ಟೀಮ್ ಇಂಡಿಯಾ ಸದ್ಯ ಆಸ್ಟ್ರೇಲಿಯಾ ಪ್ರವಾಸದಲ್ಲಿದೆ. ಈ ವೇಳೆ ಭಾರತ ತಂಡ ಆಸೀಸ್ ವಿರುದ್ಧ ಬಾರ್ಡರ್ ಗವಾಸ್ಕರ್ ಸರಣಿಯನ್ನು ಆಡುತ್ತಿದೆ. ಈ ಸರಣಿಯಲ್ಲಿ ಭಾಗವಹಿಸಿದ ಟೀಮ್ ಇಂಡಿಯಾ ಸ್ಟಾರ್ ಆಟಗಾರರು ದೇಶೀಯ ಟೂರ್ನಿಯಲ್ಲಿ ಆಡುತ್ತಿದ್ದಾರೆ. ಟಿ20 ಕ್ರಿಕೆಟ್ನಲ್ಲಿ ಅಬ್ಬರದ ಪ್ರದರ್ಶನ ನೀಡಿ ಅಭಿಮಾನಿಗಳ ಮನದಲ್ಲಿ ಶಾಶ್ವತ ಸ್ಥಾನ ಪಡೆದಿರುವ ರಿಂಕು ಸಿಂಗ್ಗೆ ಲಕ್ ಖುಲಾಯಿಸಿದೆ. ಇವರು ದೇಶೀಯ ಟೂರ್ನಿಯಲ್ಲಿ ಹೊಸ ಅವತಾರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಶನಿವಾರದಿಂದ ಭಾರತದಲ್ಲಿ ವಿಜಯ್ ಹಜಾರೆ ಏಕದಿನ ಸರಣಿಗಳು ಆರಂಭವಾಗಲಿವೆ. ಈ ಸರಣಿಗೆ ಈಗಾಗಲೇ ಹಲವು ತಂಡಗಳನ್ನು ಪ್ರಕಟಿಸಲಾಗಿದ್ದು, ಈ ಬಾರಿ ಉತ್ತರ ಪ್ರದೇಶ ತಂಡವನ್ನು ರಿಂಕು ಸಿಂಗ್ ಮುನ್ನಡೆಸಲಿದ್ದಾರೆ. ಇದೆ ಮೊದಲ ಬಾರಿಗೆ ರಿಂಕು ಹೆಗಲಿಗೆ ದೊಡ್ಡ ಜವಾಬ್ದಾರಿಯನ್ನು ನೀಡಲಾಗಿದೆ. ಸೈಯದ್ ಮುಷ್ತಾಕ್ ಅಲಿ ಟಿ20 ಕ್ರಿಕೆಟ್ ಟೂರ್ನಿಯಲ್ಲಿ ಉತ್ತರ ಪ್ರದೇಶ ತಂಡವನ್ನು ಭುವನೇಶ್ವರ್ ಕುಮಾರ್ ಮುನ್ನಡೆಸಿದ್ದರು. ಈಗ ಏಕದಿನ ಸರಣಿಯಲ್ಲಿ ರಿಂಕು ನಾಯಕರಾಗಿ ಕಣಕ್ಕೆ ಇಳಿಯಲಿದ್ದಾರೆ.

ಪ್ರಸಕ್ತ ವರ್ಷ ರಿಂಕು ಸಿಂಗ್ ಭರ್ಜರಿ ಫಾರ್ಮ್ನಲ್ಲಿದ್ದಾರೆ. ಇತ್ತೀಚಿಗೆ ಮುಕ್ತಾಯಗೊಂಡ ಉತ್ತರ ಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ ಇವರು, ಮೀರಟ್ಸ್ ಮೇವರೆಟ್ಸ್ ತಂಡದ ಪರ ಆಡಿ ಅಬ್ಬರಿಸಿದ್ದರು. 161.54ರ ಸ್ಟ್ರೈಕ್ ರೇಟ್ನಲ್ಲಿ 210 ರನ್ ಕಲೆ ಹಾಕಿ ತಂಡಕ್ಕೆ ಆಧಾರವಾಗಿದ್ದರು. ಇವರು ಲೀಸ್ಟ್ ಎ ಪಂದ್ಯಗಳಲ್ಲಿ ಉತ್ತಮ ಅಂಕಿ ಅಂಶಗಳನ್ನು ಹೊಂದಿದ್ದಾರೆ. ರಿಂಕು ಆಡಿದ 52 ಇನಿಂಗ್ಸ್ಗಳಲ್ಲಿ 48.69ರ ಸರಾಸರಿಯಲ್ಲಿ 1899 ರನ್ ಸಿಡಿಸಿ ಭರವಸೆ ಮೂಡಿಸಿದ್ದಾರೆ. ಇದರಲ್ಲಿ ಒಂದು ಶತಕ ಹಾಗೂ 17 ಅರ್ಧಶತಕಗಳು ಸೇರಿವೆ.
ಉತ್ತರ ಪ್ರದೇಶ ತಂಡದ ನಾಯಕತ್ವ ಸಿಕ್ಕಿದಕ್ಕೆ ಸಂತಸ ವ್ಯಕ್ತ ಪಡಿಸಿರುವ ರಿಂಕು, ಈ ವೇಳೆ ನನಗೆ ಕಲಿಯಲು ತುಂಬ ಅವಕಾಶಗಳು ಇವೆ ಎಂಬುದಾಗಿ ತಿಳಿಸಿದ್ದಾರೆ. ಉತ್ತರ ಪ್ರದೇಶ ವಿಜಯ್ ಹಜಾರೆ ಏಕದಿನ ಸರಣಿಯಲ್ಲಿ ಡಿ ಗುಂಪಿನಲ್ಲಿ ಸ್ಥಾನ ಪಡೆದಿದೆ. ಮಿಜೋರಾಂ, ತಮಿಳುನಾಡು, ವಿದರ್ಭ,ಛತ್ತೀಸ್ಗಢ, ಚಂಡೀಗಢ, ಜಮ್ಮು ಮತ್ತು ಕಾಶ್ಮೀರ ವಿರುದ್ಧ ರಿಂಕು ಪಡೆ ಪಂದ್ಯಗಳನ್ನು ಆಡಲಿದೆ.
ಕಳೆದ ಆವೃತ್ತಿಯ ಐಪಿಎಲ್ನಲ್ಲಿ ಕೆಕೆಆರ್ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಹರಾಜಿಗೆ ಕೈ ಬಿಡಲಾಗಿತ್ತು. ಅಲ್ಲದೆ ಹರಾಜಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕನ ಗುಣಗಳನ್ನು ಹೊಂದಿರುವ ಆಟಗಾರರಿಗೆ ಮಣೆ ಹಾಕಲೇ ಇಲ್ಲ. ಹೀಗಾಗಿ ತಂಡ ಖರೀದಿಸಿದ ಆಟಗಾರರಲ್ಲಿ ಒಬ್ಬರಿಗೆ ಈ ಹೊಣೆ ನೀಡುವ ಸಾಧ್ಯತೆ ಇದೆ. ಸುನಿಲ್ ನರೈನ್, ಆಂಡ್ರೆ ರಸೆಲ್, ವರುಣ್ ಚಕ್ರವರ್ತಿ, ರಿಂಕು ಸಿಂಗ್ ಮತ್ತು ರಮಣದೀಪ್ ಸಿಂಗ್ ಅವರಿಗೆ ಕೆಕೆಆರ್ ಉಳಿಸಿಕೊಂಡಿತ್ತು. ಹೀಗಾಗಿ ಈ ಬಾರಿಯ ಐಪಿಎಲ್ನಲ್ಲಿ ಕೋಲ್ಕತ್ತಾ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬುದು ಇನ್ನು ಸ್ಪಷ್ಟವಾಗಿಲ್ಲ. ನಾಯಕತ್ವದ ರೇಸ್ನಲ್ಲಿ ರಿಂಕು ಸಿಂಗ್ ಸಹ ಇದ್ದಾರೆ.