Rohit Sharma: ಟೀಮ್ ಇಂಡಿಯಾದ ರೋಹಿತ್ ಶರ್ಮಾ ಅವರು ಇಂದು ವಿಶ್ವದ ಶ್ರೇಷ್ಠ ಬ್ಯಾಟರ್ಗಳಲ್ಲಿ ಒಬ್ಬರಾಗಿರಬಹುದು. ಆದರೆ, 2011ರ ವಿಶ್ವಕಪ್ ತಂಡದಲ್ಲಿ ಅವರಿಗೆ ಸ್ಥಾನ ಸಿಗದಿರುವುದು ಇಂದಿಗೂ ಒಂದು ದೊಡ್ಡ ಚರ್ಚೆಯ ವಿಷಯವಾಗಿತ್ತು. ಇದೀಗ ಈ ಬಗ್ಗೆ ಬಿಸಿಸಿಐ ಮಾಜಿ ಮುಖ್ಯ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು ಮನಬಿಚ್ಚಿ ಮಾತನಾಡಿದ್ದು, ವಿಚಾರವೊಂದನ್ನು ರಿವೀಲ್ ಮಾಡಿದ್ದಾರೆ.
ಭಾರತ ತಂಡದ ಮಾಜಿ ಆಯ್ಕೆದಾರ ಕೃಷ್ಣಮಾಚಾರಿ ಶ್ರೀಕಾಂತ್ ಅವರು, 2011ರ ಐಸಿಸಿ ಕ್ರಿಕೆಟ್ ವಿಶ್ವಕಪ್ಗೆ ಭಾರತ ತಂಡವನ್ನು ಆಯ್ಕೆ ಮಾಡುವಾಗ ಹಿಟ್ ಮ್ಯಾನ್ ರೋಹಿತ್ ಶರ್ಮಾ ಅವರನ್ನು ಕೈಬಿಟ್ಟಿದ್ದಕ್ಕಾಗಿ ಅವರಲ್ಲಿ ಕ್ಷಮೆಯಾಚಿಸಿರುವುದಾಗಿ ಬಹಿರಂಗಪಡಿಸಿದ್ದಾರೆ. ಇದು ಇದೀಗ ದೊಡ್ಡ ಮಟ್ಟದಲ್ಲಿ ಸದ್ದು ಮಾಡುತ್ತಿದೆ.

"ಅಂದು ರೋಹಿತ್ ಅದ್ಭುತ ಕ್ರಿಕೆಟ್ ಆಗಿದ್ದರೂ, 1983ರ ವಿಶ್ವವಿಜೇತ ತಂಡದ ಮಾದರಿಯಲ್ಲೇ ಹೆಚ್ಚು ಆಲ್ರೌಂಡರ್ಗಳನ್ನು ಒಳಗೊಂಡ ತಂಡವನ್ನು ಕಟ್ಟುವ ಉದ್ದೇಶದಿಂದ ಅವರನ್ನು ಕೈಬಿಡಲಾಗಿತ್ತು," ಎಂದು ಬಹಿರಂಗಪಡಿಸಿದ್ದಾರೆ. ಅಷ್ಟೇ ಅಲ್ಲದೆ, ಅಂದು ಮಾಡಿದ ತಪ್ಪಾದ ನಿರ್ಧಾರಕ್ಕಾಗಿ ತಾವು 2020ರಲ್ಲಿಯೇ ರೋಹಿತ್ ಅವರಲ್ಲಿ ವೈಯಕ್ತಿಕವಾಗಿ ಕ್ಷಮೆಯಾಚಿಸಿದ್ದಾಗಿಯೂ ಹೇಳುವ ಮೂಲಕ ಶ್ರೀಕಾಂತ್ ಅಚ್ಚರಿ ಮೂಡಿಸಿದ್ದಾರೆ.
ಆ ಸಮಯದಲ್ಲಿ ರೋಹಿತ್ ಶರ್ಮಾ ಅವರು ತಂಡದಲ್ಲಿ ಸ್ಥಾನ ಪಡೆಯಲು ಬೇಕಾದ ಅರ್ಹತೆಯನ್ನು ಹೊಂದಿದ್ದರು. ಆದರೂ ಸಹ ಆಯ್ಕೆಗಾರರು ಆಲ್ರೌಂಡರ್ಗಳಿಗೆ ಹೆಚ್ಚಿನ ಆದ್ಯತೆ ನೀಡಿದ್ದರು. ಭಾರತ ತಂಡವು 1983ರಲ್ಲಿ ವಿಶ್ವಕಪ್ ಗೆದ್ದಾಗ ಅನುಸರಿಸಿದ್ದ ತಂತ್ರದಿಂದ ಪ್ರೇರಿತರಾಗಿ, 2011ರ ತಂಡದಲ್ಲೂ ಹೆಚ್ಚಿನ ಆಲ್ರೌಂಡರ್ಗಳನ್ನು ಸೇರಿಸಿಕೊಳ್ಳಲು ನಿರ್ಧರಿಸಲಾಗಿತ್ತು. ಈ ಕಾರಣದಿಂದಾಗಿಯೇ ಅಂದು ರೋಹಿತ್ ಅವರಿಗೆ ಅವಕಾಶ ತಪ್ಪಿತ್ತು ಎಂದು ಅವರು ತಿಳಿಸಿದ್ದಾರೆ.
ಇನ್ನೂ ಒಂದು ಬಾರಿಯೂ ಏಕದಿನ ವಿಶ್ವಕಪ್ ಗೆಲ್ಲದ ರೋಹಿತ್ ಶರ್ಮಾ ಅವರು, ಐರ್ಲೆಂಡ್ ವಿರುದ್ಧ ತಮ್ಮ ಚೊಚ್ಚಲ ಪಂದ್ಯವನ್ನಾಡಿದ್ದರು. 2011ರ ವಿಶ್ವಕಪ್ ತಂಡದಿಂದ ಹೊರಬೀಳುವ ಮೊದಲು ಅವರು ಸುಮಾರು 57 ಪಂದ್ಯಗಳಲ್ಲಿ ಏಳು ಅರ್ಧಶತಕಗಳೂ ಸೇರಿದಂತೆ 1,200ಕ್ಕೂ ಹೆಚ್ಚು ರನ್ಗಳನ್ನು ಗಳಿಸಿದ್ದರು.
ವಿಶೇಷವಾಗಿ, ಆಸ್ಟ್ರೇಲಿಯಾದಲ್ಲಿ ನಡೆದ 2007-08ರ ಕಾಮನ್ವೆಲ್ತ್ ಬ್ಯಾಂಕ್ ಸರಣಿಯಲ್ಲಿ 235 ರನ್ ಗಳಿಸುವ ಮೂಲಕ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಆರಂಭಿಕವಾಗಿ ಎಲ್ಲರ ಗಮನ ಸೆಳೆದಿದ್ದರು. ಅವರ ಪ್ರತಿಭೆ ಮೊದಲೇ ಸಾಬೀತಾಗಿದ್ದರೂ, 2011ರ ತಂಡದಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿರಲಿಲ್ಲ.
ಪಾಪ ಅವರು, ಆ ಅವಕಾಶವನ್ನೇ ಮಿಸ್ ಮಾಡಿಕೊಂಡರು ಎಂದು 'ದಿ ವೀಕ್' ಪಾಡ್ಕಾಸ್ಟ್ನಲ್ಲಿ ಶ್ರೀಕಾಂತ್ ತಿಳಿಸಿದ್ದಾರೆ. "ಆ ಬಗ್ಗೆ ನನಗೆ ಇಂದಿಗೂ ಬೇಸರವಿದೆ. 2020ರಲ್ಲಿ ಒಂದು ದಿನ ನಾನು ರೋಹಿತ್ ಶರ್ಮಾಗೆ, 'ನನ್ನನ್ನು ಕ್ಷಮಿಸಿ ಬಾಸ್' ಎಂದು ಹೇಳಿದ್ದೆ. ಅದು ಬೇಕಂತಲೇ ಮಾಡಿದ ಕೆಲಸವಲ್ಲ, ನಮಗೆ ಕೇವಲ ಹೆಚ್ಚಿನ ಆಲ್ರೌಂಡರ್ ಬೇಕಿದ್ದರು," ಎಂದು ಅವರು ಹೇಳಿದ್ದಾರೆ.
ನೀವು 1983ರ ವಿಶ್ವಕಪ್ ತಂಡವನ್ನು ಗಮನಿಸಿದರೆ, ರೋಜರ್ ಬಿನ್ನಿ ಒಬ್ಬ ಆಲ್ರೌಂಡರ್ ಆಗಿದ್ದರು ಮತ್ತು ತಂಡದ ಪ್ರಮುಖ ಆಲ್ರೌಂಡರ್ ಕಪಿಲ್ ದೇವ್ ಆಗಿದ್ದರು. ಶ್ರೀಕಾಂತ್, ಸೈಯದ್ ಕಿರ್ಮಾನಿ ಮತ್ತು ಸುನಿಲ್ ಗವಾಸ್ಕರ್ ಅವರನ್ನು ಹೊರತುಪಡಿಸಿ, ತಂಡದಲ್ಲಿದ್ದ ಬಹುತೇಕ ಎಲ್ಲರೂ ಬೌಲಿಂಗ್ ಮಾಡುತ್ತಿದ್ದರು," ಎಂದು ಅವರು ಹೇಳಿದ್ದಾರೆ.
ಏಕದಿನ ವಿಶ್ವಕಪ್ನಿಂದ ಹೊರಗುಳಿದಿದ್ದು ರೋಹಿತ್ ಶರ್ಮಾ ಅವರ ಯಶಸ್ವಿ ವೃತ್ತಿಜೀವನದಲ್ಲಿ ಒಂದು ಮರುಕಳಿಸುವ ನೋವಿನ ಸಂಗತಿಯಾಗಿದೆ ಮತ್ತು 2011ರ ಆ ಆಯ್ಕೆಯ ನಿರ್ಧಾರವು ಇಂದಿಗೂ ಪ್ರಮುಖವಾಗಿ ಚರ್ಚಿಸಲ್ಪಡುತ್ತದೆ. ಅಂದು ಎಂ.ಎಸ್. ಧೋನಿ ನಾಯಕತ್ವದ ಭಾರತ ತಂಡವು ಸ್ವದೇಶದಲ್ಲಿ ವಿಶ್ವಕಪ್ ಗೆದ್ದ ಮೊದಲ ತಂಡ ಎಂಬ ಇತಿಹಾಸ ನಿರ್ಮಿಸಿತ್ತು. ಅಂತಹ ದೊಡ್ಡ ಮೈಲಿಗಲ್ಲಿನಿಂದ ವಂಚಿತರಾದರೂ ಸಹ, ಆ ಹಿನ್ನಡೆಯನ್ನು ಮೆಟ್ಟಿ ನಿಂತ ರೋಹಿತ್, ನಂತರದ ದಿನಗಳಲ್ಲಿ ಭಾರತದ ಅತ್ಯಂತ ಯಶಸ್ವಿ ಸೀಮಿತ ಓವರ್ಗಳ ಬ್ಯಾಟರ್ ಮತ್ತು ಯಶಸ್ವಿ ನಾಯಕನಾಗಿ ತಮ್ಮನ್ನು ತಾವು ಗುರುತಿಸಿಕೊಂಡರು.