
ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಟಿ20 ಪಂದ್ಯ ಆರಂಭಕ್ಕೆ 24 ಗಂಟೆ ಬಾಕಿ ಇರುವಂತೆ ಟೀಂ ಇಂಡಿಯಾದಿಂದ ಹೊರಬಿದ್ದ ನಾಯಕ ಕೆ.ಎಲ್ ರಾಹುಲ್ ಬದಲಿಗೆ ರಿಷಭ್ ಪಂತ್ ನಾಯಕನಾಗಿ ಆಯ್ಕೆಯಾಗಿರುವುದು ನಿಮಗೆ ತಿಳಿದಿದೆ.
ಆದ್ರೆ ಬುಧವಾರ ಸಂಜೆ ಟೀಂ ಇಂಡಿಯಾ ಪತ್ರಿಕಾಗೋಷ್ಠಿಗೆ ಇನ್ನು ಕೆಲವೇ ನಿಮಿಷಗಳು ಬಾಕಿ ಇರುವಂತೆ ಪಂತ್ ನಾಯಕನಾಗಿ ಆಯ್ಕೆಯಾಗಿದ್ದರ ಕುರಿತು ಶಾಕ್ ಆದ ರಿಷಭ್, ಅದ್ರಿಂದ ಹೊರಬರಲು ಸ್ವಲ್ಪ ಸಮಯವೇ ಆಗಿತೆಂದು ನಾಯಕಾಗಿ ಆಯ್ಕೆಯಾಗಿ ತನ್ನ ಮೊದಲ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ನಾನು ಟೀಮ್ ಇಂಡಿಯಾವನ್ನು ಮುನ್ನಡೆಸುತ್ತೇವೆ ಎಂಬ ಅಂಶವನ್ನು "ಜೀರ್ಣಿಸಿಕೊಳ್ಳಲು" ಇನ್ನೂ ಸಾಧ್ಯವಾಗಿಲ್ಲ ಎಂದು ಹೇಳಿದ್ದಾರೆ.
"ನನಗೆ ಅದನ್ನು ಇನ್ನೂ ಅರಗಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ಗಂಟೆಯ ಹಿಂದೆ ನನಗೆ ಗೊತ್ತಾಯಿತು" ಎಂದು ಪಂತ್ ಪಂದ್ಯ ಪೂರ್ವ ಪತ್ರಿಕಾಗೋಷ್ಠಿಯಲ್ಲಿ ನಗುತ್ತಾ ಹೇಳಿದರು.
"ಇದು ತುಂಬಾ ಒಳ್ಳೆಯ ಭಾವನೆ, ಆದ್ರೆ ತುಂಬಾ ಒಳ್ಳೆಯ ಸಂದರ್ಭಗಳಲ್ಲಿ ಬಂದಿಲ್ಲ. ಆದ್ರೂ ಕೂಡ ಅದೇ ಸಮಯದಲ್ಲಿ ನನಗೆ ಸಂತೋಷವಾಗಿದೆ. ಭಾರತ ತಂಡವನ್ನು ಮುನ್ನಡೆಸಲು ನನಗೆ ಈ ಅವಕಾಶವನ್ನು ನೀಡಿದ್ದಕ್ಕಾಗಿ ನಾನು ಬಿಸಿಸಿಐಗೆ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಏರಿಳಿತದ ನನ್ನ ಪ್ರಯಾಣದಲ್ಲಿ ನನ್ನನ್ನು ಬೆಂಬಲಿಸಿದ್ದಕ್ಕಾಗಿ ಎಲ್ಲಾ ಹಿತೈಷಿಗಳಿಗೆ ಧನ್ಯವಾದಗಳು'' ಎಂದು ರಿಷಭ್ ಪಂತ್ ಹೇಳಿದ್ದಾರೆ.
"ನಾಯಕನಾಗಿ, ಇದು ನನಗೆ ಬಹಳಷ್ಟು ಸಹಾಯ ಮಾಡುತ್ತದೆ (ಐಪಿಎಲ್ನಲ್ಲಿ ಮುನ್ನಡೆಸುವುದು). ಏಕೆಂದರೆ ನೀವು ಮತ್ತೆ ಮತ್ತೆ ಅದೇ ಕೆಲಸವನ್ನು ಮಾಡುತ್ತಿರುವಾಗ ನೀವು ಸುಧಾರಿಸುತ್ತೀರಿ. ನಾನು ತಪ್ಪುಗಳಿಂದ ಕಲಿಯುತ್ತಲೇ ಇರುವ ವ್ಯಕ್ತಿ ಮತ್ತು ಮುಂದಿನ ದಿನಗಳಲ್ಲಿ ಅದು ನನಗೆ ಸಹಾಯ ಮಾಡುತ್ತದೆ ಎಂದು ನಾನು ಭಾವಿಸುತ್ತೇನೆ'' ಎಂದು ರಿಷಭ್ ತಮ್ಮ ನಾಯಕತ್ವದ ಕುರಿತು ತಿಳಿಸಿದರು.
ರಿಷಭ್ ಪಂತ್ ನಾಯಕನಾಗಿ ಹಾಗೂ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಉಪನಾಯಕನಾಗಿ ತಂಡಕ್ಕೆ ಆಯ್ಕೆಯಾಗಿದ್ದರು ಸಹ, ಕೆ.ಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್ಗೆ ಬದಲಿ ಆಟಗಾರರನ್ನು ಘೋಷಿಸಲಾಗಿಲ್ಲ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ಗುರುವಾರ (ಜೂ.09) ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯದಲ್ಲಿ ಮುಖಾಮುಖಿಯಾಗಲಿದ್ದು, ಅದಕ್ಕೂ ಮೊದಲೇ ಕೆ.ಎಲ್ ರಾಹುಲ್ ಮತ್ತು ಕುಲ್ದೀಪ್ ಯಾದವ್ ಗಾಯಗೊಂಡು ಸರಣಿಯಿಂದಲೇ ಹೊರಬಿದ್ದಿರುವುದು ತಂಡಕ್ಕೆ ಹೊಡೆತ ನೀಡಿದೆ.