
ಮುಂಬೈ, ಏಪ್ರಿಲ್ 12: ಶನಿವಾರ (ಏಪ್ರಿಲ್ 13) ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್ ಪಂದ್ಯಕ್ಕೆ ಮುಂಬೈ ಇಂಡಿಯನ್ಸ್ ನಾಯಕ ರೋಹಿತ್ ಶರ್ಮಾ ಲಭ್ಯರಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಕ್ರಿಕೆಟ್ ತಂಡದ ಕಾರ್ಯಾಚರಣೆ ನಿರ್ದೇಶಕ ಜಹೀರ್ ಖಾನ್ ಶುಕ್ರವಾರ (ಏಪ್ರಿಲ್ 12) ತಿಳಿಸಿದ್ದಾರೆ.
ಸ್ಟೋರಿಗಳು, ಪಾಯಿಂಟ್ ಟೇಬಲ್ ಇನ್ನಿತರ ಕುತೂಹಲಕಾರಿ ಅಂಕಿ-ಅಂಶಗಳು 'ಮೈಖೇಲ್ ಕನ್ನಡ-ಐಪಿಎಲ್ ವಿಶೇಷ ಮುಖಪುಟ'ದಲ್ಲಿದೆ
ಕಾಲಿನ ಸ್ನಾಯು ಸೆಳೆತಕ್ಕೆ (leg spasm) ತುತ್ತಾಗಿದ್ದ ರೋಹಿತ್, ಬುಧವಾರ (ಏಪ್ರಿಲ್ 10) ನಡೆದಿದ್ದ ಪಂಜಾಬ್ ವಿರುದ್ಧದ ಪಂದ್ಯದಿಂದ ಹೊರಗುಳಿದಿದ್ದರು. ಅಂದು ತಂಡದ ನಾಯಕತ್ವವನ್ನು ಕೀರನ್ ಪೊಲಾರ್ಡ್ ವಹಿಸಿಕೊಂಡಿದ್ದರು. ಈ ಪಂದ್ಯದಲ್ಲಿ ಎಂಐ 3 ವಿಕೆಟ್ ರೋಚಕ ಗೆಲುವನ್ನಾಚರಿಸಿತ್ತು.
ಅಭ್ಯಾಸದ ವೇಳೆ ರೋಹಿತ್ ಗಾಯಕ್ಕೀಡಾಗಿದ್ದರು. ಶರ್ಮಾ ಅವರ ಕಾಲು ನೋವು ಚೇತರಿಕೆ ಕಂಡಿರುವ ಬಗ್ಗೆ ಮಾಹಿತಿ ನೀಡಿದ ಭಾರತದ ಮಾಜಿ ವೇಗಿ ಜಹೀರ್, 'ರೋಹಿತ್ ಈಗ ಅಭ್ಯಾಸಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಮುಂದಿನ ಪಂದ್ಯದಲ್ಲಿ ಅವರು ಆಡುವ ಬಗ್ಗೆ ನಮಗೆ ಸಂಪೂರ್ಣ ವಿಶ್ವಾಸವಿದೆ' ಎಂದಿದ್ದಾರೆ.
ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ಶನಿವಾರ ಐಪಿಎಲ್ 27ನೇ ಪಂದ್ಯದಲ್ಲಿ ಮುಂಬೈ ಮತ್ತು ರಾಜಸ್ಥಾನ್ ಸೆಣಸಾಡಲಿವೆ. ಈ ಪಂದ್ಯ 4pmಗೆ ಆರಂಭವಾಗಲಿದೆ. ಸದ್ಯ ಆಡಿರುವ 6ರಲ್ಲಿ 4 ಪಂದ್ಯ ಗೆದ್ದಿರುವ ಮುಂಬೈ ಇಂಡಿಯನ್ಸ್ ಅಂಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. 7ರಲ್ಲಿ 6 ಗೆಲುವು ಕಂಡಿರುವ ಚೆನ್ನೈ ಅಗ್ರ ಸ್ಥಾನದಲ್ಲಿದೆ.