
ಬಿಸಿಸಿಐ ಟಿ20 ಪಂದ್ಯಗಳಿಗೆ ಯುವ ತಂಡವನ್ನು ಬಯಸುತ್ತದೆ
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ತಾರಾ ಜೋಡಿಯು ಟಿ20 ಆಯ್ಕೆಗೆ ತಮ್ಮನ್ನು ತಾವು ಲಭ್ಯವಾಗುವಂತೆ ಮಾಡಿದೆ ಎಂದು ಹೇಳಲಾಗಿದ್ದು, "ಬಿಸಿಸಿಐ ಹಾರ್ದಿಕ್ ಪಾಂಡ್ಯ ನಾಯಕತ್ವದಲ್ಲಿ ಟಿ20 ಪಂದ್ಯಗಳಿಗೆ ಯುವ ತಂಡವನ್ನು ಬಯಸುತ್ತದೆ," ಎಂದು ಮೂಲಗಳು ತಿಳಿಸಿವೆ.
ಇತ್ತೀಚೆಗೆ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಸರಣಿಗೆ ಹಾರ್ದಿಕ್ ಪಾಂಡ್ಯ ಅವರನ್ನು ಭಾರತ ಟಿ20 ತಂಡದ ನಾಯಕರನ್ನಾಗಿ ಆಯ್ಕೆ ಮಾಡಿದಾಗ, ಟಿ20 ನಾಯಕನಾಗಿ ರೋಹಿತ್ ಶರ್ಮಾ ಅವರ ಸಮಯ ಅಂತ್ಯಗೊಳ್ಳಬಹುದು ಎಂಬ ಸಾಕಷ್ಟು ಊಹಾಪೋಹಗಳು ಹುಟ್ಟಿಕೊಂಡಿವೆ.
ಇನ್ನು ಭಾರತದ ಮಾಜಿ ನಾಯಕ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಇಬ್ಬರೂ ಶ್ರೀಲಂಕಾ ವಿರುದ್ಧದ ಟಿ20 ತಂಡದ ಭಾಗವಾಗಿರಲಿಲ್ಲ, ಇದೀಗ ಏಕದಿನ ಸರಣಿಗೆ ಮರಳಿದ್ದಾರೆ.

2007ರಲ್ಲಿ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ರೋಹಿತ್ ಶರ್ಮಾ
ರೋಹಿತ್ ಶರ್ಮಾ ಜೂನ್, 2007ರಲ್ಲಿ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದರು. ಅದೇ ವರ್ಷದ ಸೆಪ್ಟೆಂಬರ್ನಲ್ಲಿ ರೋಹಿತ್ ತಮ್ಮ ಮೊದಲ ಟಿ20 ಪಂದ್ಯವನ್ನು ಆಡಿದರು.
ಮತ್ತೊಂದೆಡೆ, ವಿರಾಟ್ ಕೊಹ್ಲಿ ಆಗಸ್ಟ್, 2008ರಲ್ಲಿ ಶ್ರೀಲಂಕಾ ವಿರುದ್ಧದ ಏಕದಿನ ಪಂದ್ಯದಲ್ಲಿ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರೆ, ಜೂನ್, 2009ರಲ್ಲಿ ವಿರಾಟ್ ಕೊಹ್ಲಿ ತಮ್ಮ ಮೊದಲ ಟಿ20 ಪಂದ್ಯನ್ನು ಆಡಿದರು. ಇಬ್ಬರೂ ಟಿ20 ವಿಶ್ವಕಪ್ಗಳಲ್ಲಿ ಭಾರತವನ್ನು ಮುನ್ನಡೆಸಿದ್ದು, ನಾಯಕರಾಗಿ ಐಸಿಸಿ ವಿಶ್ವಕಪ್ ಟ್ರೋಫಿ ಗೆಲ್ಲಲು ವಿಫಲರಾಗಿದ್ದಾರೆ.
ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ವಿರಾಟ್ ಕೊಹ್ಲಿ 115 ಪಂದ್ಯಗಳಲ್ಲಿ 52.73ರ ಸರಾಸರಿಯಲ್ಲಿ 4008 ರನ್ ಗಳಿಸುವ ಮೂಲಕ ಅಗ್ರಸ್ಥಾನದಲ್ಲಿದ್ದಾರೆ. ಇನ್ನು ರೋಹಿತ್ ಶರ್ಮಾ 148 ಪಂದ್ಯಗಳಲ್ಲಿ 31.32 ಸರಾಸರಿಯಲ್ಲಿ 3853 ರನ್ ಗಳಿಸಿ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ.

ಸತತವಾಗಿ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ
ಇದೀಗ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಗೂ ಮುನ್ನ ರೋಹಿತ್ ಶರ್ಮಾ ತಮ್ಮ ಟಿ20 ಕ್ರಿಕೆಟ್ ಭವಿಷ್ಯದ ಬಗ್ಗೆ ಹಬ್ಬಿರುವ ಊಹಾಪೋಹಗಳಿಗೆ ಉತ್ತರಿಸಿದರು ಮತ್ತು ಚುಟುಕು ಕ್ರಿಕೆಟ್ ಅನ್ನು 'ಬಿಟ್ಟುಕೊಡಲು ನಿರ್ಧರಿಸಿಲ್ಲ' ಎಂದು ಖಚಿತಪಡಿಸಿದರು.
"ಮೊದಲನೆಯದಾಗಿ ಸತತವಾಗಿ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ. ಎಲ್ಲಾ ಸ್ವರೂಪದ ಕ್ರಿಕೆಟ್ ಆಡುವ ಆಟಗಾರರಿಗೆ ಹೆಚ್ಚಿನ ವಿಶ್ರಾಂತಿಯನ್ನು ನೀಡಬೇಕು. ನನಗೂ ಕೂಡ ವಿಶ್ರಾಂತಿಯ ಅಗತ್ಯವಿರುತ್ತದೆ," ಎಂದರು.

ನಾನು ಟಿ20 ಸ್ವರೂಪವನ್ನು ಬಿಟ್ಟುಕೊಡಲು ನಿರ್ಧರಿಸಿಲ್ಲ
"ನಾವು ಮುಂದೆ ನ್ಯೂಜಿಲೆಂಡ್ ವಿರುದ್ಧ ಮೂರು ಟಿ20 ಪಂದ್ಯಗಳನ್ನು ಆಡಲಿದ್ದೇವೆ. 2023ರ ಐಪಿಎಲ್ ನಂತರ ಏನಾಗುತ್ತದೆ ಎಂಬುದನ್ನು ನೋಡುತ್ತೇವೆ. ಸದ್ಯಕ್ಕೆ ನಾನು ಟಿ20 ಸ್ವರೂಪವನ್ನು ಬಿಟ್ಟುಕೊಡಲು ನಿರ್ಧರಿಸಿಲ್ಲ," ಎಂದು ರೋಹಿತ್ ಶರ್ಮಾ ಸೋಮವಾರ ನಡೆದ ಪಂದ್ಯದ ಪೂರ್ವ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮಂಗಳವಾರ (ಜನವರಿ 10) ಗುವಾಹಟಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡ ಮೂರು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯವನ್ನು ಆಡಲಿದೆ. ಜನವರಿ 12 ಮತ್ತು 15ರಂದು ಕ್ರಮವಾಗಿ ಕೋಲ್ಕತ್ತಾ ಮತ್ತು ತಿರುವನಂತಪುರದಲ್ಲಿ ಉಳಿದ ಎರಡು ಏಕದಿನ ಪಂದ್ಯಗಳು ನಡೆಯಲಿವೆ.


Click it and Unblock the Notifications
