅಗತ್ಯವಿದೆ" ಎಂದಿದ್ದಾರೆ ವಿರಾಟ್ ಕೊಹ್ಲಿ.
ಈ ಪಂದ್ಯದಲ್ಲಿ ಟಾಸ್ ಸೋತು ಮೊದಲಿಗೆ ಬ್ಯಾಟಿಂಗ್ ಮಾಡಿದ ಕೆಕೆಆರ್ ತಂಡಕ್ಕೆ ಭರ್ಜರಿ ಆರಂಭ ದೊರೆಯಿತು. ಜೇಸನ್ ರಾಯ್ ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ಅಬ್ಬರದ ಆರಂಭ ದೊರಕಿಸಿದರು. 29 ಎಸೆತಗಳಲ್ಲಿ 56 ರನ್ ಸಿಡಿಸಿ ಅಬ್ಬರಿಸಿದ ಪರಿಣಾಮ ಮೊದಲಾರ್ಧದಲ್ಲಿ ಆರ್ಸಿಬಿಗೆ ಹಿನ್ನಡೆಯಾಗುವಂತೆ ಮಾಡಿದರು. ನಂತರ ನಿತೀಶ್ ರಾಣಾ ಕೂಡ ಸ್ಪೋಟಕ ಪ್ರದರ್ಶನ ನೀಡಿದ್ದು 21 ಎಸೆತಗಳಲ್ಲಿ 48 ರನ್ ಬಾರಿಸಿದರು. ಅಂತಿಮವಬಾಗಿ ನಿಗದಿತ 20 ಓವರ್ಗಳಲ್ಲಿ ಕೆಕೆಆರ್ 5 ವಿಕೆಟ್ ಕಳೆದುಕೊಂಡು ಭರ್ತಿ 200 ರನ್ಗಳಿಸಿತ್ತು.
ಇದಕ್ಕೆ ಪ್ರತಿಯಾಗಿ ಬ್ಯಾಟಿಂಗ್ ಆರಂಭಿಸಿದ ಆರ್ಸಿಬಿ ತಂಡಕ್ಕೆ ಉತ್ತಮ ಆರಂಭ ದೊರೆಯಿತಾದರೂ ಫಾಫ್ 7 ಎಸೆತಗಳಲ್ಲಿ 17 ರನ್ ಸಿಡಿಸಿ ವಿಕೆಟ್ ಕಳೆದುಕೊಂಡರು. ಶಹ್ಬಾಜ್ ಅಹ್ಮದ್, ಗ್ಲೆನ್ ಮ್ಯಾಕ್ಸ್ವೆಲ್ ವಿಫವಾದರೂ ನಾಯಕ ಕೊಹ್ಲಿ ಅದ್ಭುತ ಹೋರಾಟವನ್ನು ಮುಂದುವರಿಸಿದರು. ಮಹಿಪಾಲ್ ಲೋಮ್ರೋ್ ಅವರಿಗೆ ಕೆಲ ಕಾಳ ಅದ್ಭುತ ಜೊತೆಯಾಟ ನೀಡುವ ಮೂಲಕ ಆರ್ಸಿಬಿ ಗೆಲುವಿನ ಭರವಸೆ ಮೂಡಿಸಿತ್ತು. ಆದರೆ ಈ ಜೋಡಿ ಬೇರ್ಪಟ್ಟ ಬಳಿಕ ಉಳಿದ ಆಟಗಾರರಿಂದ ಹೋರಾಟದ ಪ್ರದರ್ಶನ ಬಾರಲೇ ಇಲ್ಲ. ದಿನೇಶ್ ಕಾರ್ತಿಕ್ ಮತ್ತೊಮ್ಮೆ ವೈಫಲ್ಯ ಅನುಭವಿಸಿದರು. ಅಂತಿಮವಾಗಿ ಆರ್ಸಿಬಿ ನಿಗದಿತ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 179 ರನ್ಗಳಿಸಿತು.