ಬೆಂಗಳೂರು, ಸೆಪ್ಟಂಬರ್ 4: ಈ ಬಾರಿಯ ಕರ್ನಾಟಕ ಪ್ರೀಮಿಯರ್ ಲೀಗ್ ನಿಂದ (ಕೆಪಿಎಲ್) ದೂರ ಉಳಿದಿದ್ದಕ್ಕೆ ರಾಬಿನ್ ಉತ್ತಪ್ಪ ಅವರು ಟ್ವೀಟರ್ ನಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.
ಟ್ವೀಟರ್ ನಲ್ಲಿ ತಮ್ಮ ಅಭಿಮಾನಿಗಳನ್ನು ಉದ್ದೇಶಿಸಿ ಅವರು ಮಾತನಾಡಿರುವ ವಿಡಿಯೋ ಕ್ಲಿಪ್ ಒಂದನ್ನು ತಾವೇ ಸ್ವತಃ ಅಪ್ಲೋಡ್ ಮಾಡಿರುವ ಅವರು, ಟೂರ್ನಿಯಿಂದ ದೂರ ಸರಿದಿದ್ದರ ಹಿಂದಿನ ಸಕಾರಣವನ್ನು ತಿಳಿಸಿದ್ದಾರೆ.

ತಮ್ಮ ಪತ್ನಿ ಶೀತಲ್ ಹಾಗೂ ತಾವು ಮೊದಲ ಮಗುವನ್ನು ನಿರೀಕ್ಷಿಸುತ್ತಿರುವ ಹಿನ್ನೆಲೆಯಲ್ಲಿ ತಾವು ಕೆಪಿಎಲ್ ಟೂರ್ನಿಯಿಂದ ಸರಿದಿರುವುದಾಗಿ ತಿಳಿಸಿರುವ ಅವರು, ಟೂರ್ನಿಯನ್ನು ಆಯೋಜಿಸುತ್ತಿರುವ ಕರ್ನಾಟಕ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಹಾಗೂ ಕೆಪಿಎಲ್ ನಲ್ಲಿ ಆಡಲಿರುವ ಎಲ್ಲಾ ಆಟಗಾರರಿಗೆ ಶುಭಾಷಯ ತಿಳಿಸಿದ್ದಾರೆ ಅವರು.
ತಮ್ಮೊಂದು ಟ್ವೀಟ್ ನಲ್ಲಿ ಇಂಗ್ಲೀಷ್ ನಲ್ಲಿ ಮಾತನಾಡಿರುವ ವಿಡಿಯೋ ಹಾಕಿರುವ ಅವರು, ಅದರ ಬೆನ್ನಲ್ಲೇ ಮತ್ತೊಂದು ವಿಡಿಯೋ ಕ್ಲಿಪ್ ಟ್ವೀಟ್ ಮಾಡಿದ್ದು, ಅದರಲ್ಲಿ ಕನ್ನಡದಲ್ಲಿ ಮಾತನಾಡಿದ ಕೆಪಿಎಲ್ ಆಡದಿರುವ ಹಿನ್ನೆಲೆಯನ್ನು ವಿವರಿಸಿದ್ದಾರೆ.