
ಕ್ರಿಕೆಟ್ ಜೀವನದಿಂದ ನಿವೃತ್ತಿ ಪಡೆದುಕೊಂಡುಕೊಂಡಿದ್ದ ಅನೇಕ ಖ್ಯಾತ ಕ್ರಿಕೆಟಿಗರು ಮತ್ತೊಮ್ಮೆ ಮೈದಾನದಲ್ಲಿ ಬ್ಯಾಟ್ ಬೀಸುವುದನ್ನು ಮತ್ತು ಬೌಲಿಂಗ್ ಮಾಡುವುದನ್ನು ನೋಡುವ ಅವಕಾಶವನ್ನು 2020ರಲ್ಲಿ ಆರಂಭವಾದ ವಿನೂತನ ಕ್ರಿಕೆಟ್ ಟೂರ್ನಮೆಂಟ್ ಕಲ್ಪಿಸಿತ್ತು. ಹೌದು, 2020ರಲ್ಲಿ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಎಂಬ ನೂತನ ಹಾಗೂ ವಿಭಿನ್ನವಾದ ಕ್ರಿಕೆಟ್ ಟೂರ್ನಮೆಂಟ್ ನಡೆಯಿತು. ಈ ಟೂರ್ನಿಯಲ್ಲಿ ಕ್ರಿಕೆಟ್ ಜೀವನದಿಂದ ನಿವೃತ್ತಿ ಪಡೆದುಕೊಂಡಿರುವ ಹಲವಾರು ದಿಗ್ಗಜ ಕ್ರಿಕೆಟಿಗರು ತಮ್ಮ ಕ್ರಿಕೆಟ್ ವೃತ್ತಿ ಜೀವನದ ಎರಡನೇ ಇನ್ನಿಂಗ್ಸ್ ಆಡುವುದರ ಮೂಲಕ ಹಲವಾರು ಕ್ರಿಕೆಟ್ ಪ್ರೇಮಿಗಳಿಗೆ ಭರಪೂರ ಮನರಂಜನೆಯನ್ನು ನೀಡಿದರು.
2020ರಲ್ಲಿ ನಡೆದಿದ್ದ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಉದ್ಘಾಟನಾ ಆವೃತ್ತಿಯಲ್ಲಿ ಇಂಡಿಯಾ ಲೆಜೆಂಡ್ಸ್ ತಂಡ ಟ್ರೋಫಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್, ಬ್ರಿಯಾನ್ ಲಾರಾ, ಜಾಂಟಿ ರೋಡ್ಸ್, ಹರ್ಷಲ್ ಗಿಬ್ಸ್ ಹಾಗೂ ವಿರೇಂದ್ರ ಸೆಹ್ವಾಗ್ ಸೇರಿದಂತೆ ಇನ್ನೂ ಮುಂತಾದ ಹಲವಾರು ದಿಗ್ಗಜ ಕ್ರಿಕೆಟಿಗರು ಪಾಲ್ಗೊಂಡು ಟೂರ್ನಿ ಯಶಸ್ವಿಯಾಗುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದ್ದರು. ಹೀಗೆ ಈ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಉದ್ಘಾಟನಾ ಆವೃತ್ತಿ ಉತ್ತಮ ಯಶಸ್ಸನ್ನು ಪಡೆದುಕೊಂಡ ಕಾರಣ 2022ರಲ್ಲಿ ದ್ವಿತೀಯ ಆವೃತ್ತಿಯನ್ನು ಆಯೋಜಿಸುವುದಾಗಿ ಅಧಿಕೃತವಾಗಿ ತಿಳಿಸಲಾಗಿದೆ.
ಈ ಬಾರಿಯ ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಭಾರತ ನೆಲದಲ್ಲಿ ನಡೆಯಲಿದ್ದು, ಬೇಸಿಗೆಯ ಆರಂಭದ ದಿನಗಳಲ್ಲಿ ಟೂರ್ನಿ ಶುರುವಾಗಲಿದೆ. ಹೌದು, ಫೆಬ್ರವರಿ ಕೊನೆಯ ವಾರದಿಂದ ಮಾರ್ಚ್ ಕೊನೆಯ ವಾರದವರೆಗೆ ಈ ಬಾರಿಯ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯನ್ನು ನಡೆಸಲು ತೀರ್ಮಾನಿಸಲಾಗಿದ್ದು, ಭಾರತದ 4 ನಗರಗಳಲ್ಲಿ ಕೊರೋನಾ ವೈರಸ್ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಂಡು ಪಂದ್ಯಗಳನ್ನು ನಡೆಸಲಾಗುವುದು ಎಂಬ ಮಾಹಿತಿಯನ್ನು ವರದಿಯೊಂದು ತಿಳಿಸಿದೆ.
ವರದಿಯೊಂದರ ಪ್ರಕಾರ ಹೈದರಾಬಾದ್, ವಿಶಾಖಪಟ್ಟಣ, ಲಕ್ನೋ ಮತ್ತು ಇಂದೋರ್ ನಗರಗಳಲ್ಲಿ ಈ ಬಾರಿಯ ರೋಡ್ ಸೇಫ್ಟಿ ವರ್ಲ್ಡ್ ಸೀರೀಸ್ ಟೂರ್ನಿಯ ಪಂದ್ಯಗಳನ್ನು ಆಯೋಜಿಸಲಾಗುತ್ತದೆ. ಹಾಗೂ ಸ್ಥಳೀಯ ಕ್ರಿಕೆಟ್ ಬೋರ್ಡ್ಗಳು ಮತ್ತು ಸರಣಿಯ ಆಯೋಜಕರು ಈ ನಗರಗಳಲ್ಲಿನ ಕೊರೋನಾ ಪರಿಸ್ಥಿತಿಗಳ ಕುರಿತು ಗಮನವನ್ನು ಹರಿಸುತ್ತಿದ್ದು, ಪಂದ್ಯಗಳು ನಡೆಯುವ ಸಂದರ್ಭದಲ್ಲಿ ಪಂದ್ಯ ವೀಕ್ಷಿಸಲು ಪ್ರೇಕ್ಷಕರಿಗೆ ಮೈದಾನ ಪ್ರವೇಶಿಸುವ ಅವಕಾಶವನ್ನು ನೀಡಬೇಕೋ ಅಥವಾ ಬೇಡವೋ ಎಂಬುದನ್ನು ಕೊರೊನಾ ಪರಿಸ್ಥಿತಿಗೆ ತಕ್ಕಂತೆ ತೀರ್ಮಾನ ಮಾಡಲಾಗುವುದು ಎನ್ನಲಾಗುತ್ತಿದೆ.
ಇನ್ನು ರೋಡ್ ಸೇಫ್ಟಿ ವರ್ಲ್ಡ್ ಸಿರೀಸ್ ಉದ್ಘಾಟನಾ ಆವೃತ್ತಿಯಲ್ಲಿ ಭಾರತ, ಇಂಗ್ಲೆಂಡ್, ಶ್ರೀಲಂಕಾ, ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ, ಬಾಂಗ್ಲಾ ದೇಶ ಮತ್ತು ವೆಸ್ಟ್ ಇಂಡೀಸ್ ತಂಡಗಳ ಮಾಜಿ ಕ್ರಿಕೆಟಿಗರು ಪಾಲ್ಗೊಂಡಿದ್ದರು. ಟಿ ಟ್ವೆಂಟಿ ಮಾದರಿಯಲ್ಲಿ ನಡೆದಿದ್ದ ಈ ಟೂರ್ನಿಯನ್ನು ರಸ್ತೆ ಸುರಕ್ಷತೆಯ ಅರಿವು ಮೂಡಿಸುವ ಕುರಿತಾಗಿ ಆಯೋಜನೆ ಮಾಡಲಾಗಿತ್ತು. ಹಾಗೂ ಈ ಟೂರ್ನಿಯಲ್ಲಿ ನಡೆದ ಡಿಸೈಡರ್ ಪಂದ್ಯದಲ್ಲಿ ಶ್ರೀಲಂಕಾ ಲೆಜೆಂಡ್ಸ್ ವಿರುದ್ಧ ಇಂಡಿಯಾ ಲೆಜೆಂಡ್ಸ್ ತಂಡ 14 ರನ್ಗಳ ಜಯ ಸಾಧಿಸುವುದರ ಮೂಲಕ ಚಾಂಪಿಯನ್ಸ್ ಆಗಿ ಹೊರಹೊಮ್ಮಿತ್ತು.
ಕಳೆದ ಬಾರಿ ಪ್ರಕಟವಾಗಿದ್ದ ಇಂಡಿಯಾ ಲೆಜೆಂಡ್ಸ್ ತಂಡ: ಸಚಿನ್ ತೆಂಡೂಲ್ಕರ್ (ಸಿ), ವೀರೇಂದ್ರ ಸೆಹ್ವಾಗ್, ಯುವರಾಜ್ ಸಿಂಗ್, ಮೊಹಮ್ಮದ್ ಕೈಫ್, ಇರ್ಫಾನ್ ಪಠಾಣ್, ಪ್ರಗ್ಯಾನ್ ಓಜಾ, ಮುನಾಫ್ ಪಟೇಲ್, ಮನ್ಪ್ರೀತ್ ಗೋನಿ, ನೋಯೆಲ್ ಡೇವಿಡ್ ಸುಬ್ರಮಣ್ಯಂ ಬದರಿನಾಥ್, ಯೂಸುಫ್ ಪಠಾಣ್, ನಮನ್ ಓಜಾ (ವಿಕೆಟ್ ಕೀಪರ್), ವಿನಯ್ ಕುಮಾರ್, ರಾಜೇಶ್ ಪವಾರ್, ರವಿ, ಗಾಯಕವಾಡ, ಜಹೀರ್ ಖಾನ್, ಅಜಿತ್ ಅಗರ್ಕರ್, ಅಬೆ ಕುರುವಿಲ್ಲಾ, ಸಂಜಯ್ ಬಂಗಾರ್, ಸಮೀರ್ ದಿಘೆ (ವಿಕೆಟ್ ಕೀಪರ್), ಸಾಯಿರಾಜ್ ಬಹುತುಲೆ