
ಮ್ಯಾಂಚೆಸ್ಟರ್, ಜೂನ್ 17: ಭಾರತ ಮತ್ತು ಪಾಕಿಸ್ತಾನ ನಡುವೆ ಭಾನುವಾರ ನಡೆದ ವಿಶ್ವಕಪ್ ಪಂದ್ಯದಲ್ಲಿ ಟೀಮ್ ಇಂಡಿಯಾ ಡಕ್ವರ್ತ್ ಲೂಯಿಸ್ ನಿಯಮದನ್ವಯ 89 ರನ್ಗಳ ಭರ್ಜರಿ ಜಯ ದಾಖಲಿಸಿತು. ತಂಡದ ಉಪನಾಯಕ ರೋಹಿತ್ ಶರ್ಮಾ ಅಮೋಘ ಶತಕದ ಮೂಲಕ ಜಯದ ರೂವಾರಿಯಾದರು.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಟೂರ್ನಿಯಲ್ಲಿ ಎರಡನೇ ಬಾರಿ ಪಂದ್ಯಶ್ರೇಷ್ಠ ಗೌರವ ಪಡೆದಿರುವ ರೋಹಿತ್ ಶರ್ಮಾ, ಪಾಕ್ ವಿರುದ್ಧದ ಪಂದ್ಯದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ತಮ್ಮ ಅನುಭವ ಹಂಚಿಕೊಂಡರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಪತ್ರಕರ್ತನಿಗೆ ರೋಹಿತ್ ನೀಡಿದ ಅದ್ಭುತ ಉತ್ತರ ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.
ಪತ್ರಿಕಾಗೋಷ್ಠಿಯಲ್ಲಿ ಪಾಕ್ ಪತ್ರಕರ್ತನೊಬ್ಬ ಪಾಕಿಸ್ತಾನದ ಬ್ಯಾಟ್ಸ್ಮನ್ಗಳು ಅತ್ಯಂತ ಕಳಪೆ ಪ್ರದರ್ಶನ ನೀಡುತ್ತಿದ್ದಾರೆ. ಅವರು ಮರಳಿ ಉತ್ತಮ ಪ್ರದರ್ಶನ ನೀಡುವಂತಾಗಲು ನೀವು ಯಾವ ಸಲಹೆ ನೀಡುತ್ತೀರಿ ಎಂದು ಹಿಟ್ಮ್ಯಾನ್ ಖ್ಯಾತಿಯ ರೋಹಿತ್ಗೆ ಗೂಗ್ಲಿ ಎಸೆದರು.
ಇದಕ್ಕೆ ಅದ್ಭುತವಾಗಿ ಉತ್ತರಿಸಿದ ರೋಹಿತ್, "ನಾನು ಪಾಕಿಸ್ತಾನ ತಂಡದ ಕೋಚ್ ಆದರೆ ಮಾತ್ರವೇ ಅವರಿಗೆ ಸಲಹೆ ನೀಡುತ್ತೇನೆ. ಈಗೇನನ್ನು ಹೇಳಲಿ,'' ಎಂದು ಹೇಳುವ ಮೂಲಕ ಪ್ರತಿಕಾಗೋಷ್ಠಿಯಲ್ಲಿ ಇದ್ದ ಎಲ್ಲರ ಮುಖದಲ್ಲೂ ನಗು ಮೂಡುವಂತೆ ಮಾಡಿದರು.
ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಭಾರತ ರೋಹಿತ್ ಶರ್ಮಾ ಅವರ ಅದ್ಭುತ 140 ರನ್ಗಳ ಶತಕದೊಂದಿಗೆ 50 ಓವರ್ಗಳಲ್ಲಿ 336/5 ರನ್ಗಳ ಶಿಖರ ನಿರ್ಮಿಸಿತು. ಬಳಿಕ ಗುರಿ ಬೆನ್ನತ್ತಿದ ಪಾಕಿಸ್ತಾನಕ್ಕೆ ಮಳೆಯಿಂದಾಗಿ ಅಡಚಣೆಯಾದ ಕಾರಣ ಡಕ್ವರ್ತ್ ಲೂಯಿಸ್ ನಿಯಮದನ್ವಯ 40 ಓವರ್ಗಳಲ್ಲಿ 302 ರನ್ಗಳ ಪರಿಷ್ಕೃತ ಗುರಿ ನೀಡಲಾಯಿತು. ಅಂತಿಮವಾಗಿ ಪಾಕ್ ಪಡೆ 40 ಓವರ್ಗಳಳಲ್ಲಿ 6 ವಿಕೆಟ್ಗೆ 212 ರನ್ಗಳನ್ನು ಮಾತ್ರವೇ ಗಳಿಸಲು ಶಕ್ತವಾಗಿ ಸಳಿಗೆ ಶರಣಾಯಿತು.
ಇದೇ ವೇಳೆ ಪತ್ರಕರ್ತರೊಡನೆ ಮಾತನಾಡಿದ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ರೋಹಿತ್ ಮತ್ತು ಕುಲ್ದೀಪ್ ಅವರ ಪ್ರದರ್ಶನವನ್ನು ಗುಣಗಾನ ಮಾಡಿದ್ದಾರೆ. "ರೋಹಿತ್ ಅವರ ಶತಕ ಅದ್ಭುತವಾಗಿತ್ತು. ಒಡಿಐನಲ್ಲಿ ತಾವು ಅದ್ಭುತ ಆಟಗಾರ ಎಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟರು. ಕುಲ್ದೀಪ್ ಪ್ರದರ್ಶನ ಕೂಡ ಅಷ್ಟೇ ಅದ್ಭುತವಾಗಿತ್ತು. ಬಾಬರ್ ಅಝಾಮ್ ಅವರ ವಿಕೆಟ್ ಪಡೆದ ಎಸೆತವಂತೂ ಅಮೋಘವಾಗಿತ್ತು. ಉತ್ತಮವಾಗಿ ಆಡುತ್ತಿರುವ ಬ್ಯಾಟ್ಸ್ಮನ್ ವಿಕೆಟ್ ಪಡೆಯುವುದು ಅಷ್ಟು ಸುಲಭದ ಮಾತಲ್ಲ. ಇಂಗ್ಲೆಂಡ್ಗೆ ಬಂದ ಮೇಲೆ ಕುಲ್ದೀಪ್ ಅವರ ಶ್ರೇಷ್ಠ ಪ್ರದರ್ಶನವಿದು,'' ಎಂದು ಹೇಳಿದ್ದಾರೆ.