ಉತ್ತಪ್ಪ- ಕರ್ನಾಟಕ ಬಿಟ್ಟು ಕೇರಳ ಪರ ಬ್ಯಾಟಿಂಗ್ ಏಕೆ?
ಬೆಂಗಳೂರು, ಜೂನ್ 20: ಕೊಡಗಿನ ರಾಬಿನ್ ಉತ್ತಪ್ಪ ಅವರು ಕರ್ನಾಟಕ ತೊರೆದು ಕೇರಳ ಪರ ಬ್ಯಾಟ್ ಬೀಸಲು ಮುಂದಾಗಿದ್ದಾರೆ. ಮುಂದಿನ ರಣಜಿ ಋತುವಿನಲ್ಲಿ ಕೇರಳ ರಾಜ್ಯ ಪರ ರಾಬಿನ್ ಉತ್ತಪ್ಪ ಅವರು ಆಡಲು ಕರ್ನಾಟಕ ಕ್ರಿಕೆಟ್ ಮಂಡಳಿ(ಕೆಎಸ್ ಸಿಎ) ಪತ್ರ ನೀಡಿದೆ.
ರಾಬಿನ್ ಉತ್ತಪ್ಪ ಅವರು ವಲಸೆ ಹೋಗಲು ಯಾವುದೇ ಅಡ್ಡಿ ಇಲ್ಲ, ಕೇರಳದ ಪರ ಆಡಬಹುದಾಗಿದೆ ಎಂದು ಎನ್ಒಸಿ ನೀಡಲಾಗಿದೆ. 31 ವರ್ಷ ವಯಸ್ಸಿನ ರಾಬಿನ್ ಉತ್ತಪ್ಪ ಅವರು ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ನಲ್ಲಿ ಉತ್ತಮ ಪ್ರದರ್ಶನ ನೀಡಿದರೂ ಟೀಂ ಇಂಡಿಯಾಕ್ಕೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ.
ಬಲಗೈ ಬ್ಯಾಟ್ಸ್ ಮನ್ ಹಾಗೂ ವಿಕೆಟ್ ಕೀಪರ್ ರಾಬಿನ್ ಅವರು 17 ವರ್ಷ ವಯಸ್ಸಿನಲ್ಲಿದ್ದಾಗ ಕರ್ನಾಟಕ ಪರ 2002ರಲ್ಲಿ ಚೊಚ್ಚಲ ಪ್ರಥಮ ದರ್ಜೆ ಪಂದ್ಯವನ್ನಾಡಿದ್ದರು.
ಉತ್ತಪ್ಪ ಅವರು ಕರ್ನಾಟಕ ರಣಜಿ ತಂಡವನ್ನು ತೊರೆಯುವ ಬಗ್ಗೆ ಅನೇಕ ದಿನಗಳಿಂದ ಮಾತುಕತೆ ನಡೆಯುತ್ತಿತ್ತು. ಸದ್ಯ ವಿದೇಶಿ ಪ್ರವಾಸದಲ್ಲಿರುವ ರಾಬಿನ್ ಅವರು ಕೇರಳ ಪರ ಆಡಲು ಮುಂದಾಗಿರುವ ಸುದ್ದಿ ತಿಳಿದು ಕೇರಳದ ಕ್ರಿಕೆಟರ್ಸ್ ಹಾಗೂ ಅಭಿಮಾನಿಗಳು ಮುಕ್ತವಾಗಿ ಸ್ವಾಗತಿಸಿದ್ದಾರೆ. ರಾಬಿನ್ ಅವರ ನಿರ್ಧಾರಕ್ಕೆ ಏನು ಕಾರಣ ಮುಂದೆ ಓದಿ...

ಕಳೆದ ಸೀಸನ್ ನಲ್ಲಿ ವೈಫಲ್ಯ
2016-17 ನೇ ಸಾಲಿನ ರಣಜಿ ಋತುವಿನಲ್ಲಿ ರಾಬಿನ್ ಅವರು ವೈಫಲ್ಯ ಕಂಡರು ಎನ್ನುವುದಕ್ಕಿಂತ ಅವರನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ ಎನ್ನಬಹುದು. ಕರ್ನಾಟಕ ಪರ ಕೇವಲ 6 ಪಂದ್ಯಗಳನ್ನಾಡಿದ ರಾಬಿನ್ ಅವರು ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೆಣಗಾಡಬೇಕಾಯಿತು. ಹಾಗೆ ನೋಡಿದರೆ ಐಪಿಎಲ್ ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಪರ ಉತ್ತಮ ಪ್ರದರ್ಶನವನ್ನು ನೀಡಿದರು.

ಪ್ರತಿಭಾವಂತ ಕ್ರಿಕೆಟರ್
2007ರ ಟಿ20 ವಿಶ್ವಕಪ್ ಟೂರ್ನಮೆಂಟ್ ನಲ್ಲಿ ಭಾರತದ ಪರ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರವಹಿಸಿದ್ದರು. ಕರ್ನಾಟಕದಲ್ಲಿ ಆರಂಭಿಕ ಆಟಗಾರನ ಸ್ಥಾನಕ್ಕೆ ಹಾಗೂ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಸ್ಥಾನಕ್ಕೆ ಭಾರಿ ಪೈಪೋಟಿ ಇದೆ. ಕೆಎಲ್ ರಾಹುಲ್ ಹಾಗೂ ಕರುಣ್ ನಾಯರ್ ಅವರ ಉತ್ತಮ ಪ್ರದರ್ಶನದಿಂದಾಗಿ ರಾಬಿನ್ ಅವರು ಅವಕಾಶ ವಂಚಿತರಾದರು.

NOC ನೀಡಿದ ಕೆಎಸ್ ಸಿಎ
ಯಾವುದೇ ರಾಜ್ಯದ ಕ್ರಿಕೆಟರ್ ರೊಬ್ಬರು ಮತ್ತೊಂದು ರಾಜ್ಯಕ್ಕೆ ವಲಸೆ ಹೋಗುವುದು ಅಥವಾ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಲೀಗ್ ಗಳಲ್ಲಿ ಆಡಲು ಆ ರಾಜ್ಯದ ಕ್ರಿಕೆಟ್ ಸಂಸ್ಥೆ ಅನುಮತಿ ಪತ್ರ ಅಗತ್ಯ. ಅದರಂತೆ, ರಾಬಿನ್ ಉತ್ತಪ್ಪ ಅವರು ಕೇರಳದ ಪರ ಆಡಲು ನೋ ಅಬ್ಜೆಕ್ಷನ್ ಪ್ರಮಾಣ ಪತ್ರವನ್ನು ಕಳೆದ ವಾರವೇ ನೀಡಲಾಗಿದೆ ಎಂದು ಕೆಎಸ್ ಸಿಎ ಕಾರ್ಯದರ್ಶಿ ಸುಧಾಕರ್ ರಾವ್ ಅವರು ಒನ್ಇಂಡಿಯಾಕ್ಕೆ ತಿಳಿಸಿದ್ದಾರೆ.

ಕೇರಳ ತಂಡಕ್ಕೆ ಬಲ
1996ರಲ್ಲಿ ಶ್ರೀಲಂಕಾ ತಂಡ ವಿಶ್ವಕಪ್ ಗೆಲ್ಲಲು ನೆರವಾಗಿದ್ದ ಕೋಚ್ ಡೇವ್ ವಾಟ್ ಮೋರ್ ಅವರನ್ನು ಕೇರಳ ತಂಡ ಈಗ ಮುಖ್ಯ ಕೋಚ್ ಆಗಿ ನೇಮಿಸಿದೆ. ಈಗ ರಾಬಿನ್ ಉತ್ತಪ್ಪರಂಥ ಅನುಭವಿ ಆಟಗಾರ ಆಗಮಿಸುತ್ತಿರುವುದು ತಂಡಕ್ಕೆ ಹೆಚ್ಚಿನ ಬಲ ತರಲಿದೆ.
ಪ್ರತಿಭಾ ವಲಸೆ ಹೊಸದೇನಲ್ಲ, ಅಮಿತ್ ವರ್ಮಾ, ಯರೇಗೌಡ ಸೇರಿದಂತೆ ಕರ್ನಾಟಕದ ಆಟಗಾರರು ಬೇರೆ ರಾಜ್ಯ, ತಂಡವನ್ನು ರಣಜಿಯಲ್ಲಿ ಈ ಹಿಂದೆ ಪ್ರತಿನಿಧಿಸಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications