
ಇತ್ತೀಚೆಗಷ್ಟೇ ಟೀಮ್ ಇಂಡಿಯಾದ ಕ್ರಿಕೆಟಿಗರಾದ ಸುರೇಶ್ ರೈನಾ ಮತ್ತು ಇರ್ಫಾನ್ ಪಠಾಣ್ ಲೈವ್ ಸಂವಾದದಲ್ಲಿ ವಿಶೇಷ ಬೇಡಿಕೆಯೊಂದನ್ನು ಇಟ್ಟಿದ್ದರು. ವಿದೇಶಿ ಟಿ20 ಲೀಗ್ಗಳಲ್ಲಿ ಭಾರತೀಯ ಕ್ರಿಕೆಟಿಗರಿಗೂ ಪಾಲ್ಗೊಳ್ಳಲು ಅನುವು ಮಾಡಿಕೊಡಬೇಕೆಂದು ಅವರು ಮನವಿ ಮಾಡಿಕೊಂಡಿದ್ದರು. ಇದು ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು.
ಇದೇ ವಿಚಾರವಾಗಿ ಭಾರತದ ಮತ್ತೋರ್ವ ಕ್ರಿಕೆಟಿಗ ಕನ್ನಡಿಗ ರಾಬಿನ್ ಉತ್ತಪ್ಪ ಕೂಡ ಧ್ವನಿಯೆತ್ತಿದ್ದಾರೆ. ಭಾರತಿಯ ಕ್ರಿಕೆಟಿಗರಿಗೆ ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಬೇಕೆಂದು ಉತ್ತಪ್ಪ ಕೂಡ ಬೇಡಿಕೆಯನ್ನು ಇಟ್ಟಿದ್ದಾರೆ. ಒಂದೆರಡು ಲೀಗ್ಗಳಲ್ಲಾದರು ಪಾಲ್ಗೊಳ್ಳುವ ಅವಕಾಶ ಸಿಕ್ಕರೆ ಚೆನ್ನಾಗಿರುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ.
ಬಿಬಿಸಿ ವಾಹಿನಿಯ ದೂಸ್ರಾ ಪಾಡ್ಕಾಸ್ಟ್ ಕಾರ್ಯಕ್ರಮದಲ್ಲಿ ಪಾಲ್ಗೊಡಿದ್ದ ಉತ್ತಪ್ಪ ಈ ವಿಚಾರವನ್ನು ಹೇಳಕೊಂಡಿದ್ದಾರೆ. ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳು ಇರುವ ನಿರ್ಬಂಧವನ್ನು ತೆಗೆದುಹಾಕಬೇಕು ಎಂದ ಉತ್ತಪ್ಪ ಇದರಿಂದಾಗಿ ನಮಗೆ ಇನ್ನಷ್ಟು ಕಲಿಯಲು ಮತ್ತು ಬೆಳೆಯಲು ಸಕಾಯಕವಾಗುತ್ತದ ಎಂದಿದ್ದಾರೆ.
ನಮಗೂ ವಿದೇಶಿ ಲೀಗ್ಗಳಲ್ಲಿ ಪಾಲ್ಗೊಳ್ಳಲು ದಯವಿಟ್ಟು ಅವಕಾಶವನ್ನು ನೀಡಿ. ದೇವರ ಮೇಲೆ ಆಣೆಯಿಟ್ಟು ಹೇಳುತ್ತೇನೆ, ಬೇರೆಲ್ಲೂ ಹೋಗಿ ಆಡಲು ನಮಗೆ ಅವಕಾಸ ದೊರೆಯದ ಕಾರಣ ನಮಗೂ ನೋವಾಗುತ್ತದೆ. ಯಾಕೆಂದರೆ ಕ್ರೀಡೆಯ ವಿದ್ಯಾರ್ಥಿಯಾಗಿ ನಮಗೂ ಕಲಿಯಲು ಮತ್ತು ಇನ್ನಷ್ಟು ಬೆಳೆಯಲು ಸಾಧ್ಯವಾಗುತ್ತದೆ ಎಂದು ಉತ್ತಪ್ಪ ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ ಉತ್ತಪ್ಪ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಕಾರ್ಯ ವೈಖರಿಯ ಬಗ್ಗೆ ಪ್ರಶಂಸೆಯನ್ನು ವ್ಯಕ್ತಪಡಿಸಿದರು. ಭಾರತದಲ್ಲಿ ಕ್ರಿಕೆಟ್ ಈಗ ಇರುವ ಸ್ಥಿತಿಗೆ ಬರಲು ಕಾರಣ ಗಂಗೂಲಿ. ಹೀಗಾಗಿ ಗಂಗೂಲಿಯಿಂದಾಗಿ ಕ್ರಿಕೆಟ್ಗೆ ಮತ್ತಷ್ಟು ಒಳಿತಾಗುತ್ತದೆ. ನಮ್ಮ ಬೇಡಿಕೆಯ ಬಗ್ಗೆಯೂ ಗಂಗೂಲಿ ಗಮನಹರಿಸುವ ನಿರೀಕ್ಷೆಯಿದೆ ಎಂದು ಉತ್ತಪ್ಪ ಭರವಸೆ ವ್ಯಕ್ತಪಡಿಸಿದ್ದಾರೆ.