ನವದೆಹಲಿ: ಭಾನುವಾರ (ಜ.25) ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳು ಪ್ರಕಟವಾಗಿವೆ. ಈ ಪಟ್ಟಿಯಲ್ಲಿ ಕ್ರೀಡಾ ಸಾಧಕರು ಸಹ ಸ್ಥಾನ ಪಡೆದಿದ್ದಾರೆ. ಅಲ್ಲದೆ ತರಬೇತುದಾರರು ಸಹ ಗೌರವ ತಮ್ಮದಾಗಿಸಿಕೊಂಡಿದ್ದಾರೆ. ಯಾವೆಲ್ಲಾ ಆಟಗಾರರಿಗೆ ಯಾವ ಪ್ರಶಸ್ತಿ ಸಿಕ್ಕಿದೆ ಎಂಬ ಬಗ್ಗೆ ಮಾಹಿತಿ ಇಲ್ಲಿದೆ.
ಅನುಭವಿ ಟೆನಿಸ್ ಐಕಾನ್ ವಿಜಯ್ ಅಮೃತರಾಜ್ ಅವರಿಗೆ ಪದ್ಮಭೂಷಣ ಲಭಿಸಿದೆ. ಈ ವರ್ಷ ಈ ಪ್ರಶಸ್ತಿಗೆ ಭಾಜನರಾದ ಏಕೈಕ ಕ್ರೀಡಾಪಟು ಎಂಬ ಹಿರಿಮೆ ವಿಜಯ್ ತಮ್ಮದಾಗಿಸಿಕೊಂಡಿದ್ದಾರೆ. ಅಮೃತರಾಜ್, ವಿಂಬಲ್ಡನ್ ಮತ್ತು ಯುಎಸ್ ಓಪನ್ನಲ್ಲಿ ಕ್ವಾರ್ಟರ್ ಫೈನಲ್ನಲ್ಲಿ ಪ್ರವೇಶಿಸಿ ದಾಖಲೆ ಬರೆದಿದ್ದರು. ಇವರ ಅಮೋಘ ಕ್ರೀಡಾ ಸಾಧನೆಗೆ 1974ರಲ್ಲಿ ಅರ್ಜುನ್ ಪ್ರಶಸ್ತಿ, 1983ರಲ್ಲಿ ಪದ್ಮಶ್ರೀ ಪ್ರಶಸ್ತಿ ಲಭಿಸಿತ್ತು. ಈಗ ಇವರಿಗೆ ಪದ್ಮಭೂಷಣ ಲಭಿಸಿದೆ.

ಪದ್ಮ ಶ್ರೀ ಪ್ರಶಸ್ತಿಯನ್ನು ಪಡೆದ ಆಟಗಾರರ ಪಟ್ಟಿಯಲ್ಲಿ ಟೀಮ್ ಇಂಡಿಯಾದ ನಾಯಕ ರೋಹಿತ್ ಶರ್ಮಾ ಅವರು ಕಾಣಿಸಿಕೊಂಡಿದ್ದಾರೆ. ಇವರು 2025ರಲ್ಲಿ ಟೆಸ್ಟ್ ಕ್ರಿಕೆಟ್ಗೆ ವಿದಾಯ ಹೇಳಿದ್ದರು. ಇವರು ಸದ್ಯ ಭಾರತದ ಪರ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಆಡುತ್ತಿದ್ದಾರೆ. ಇವರು ಕಳೆದ ವರ್ಷ 650 ರನ್ ಬಾರಿಸಿ ಅಬ್ಬರಿಸಿದ್ದಾರೆ. ಇವರ ಕ್ರೀಡಾ ಸಾಧನೆಯನ್ನು ಗುರುತಿಸಿ ಈ ಪ್ರಶಸ್ತಿ ನೀಡಲಾಗಿದೆ.
ನವಿ ಮುಂಬೈನ ಡಿವೈ ಪಾಟೀಲ್ ಮೈದಾನದಲ್ಲಿ ಏಕದಿನ ಮಹಿಳಾ ವಿಶ್ವಕಪ್ ಫೈನಲ್ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಭಾರತಕ್ಕೆ ಚೊಚ್ಚಲ ಬಾರಿಗೆ ವಿಶ್ವಕಪ್ ಮುಕುಟ ತೊಡಿಸಿದ ನಾಯಕಿ ಹರ್ಮನ್ ಪ್ರೀತ್ ಕೌರ್ ಅವರಿಗೂ ಪದ್ಮ ಶ್ರೀ ಸಂದಿದೆ. ಇವರು ಸದ್ಯ ಮಹಿಳಾ ಪ್ರೀಮಿಯರ್ ಲೀಗ್ನಲ್ಲಿ ಮುಂಬೈ ಇಂಡಿಯನ್ಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ.
ಪದ್ಮಶ್ರೀ ಪಡೆದ ಆಟಗಾರರ ಪಟ್ಟಿಯಲ್ಲಿ ಮಾಜಿ ವೇಗಿ ಪ್ರವೀಣ್ ಕುಮಾರ್, ಭಾರತೀಯ ಮಹಿಳಾ ಹಾಕಿ ಗೋಲ್ಕೀಪರ್ ಸವಿತಾ ಪುನಿಯಾ, ಬಲ್ದೇವ್ ಸಿಂಗ್,ಭಗವಾನದಾಸ್ ರಿಕ್ವಾರ್, ಕೆ ಪಜನಿವೇಲ್ ಕೂಡ ಸೇರಿದ್ದಾರೆ. ಈ ಬಾರಿ ಒಟ್ಟು 131 ಸಾಧಕರಿಕೆ ಪದ್ಮ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಇದರಲ್ಲಿ 5 ಪದ್ಮ ವಿಭೂಷಣ, 13 ಪದ್ಮ ಭೂಷಣ, 113 ಪಂದ್ಯ ಶ್ರೀ ಪ್ರಶಸ್ತಿಗಳು ಸೇರಿವೆ.

ವಿಜಯ್ ಅಮೃತರಾಜ್ - ಪದ್ಮಭೂಷಣ
ರೋಹಿತ್ ಶರ್ಮಾ - ಪದ್ಮಶ್ರೀ
ಹರ್ಮನ್ಪ್ರೀತ್ ಕೌರ್ ಭುಲ್ಲರ್ - ಪದ್ಮಶ್ರೀ
ಪ್ರವೀಣ್ ಕುಮಾರ್ - ಪದ್ಮಶ್ರೀ
ಸವಿತಾ ಪುನಿಯಾ - ಪದ್ಮಶ್ರೀ
ಬಲದೇವ್ ಸಿಂಗ್ - ಪದ್ಮಶ್ರೀ
ಭಗವಾನದಾಸ್ ರಿಕ್ವಾರ್ - ಪದ್ಮಶ್ರೀ
ಕೆ ಪಜನಿವೇಲ್ - ಪದ್ಮಶ್ರೀ