
ದಕ್ಷಿಣ ಆಫ್ರಿಕಾ ದೇಶದಾದ್ಯಂತ ಸೋಂಕಿನ ಭಯ ಇದ್ದರೂ ಸಹ ಈ ಹಿಂದೆ ನಿಗದಿಯಾಗಿದ್ದ ಟೆಸ್ಟ್ ಸರಣಿ ಯಾವುದೇ ಕಾರಣಕ್ಕೂ ರದ್ದಾಗಬಾರದು ಎಂಬ ನಿಟ್ಟಿನಲ್ಲಿ ಟೀಮ್ ಇಂಡಿಯಾ ಆಟಗಾರರು ಮುಂಜಾಗ್ರತಾ ಕ್ರಮವನ್ನು ವಹಿಸಿಕೊಂಡು ದಕ್ಷಿಣ ಆಫ್ರಿಕಾ ತಲುಪಿ ಕಠಿಣ ಅಭ್ಯಾಸಗಳನ್ನು ನಡೆಸಿ ಇದೀಗ ಹರಿಣಗಳ ವಿರುದ್ಧದ ಪ್ರಥಮ ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ. ಹೌದು, ದಕ್ಷಿಣ ಆಫ್ರಿಕಾ ದೇಶದಲ್ಲಿ ಕೊರೋನಾ ಹಾಗೂ ಒಮಿಕ್ರಾನ್ ಸೋಂಕಿತರ ಸಂಖ್ಯೆ ಹೆಚ್ಚಿರುವ ಕಾರಣದಿಂದ ಡಿಸೆಂಬರ್ 16ರಂದು ಆರಂಭವಾಗಬೇಕಾಗಿದ್ದ ಸರಣಿಗಳು ನಿಧಾನವಾಗಿ ಆರಂಭವಾದವು. ಅಷ್ಟೇ ಅಲ್ಲದೆ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಬೇಕಿದ್ದ ಟಿ ಟ್ವೆಂಟಿ ಸರಣಿಯನ್ನು ಮುಂದೂಡಲಾಯಿತು.
ಹೀಗೆ ದಕ್ಷಿಣ ಆಫ್ರಿಕಾ ಪ್ರವಾಸವನ್ನು ಸಾಕಷ್ಟು ಸವಾಲುಗಳೊಂದಿಗೆ ಕೈಗೊಂಡಿರುವ ಟೀಮ್ ಇಂಡಿಯಾಗೆ ಇದೀಗ ಮೊದಲ ಟೆಸ್ಟ್ ಪಂದ್ಯದಲ್ಲಿಯೇ ವರುಣರಾಯ ಅಡ್ಡಿಯನ್ನು ಉಂಟು ಮಾಡಿದ್ದಾನೆ. ಹೌದು, ಭಾರತ ಮತ್ತು ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪ್ರಥಮ ಟೆಸ್ಟ್ ಪಂದ್ಯ ಡಿಸೆಂಬರ್ 26ರ ಬಾಕ್ಸಿಂಗ್ ಡೇನಂದು ಸೆಂಚೂರಿಯನ್ ಸೂಪರ್ ಸ್ಪೋರ್ಟ್ ಪಾರ್ಕ್ ಕ್ರೀಡಾಂಗಣದಲ್ಲಿ ಆರಂಭವಾಯಿತು. ಹೀಗೆ ಆರಂಭವಾದ ಮೊದಲನೇ ದಿನ ಯಾವುದೇ ಅಡೆತಡೆ ಇಲ್ಲದೇ ಪಂದ್ಯ ಅಚ್ಚುಕಟ್ಟಾಗಿ ನಡೆಯಿತು. ಇದಕ್ಕೂ ಮುನ್ನ ಅಕ್ಕ್ಯುವೆದರ್ ನೀಡಿದ್ದ ಹವಾಮಾನ ವರದಿಯ ಪ್ರಕಾರ ಮೊದಲನೇ ದಿನ ಆರಂಭದ ವೇಳೆ ಹಾಗೂ ದ್ವಿತೀಯ ದಿನದಂದು ಮಳೆಯಾಗಲಿದೆ ಎನ್ನಲಾಗುತ್ತಿತ್ತು.
ಆದರೆ ಹವಾಮಾನ ವರದಿಯ ಪ್ರಕಾರ ಮೊದಲನೇ ದಿನ ಯಾವುದೇ ರೀತಿಯ ಮಳೆ ಆಗಲಿಲ್ಲ ಆದರೆ ದ್ವಿತೀಯ ದಿನದಂದು ಪಂದ್ಯ ಆರಂಭವಾಗುವುದಕ್ಕೂ ಕೊಂಚ ಸಮಯದ ಮುನ್ನ ಶುರುವಾದ ಮಳೆ ಇದೀಗ ದ್ವಿತೀಯ ದಿನದ ಆಟವನ್ನು ಸಂಪೂರ್ಣ ರದ್ದಾಗುವಂತೆ ಮಾಡಿದೆ. ಮೊದಲನೇ ದಿನದಾಟದಲ್ಲಿ 3 ವಿಕೆಟ್ ನಷ್ಟಕ್ಕೆ 290 ರನ್ ಕಲೆ ಹಾಕಿ ಉತ್ತಮ ಹಂತದಲ್ಲಿದ್ದ ಟೀಮ್ ಇಂಡಿಯಾ ಈ ಟೆಸ್ಟ್ ಪಂದ್ಯವನ್ನು ಗೆಲ್ಲುವ ಎಲ್ಲಾ ಲಕ್ಷಣಗಳಿವೆ ಎಂದು ಪ್ರೇಕ್ಷಕರು ಮಾತನಾಡಿಕೊಳ್ಳುತ್ತಿದ್ದರು. ಆದರೆ ಇದೀಗ ದ್ವಿತೀಯ ದಿನ ಮಳೆಗೆ ಸಂಪೂರ್ಣವಾಗಿ ಆಹುತಿಯಾಗಿರುವುದರಿಂದ ಟೀಮ್ ಇಂಡಿಯಾ ಈ ಪಂದ್ಯದಲ್ಲಿ ಗೆಲ್ಲುವುದು ಕಷ್ಟ ಪಂದ್ಯ ಡ್ರಾನಲ್ಲಿ ಅಂತ್ಯಗೊಳ್ಳಲಿದೆ ಎಂದು ಭಾರತ ಕ್ರಿಕೆಟ್ ತಂಡದ ಅಭಿಮಾನಿಗಳು ಬೇಸರ ವ್ಯಕ್ತಪಡಿಸಿದ್ದಾರೆ. ಹಾಗೂ ಟೆಸ್ಟ್ ಪಂದ್ಯಗಳನ್ನು ಆಯೋಜಿಸುವುದರ ಕುರಿತು ಈ ಕೆಳಕಂಡಂತೆ ಕಿಡಿಕಾರಿದ್ದಾರೆ..
ಈ ಹಿಂದೆ ಭಾರತ ಇಂಗ್ಲೆಂಡ್ ಪ್ರವಾಸವನ್ನು ಕೈಗೊಂಡಿದ್ದಾಗ ಮೊದಲನೇ ಟೆಸ್ಟ್ ಪಂದ್ಯದಲ್ಲಿ ಇದೇ ರೀತಿ ಮಳೆ ಅಡ್ಡಿಯುಂಟು ಮಾಡಿತ್ತು, ಹಾಗೂ ಇದೀಗ ಕೂಡ ಮೊದಲನೇ ಟೆಸ್ಟ್ ಪಂದ್ಯದಲ್ಲಿಯೇ ಮಳೆ ಅಡ್ಡಿಯನ್ನುಂಟು ಮಾಡುತ್ತಿದೆ. ಹೀಗಾಗಿ ಟೆಸ್ಟ್ ಪಂದ್ಯಗಳಿಗೆ ಹೆಚ್ಚುವರಿ ದಿನದ ಅವಶ್ಯಕತೆ ಇದೆ ಎಂದು ನೆಟ್ಟಿಗರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಳೆಯಿಂದಾಗಿ ಭಾರತ ತಂಡಕ್ಕೆ ಹಿನ್ನಡೆಯುಂಟಾಗಿದೆ ಎಂಬುದರ ಕುರಿತು ನೆಟ್ಟಿಗನೋರ್ವ ಟ್ವೀಟ್ ಮಾಡಿದ್ದು ಟೀಮ್ ಇಂಡಿಯಾ ಹರಿಣಗಳ ನೆಲದಲ್ಲಿ ಮೇಲುಗೈ ಸಾಧಿಸಿದ್ದಾಗ ಮಳೆ ಅಡ್ಡಿಯುಂಟು ಮಾಡಿದೆ ಹಾಗೂ ಈ ರೀತಿ ಭಾರತಕ್ಕೆ ಮಳೆ ಅಡ್ಡಿಯುಂಟು ಮಾಡುತ್ತಿರುವುದು ಇದೇ ಮೊದಲೇನಲ್ಲ ಹಾಗೂ ಖಂಡಿತವಾಗಿಯೂ ಇದೇ ಕೊನೆಯ ಬಾರಿಯೂ ಕೂಡ ಅಲ್ಲ ಎಂದು ಬರೆದುಕೊಂಡಿದ್ದಾರೆ.
ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಪ್ರಥಮ ಟೆಸ್ಟ್ ಪಂದ್ಯಕ್ಕೆ ಮಳೆ ಅಡ್ಡಿಯುಂಟು ಮಾಡಿರುವುದರ ಕುರಿತು ಪ್ರತಿಕ್ರಿಯಿಸಿರುವ ನೆಟ್ಟಿಗನೋರ್ವ ಟೆಸ್ಟ್ ಸರಣಿಯನ್ನು ಆಯೋಜಿಸಿರುವವರ ವಿರುದ್ಧ ಕಿಡಿಕಾರಿದ್ದಾರೆ. ಮಳೆ ಬರುವಿಕೆಯ ಕುರಿತು ಮಾಹಿತಿ ಪಡೆಯುವುದಕ್ಕೆ ಹಲವಾರು ತಂತ್ರಜ್ಞಾನಗಳು ಇರುವಾಗ ಅದನ್ನು ಸರಿಯಾಗಿ ಬಳಸಿಕೊಳ್ಳದೇ ಈ ರೀತಿ ಟೆಸ್ಟ್ ಸರಣಿಗಳನ್ನು ಆಯೋಜಿಸುವುದು ಏಕೆ ಎಂದು ನೆಟ್ಟಿಗರು ಪ್ರಶ್ನೆ ಹಾಕಿದ್ದಾರೆ.