2024ರ ಇಂಡಿಯನ್ ಪ್ರೀಮಿಯರ್ ಲೀಗ್ನ (ಐಪಿಎಲ್) 17ನೇ ಆವೃತ್ತಿಗೆ ದಿನಗಣನೆ ಆರಂಭವಾಗಿದ್ದು, ಶ್ರೀಮಂತ ಟಿ20 ಲೀಗ್ಗಾಗಿ ವಿಶ್ವದಾದ್ಯಂತದ ಕ್ರಿಕೆಟ್ ಅಭಿಮಾನಿಗಳು ಕಾತರರಾಗಿದ್ದಾರೆ.
ಮಾರ್ಚ್ 22ರಂದು ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆಯುವ ಉದ್ಘಾಟನಾ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್ಕೆ) ತಂಡಗಳು ಮುಖಾಮುಖಿಯಾಗಲಿವೆ.

ಕಳೆದ 14 ತಿಂಗಳಿನಿಂದ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್ಸಿಎ) ಪುನರ್ವಸತಿಗೆ ಒಳಗಾಗಿರುವ ರಿಷಭ್ ಪಂತ್, ಹೊಸ ಐಪಿಎಲ್ ಆವೃತ್ತಿಗೆ ಮುಂಚಿತವಾಗಿ ಅಭ್ಯಾಸವನ್ನು ಪ್ರಾರಂಭಿಸಿದ್ದಾರೆ ಮತ್ತು ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಶಿಬಿರಕ್ಕೆ ಸೇರಲು ಅನುಮತಿ ಪತ್ರ ನೀಡಲಾಗಿದೆ.

ಬಿಸಿಸಿಐ ಹೇಳಿಕೆ ಬಿಡುಗಡೆಯಲ್ಲಿ, ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಪ್ರಸಿದ್ಧ್ ಕೃಷ್ಣ ಅವರು ಈ ಋತುವಿನ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಖಚಿತಪಡಿಸಿದೆ. ಮೊಹಮ್ಮದ್ ಶಮಿ ಗುಜರಾತ್ ಟೈಟನ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಕನ್ನಡಿಗ ಪ್ರಸಿದ್ಧ್ ಕೃಷ್ಣ ರಾಜಸ್ಥಾನ ರಾಯಲ್ಸ್ ತಂಡದ ಭಾಗವಾಗಿದ್ದು, ಇದೀಗ ಐಪಿಎಲ್ನಿಂದ ಹೊರಬಿದ್ದಿರುವುದು ಸಂಜು ಸ್ಯಾಮ್ಸನ್ ನಾಯಕತ್ವದ ತಂಡದ ಆರಂಭಿಕ ಹಿನ್ನಡೆಗೆ ಕಾರಣವಾಗಿದ್ದಾರೆ.

ರಿಷಭ್ ಪಂತ್ ಅವರು ಡಿಸೆಂಬರ್ 2022ರಲ್ಲಿ ಭೀಕರ ಕಾರು ಅಪಘಾತದಲ್ಲಿ ಮಾರಣಾಂತಿಕವಾಗಿ ಗಾಯಗೊಂಡಿದ್ದರು ಮತ್ತು ಅಂದಿನಿಂದ ಕ್ರಿಕೆಟ್ ಆಟದಿಂದ ಸಂಪೂರ್ಣವಾಗಿ ಹೊರಗುಳಿದಿದ್ದರು. ಹಲವು ತಿಂಗಳುಗಳ ಕಾಲ ಚಿಕಿತ್ಸೆ ಮತ್ತು ಚೇತರಿಕೆಯಲ್ಲಿ ದಿನ ದೂಡಿದರು.
ವಿಕೆಟ್ ಕೀಪರ್-ಬ್ಯಾಟರ್ ರಿಷಭ್ ಪಂತ್ ಕೆಲವು ತಿಂಗಳ ಹಿಂದೆ ಕ್ರಿಕೆಟ್ ಆಡಲು ಪ್ರಾರಂಭಿಸಿದರು. ನಂತರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಗೆ (ಎನ್ಸಿಎ) ಸೇರಿದರು. ಐಪಿಎಲ್ಗೆ ಲಭ್ಯವಾಗಲು ರಿಷಭ್ ಪಂತ್ ತಮ್ಮ ಫಿಟ್ನೆಸ್ನಲ್ಲಿ ಕಠಿಣವಾಗಿ ಕೆಲಸ ಮಾಡಿದರು.
ರಿಷಭ್ ಪಂತ್: ಉತ್ತರಾಖಂಡ್ನ ರೂರ್ಕಿ ಬಳಿ ಡಿಸೆಂಬರ್ 30, 2022ರಂದು ಭೀಕರ ರಸ್ತೆ ಅಪಘಾತದ ನಂತರ, 14 ತಿಂಗಳ ವ್ಯಾಪಕ ಚೇತರಿಕೆ ಮತ್ತು ಪುನರ್ವಸತಿ ಪ್ರಕ್ರಿಯೆಗೆ ಒಳಗಾದರು.
ಮುಂಬರುವ 2024ರ ಐಪಿಎಲ್ ಪಂದ್ಯಾವಳಿಗಾಗಿ ರಿಷಭ್ ಪಂತ್ ಇದೀಗ ವಿಕೆಟ್ ಕೀಪರ್-ಬ್ಯಾಟರ್ ಆಗಿ ಫಿಟ್ ಆಗಿದ್ದಾರೆ ಎಂದು ಎನ್ಸಿಎ ಘೋಷಿಸಿದೆ. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ತಂಡದ ನಾಯಕನಾಗಿ ಕ್ರಿಕೆಟ್ಗೆ ಮರಳಲಿದ್ದಾರೆ.
ಪ್ರಸಿದ್ಧ್ ಕೃಷ್ಣ: ಕನ್ನಡಿಗ ಹಾಗೂ ರಾಜಸ್ಥಾನ ರಾಯಲ್ಸ್ ತಂಡದ ವೇಗದ ಬೌಲರ್ ಫೆಬ್ರವರಿ 23, 2024ರಂದು ಅವರ ಎಡ ಪ್ರಾಕ್ಸಿಮಲ್ ಕ್ವಾಡ್ರೈಸ್ಪ್ ಸ್ನಾಯುರಜ್ಜು ಶಸ್ತ್ರಚಿಕಿತ್ಸೆಗೆ ಒಳಗಾದರು.
ಪ್ರಸ್ತುತ ಪ್ರಸಿದ್ಧ್ ಕೃಷ್ಣ ಅವರನ್ನು ಬಿಸಿಸಿಐ ವೈದ್ಯಕೀಯ ತಂಡವು ಮೇಲ್ವಿಚಾರಣೆ ನಡೆಸುತ್ತಿದೆ ಮತ್ತು ಶೀಘ್ರದಲ್ಲೇ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಆರಂಭಿಸಲಿದ್ದಾರೆ. ಹೀಗಾಗಿ 2024ರ ಐಪಿಎಲ್ ಪಂದ್ಯಾವಳಿಯಲ್ಲಿ ಭಾಗವಹಿಸಲು ಸಾಧ್ಯವಾಗುವುದಿಲ್ಲ ಎಂದು ಹೇಳಿದು.
ಮೊಹಮ್ಮದ್ ಶಮಿ: ಗುಜರಾತ್ ಟೈಟನ್ಸ್ ವೇಗದ ಬೌಲರ್ ತನ್ನ ಬಲ ಹಿಮ್ಮಡಿ ಸಮಸ್ಯೆಯಿಂದಾಗಿ ಫೆಬ್ರವರಿ 26, 2024ರಂದು ಯಶಸ್ವಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದಾರೆ. ಮೊಹಮ್ಮದ್ ಶಮಿ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಮತ್ತು ಮುಂಬರುವ2024ರ ಐಪಿಎಲ್ನಿಂದ ಹೊರಗುಳಿಯುತ್ತಾರೆ.
ಪ್ರಸಿದ್ಧ್ ಕೃಷ್ಣ ಮತ್ತು ಮೊಹಮ್ಮದ್ ಶಮಿಗೆ ಸಂಬಂಧಿಸಿದಂತೆ, 2024ರ ಐಪಿಎಲ್ ಋತುವಿನಲ್ಲಿ ವೇಗದ ಜೋಡಿಯ ಅನುಪಸ್ಥಿತಿಯು ಟಿ20 ಲೀಗ್ ಮುಕ್ತಾಯದ ನಂತರ ನಡೆಯುವ ಟಿ20 ವಿಶ್ವಕಪ್ನಲ್ಲಿ ಭಾರತ ತಂಡಕ್ಕೆ ಆಯ್ಕೆಯಾಗುವ ಅವಕಾಶಗಳಿಗೆ ದೊಡ್ಡ ಹೊಡೆತ ನೀಡಿದೆ.