
ಬಾಂಗ್ಲಾದೇಶ ಪಾಕಿಸ್ತಾನದ ವಿರುದ್ಧದ ಸರಣಿಗೆ ಇಂದು ಪಾಕಿಸ್ತಾನಕ್ಕೆ ಪ್ರಯಾಣವನ್ನು ಬೆಳೆಸಿದೆ. ನಾಳೆಯಿಂದ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ಕ್ರಿಕೆಟ್ ತಂಡದ ಮಧ್ಯೆ ಟಿ20 ಸರಣಿ ಆರಂಭವಾಗಲಿದೆ. ಇಂದು ಪಾಕಿಸ್ತಾನಕ್ಕೆ ಬಾಂಗ್ಲಾ ಕ್ರಿಕೆಟ್ ಆಟಗಾರರು ತೆರಳಿದ್ದಾರೆ.
ಈ ಪ್ರಯಾಣಕ್ಕೂ ಮುನ್ನ ಬಾಂಗ್ಲಾದೇಶ ಕ್ರಿಕೆಟ್ ಟಿ20 ತಂಡ ಭಾಗವಾಗಿರುವ ಮುಸ್ತಫಿಜುರ್ ರಹ್ಮಾನ್ ಮಾಡಿರುವ ಟ್ವೀಟ್ ಸಾಕಷ್ಟು ಚರ್ಚೆಗೆ ಕಾರಣವಾಗಿದೆ. ಬಾಂಗ್ಲಾ ಕ್ರಿಕೆಟಿಗರು ಭಯದಿಂದಲೇ ಪಾಕಿಸ್ತಾನಕ್ಕೆ ತೆರಳಿರುವುದು ಸ್ಪಷ್ಟವಾಗುತ್ತಿದೆ.
'ಪಾಕಿಸ್ತಾನದತ್ತ ಮುಖಮಾಡಿದ್ದೇವೆ, ನಮಗಾಗಿಯೂ ಪ್ರಾರ್ಥಿಸಿ' ಎಂಬ ಒಕ್ಕಣೆಯೊಂದಿಗೆ ಮುಸ್ತಫಿಜುರ್ ರಹ್ಮಾನ್ ತಂಡದ ಸದಸ್ಯರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ. ಫೋಟೋದೊಂದಿಗಿನ ಈ ಬರಹ ಎಲ್ಲ ಹುಬ್ಬೇರುವಂತೆ ಮಾಡಿದೆ.
ಭದ್ರತೆಯ ಕಾರಣಕ್ಕೆ ಆರಂಭದಲ್ಲಿ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಈ ಪ್ರವಾಸಕ್ಕೆ ಹಿಂದೇಟು ಹಾಕಿತ್ತು. ಬಳಿಕ ಎರಡೂ ದೇಶಗಳ ಕ್ರಿಕೆಟ್ ಬೋರ್ಡ್ನ ಅಧಿಕಾರಿಗಳು ದುಬೈನಲ್ಲಿ ಮಾತುಕತೆ ನಡೆಸಿದ್ದರು. ಬಳಿಕ ಬಿಸಿಬಿ ಪಾಕಿಸ್ತಾನಕ್ಕೆ ಕ್ರಿಕೆಟ್ ತಂಡವನ್ನು ಕಳುಹಿಸುವ ನಿರ್ಧಾರವನ್ನು ಮಾಡಿತ್ತು.
ಬಾಂಗ್ಲಾದೇಶದ ವಿಕೆಟ್ ಕೀಪರ್ ಮುಷ್ಫಿಕರ್ ರಹೀಮ್ ಬಾಂಗ್ಲಾದೇಶ ತಂಡ ಪ್ರಕಟಗೊಳ್ಳುವ ಮೊದಲೇ ಭದ್ರತೆಯ ಕಾರಣವನ್ನು ನೀಡಿ ಪ್ರವಾಸದಿಂದ ಹಿಂದೇಟು ಹಾಕಿದ್ದರು. ಪಾಕಿಸ್ತಾನಕ್ಕೆ ಪ್ರವಾಸ ಮಾಡಿರುವ ಬಾಂಗ್ಲಾದೇಶ ಕ್ರಿಕೆಟ್ ತಂಡಕ್ಕೆ ವಿಐಪಿ ಭದ್ರತೆಯನ್ನು ನೀಡಲಾಗಿದೆ.