ಟೀಮ್ ಇಂಡಿಯಾ ಯುವ ಆಟಗಾರ ರಿಷಭ್ ಪಂತ್ ಅದ್ಭುತವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಬೆಂಗಳೂರಿನ ಎನ್ಸಿಎನಲ್ಲಿರುವ ರಿಷಭ್ ಪಂತ್ ಸದ್ಯ ಫಿಟ್ನೆಸ್ ಕಂಡುಕೊಳ್ಳಲು ಕಸರತ್ತು ನಡೆಸುತ್ತಿದ್ದಾರೆ. ಗಾಯದಿಂದ ನಿರೀಕ್ಷೆಗಿಂತಲೂ ಮುನ್ನವೇ ಚೇತರಿಕೆ ಕಂಡಿರುವ ರಿಷಭ್ ಪಂತ್ ಅವರನ್ನು ಮೈದಾನದಲ್ಲಿ ಆದಷ್ಟು ಶೀಘ್ರವಾಗಿ ಟೀಮ್ ಇಂಡಿಯಾ ಜರ್ಸಿಯಲ್ಲಿ ನೋಡಲು ಭಾರತೀಯ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದಾರೆ. ಆದರೆ ಈ ವಿಚಾರವಾಗಿ ಅಭಿಮಾನಿಗಳು ಮತ್ತಷ್ಟು ಕಾಯುವುದು ಅನಿವಾರ್ಯ ಎಂಬ ವರದಿಗಳು ಈಗ ಬರುತ್ತಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯ ವೈದ್ಯಕೀಯ ತಂಡ ಇತ್ತೀಚೆಗೆ ರಿಷಬ್ ಪಂತ್ ಭಾರತ ತಂಡಕ್ಕೆ ಪುನರಾಗಮನದ ವಿಚಾರವಾಗಿ ಬಹಳ ಸಕಾರಾತ್ಮಕ ಪ್ರಗತಿಯನ್ನು ಸಾಧಿಸುತ್ತಿದ್ದಾರೆ ಎಂಬ ಮಾಹಿತಿ ನೀಡಿತ್ತು. ಹೀಗಾಗಿ ಭಾರತೀಯ ಕ್ರಿಕೆಟ್ ಅಭಿಮಾನಿಗಳಿಗೆ ವಿಶ್ವಕಪ್ಗೆ ಮುನ್ನ ಪಂತ್ ಅವರನ್ನು ಭಾರತದ ಜರ್ಸಿಯಲ್ಲಿ ನೋಡಬಹುದಾ ಎಂಬ ಕಾತುರ ಮೂಡಿದ್ದು ಸುಳ್ಳಲ್ಲ.

ಆದರೆ ಈ ವಿಚಾರವಾಗಿ ಬಿಸಿಸಿಐನ ಮೂಲಗಳು ಮಾಹಿತಿ ನೀಡಿದ್ದು ಪಂತ್ ಯಾವಾಗ ತಂಡದಲ್ಲಿ ಕಾಣಿಸಿಕೊಳ್ಳಬಹುದು ಎಂಬುದಕ್ಕೆ ಗಡುವು ನೀಡಿದೆ. ಇದು ಖುಷಿಯ ವಿಚಾರ ಹೌದಾದರೂ ಇದಕ್ಕಾಗಿ ಇನ್ನೂ ಆರು ತಿಂಗಳು ಕಾಯಬೇಕಿದೆ ಎಂಬುದು ಸ್ವಲ್ಪ ನಿರಾಶೆಗೂ ಕಾರಣವಾಗಿದೆ. ವಿಶ್ವಕಪ್ ತಂಡದಲ್ಲಿ ಪಂತ್ರನ್ನು ನೋಡಬಹುದು ಎಂದು ಸಂತಸದಲ್ಲಿದ್ದ ಅಭಿಮಾನಿಗಳಿಗೆ ಇದು ಭಾರೀ ನಿರಾಸೆ ಮೂಡಿಸುವಂತಿದೆ.
ಕಳೆದ ವರ್ಷಾಂತ್ಯದಲ್ಲಿ ಟೀಮ್ ಇಂಡಿಯಾ ಬಾಂಗ್ಲಾದೇಶದ ವಿರುದ್ಧ ಕೊನೆಯ ಬಾರಿ ಆಡಿದ್ದ ರಿಷಭ್ ಪಂತ್ ಬಳಿಕ ಭೀಕರ ಕಾರು ಅಪಘಾತಕ್ಕೆ ಒಳಗಾಗಿ ಚಿಕಿತ್ಸೆ ಪಡೆಯುತ್ತಿರುವ ಪಂತ್ ಈ ವರ್ಷ ಪೂರ್ತಿ ಭಾರತದ ಜರ್ಸಿ ತೊಟ್ಟು ಆಡುವುದು ಅಸಂಭವ ಎನ್ನುತ್ತಿದೆ ಬಿಸಿಸಿಐ ಮೂಲಗಳು. 2024ರ ಆರಂಭದಲ್ಲಿ ಇಂಗ್ಲೆಂಡ ತಂಡ ಭಾರತಕ್ಕೆ ಆಗಮಿಸಲಿದ್ದು ಆ ಸರಣಿಯಲ್ಲಿ ರಿಷಭ್ ಕಮ್ಬ್ಯಾಕ್ ಮಾಡುವ ಗುರಿಯಿಟ್ಟುಕೊಳ್ಳಲಾಗಿದೆ ಎಂದು ಮೂಲಗಳು ಮಾಹಿತಿ ನೀಡಿದೆ. 2024ರ ಜನವರಿ ಫೆಬ್ರವರಿಯಲ್ಲಿ ಇಂಗ್ಲೆಂಡ್ ಭಾರತದಲ್ಲಿ ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಆಡಲಿದೆ.
ರಿಷಭ್ ಪಂತ್ ಭೀಕರ ಅಪಘಾತಕ್ಕೆ ಒಳಗಾಗಿ ಪ್ರಾಣಾಪಾಯದಿಂದ ಪಾರಾಗಿದ್ದರೂ ಮೊಣಕಾಲು ಲಿಗಮೆಂಟ್ ಘಾಸಿಯಾಗಿದ್ದ ಕಾರಣ ಶಸ್ತ್ರಚಿಕಿತ್ಸೆಗ ಒಳಗಾಗಿದ್ದರು. ಈ ಶಸ್ತ್ರಚಿಕಿತ್ಸೆಯ ಬಳಿಕ ನಿರೀಕ್ಷೆಗೂ ಮೀರಿದ ವೇಗದಲ್ಲಿ ಪಂತ್ ಚೇತರಿಕೆ ಕಂಡಿದ್ದಾರೆ. ಪ್ರಸ್ತುತ ಪಂತ್ ಜಿಮ್ನಲ್ಲಿಯೂ ಕಸರತ್ತು ನಡೆಸುತ್ತಿದ್ದು ಕ್ರಿಕೆಟ್ಗೆ ಬೇಕಾದ ಫಿಟ್ನೆಸ್ ಪಡೆದುಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಬ್ಯಾಟಿಂಗ್ ಅಭ್ಯಾಸವನ್ನು ಕೂಡ ಆರಂಭಿಸಿರುವ ಪಂತ್ ಸಣ್ಣ ಪ್ರಮಾಣದಲ್ಲಿ ವಿಕೆಟ್ ಕೀಪಿಂಗ್ ಅಭ್ಯಾಸ ಕೂಡ ಶುರುಮಾಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿದೆ.
ಇನ್ನು ರಿಷಭ್ ಪಂತ್ ಚೇತರಿಕೆ ಬಗ್ಗೆ ಬಿಸಿಸಿಐ ಈಗಾಗಲೇ ಅಧಿಕೃತ ವೈದ್ಯಕೀಯ ಮಾಹಿತುಯನ್ನು ಕೂಡ ಹಂಚಿಕೊಂಡಿದೆ. "ಅವರು ತಮ್ಮ ರಿಹ್ಯಾಬಿಲಿಟೇಶನ್ನಲ್ಲಿ ಗಣನೀಯ ಪ್ರಗತಿಯನ್ನು ಸಾಧಿಸಿದ್ದಾರೆ. ಅಲ್ಲದೆ ನೆಟ್ಸ್ನಲ್ಲಿ ಬ್ಯಾಟಿಂಗ್ ಮತ್ತು ಕೀಪಿಂಗ್ ಅಭ್ಯಾಸ ಕೂಡ ಪ್ರಾರಂಭಿಸಿದ್ದಾರೆ. ಸಾಮರ್ಥ್ಯ ಹೆಚ್ಚಿಸುವ, ಫ್ಲೆಕ್ಸಿಬಿಲಿಟಿ ಮತ್ತು ಓಟವನ್ನು ಒಳಗೊಂಡಿರುವ ಫಿಟ್ನೆಸ್ ರೂಪುರೇಶೆಯನ್ನು ಅವರಿಗಾಗಿ ಸಿದ್ದಪಡಿಸಲಾಗಿದ್ದು ಅದನ್ನು ಅವರು ಪ್ರಸ್ತುತ ಅನುಸರಿಸುತ್ತಿದ್ದಾರೆ" ಎಂದು ಬಿಸಿಸಿಐ ಮಾಹಿತಿ ನೀಡಿದೆ.
ಇನ್ನು ರಿಷಭ್ ಪಂತ್ ಮಾತ್ರವಲ್ಲದೆ ಗಾಯಗೊಂಡು ತಂಡದಿಂದ ಹೊರಬಿದ್ದಿರುವ ಟೀಮ್ ಇಂಡಿಯಾದ ಸ್ಟಾರ್ ಕ್ರಿಕೆಟಿಗರಾದ ಕೆಎಲ್ ರಾಹುಲ್, ಜಸ್ಪ್ರೀತ್ ಬೂಮ್ರಾ ಮತ್ತು ಶ್ರೇಯಸ್ ಐಯ್ಯರ್ ಕೂಡ ಎನ್ಸಿಎನಲ್ಲಿ ರಿಹ್ಯಾಬ್ ನಡೆಸುತ್ತಿದ್ದಾರೆ. ಈ ಆಟಗಾರರು ಕೂಡ ಸದ್ಯದಲ್ಲಿಯೇ ತಂಡಕ್ಕೆ ಕಮ್ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿದ್ದಾರೆ.