ಭಾರತ ತಂಡದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಸುಮಾರು ಒಂದು ವರ್ಷದ ಕಾಲ ಬೆನ್ನುನೋವಿನ ಕಾರಣದಿಂದ ಸ್ಪರ್ಧಾತ್ಮಕ ಕ್ರಿಕೆಟ್ನಿಂದ ಹೊರಗುಳಿದಿದ್ದಾರೆ. ಇದೀಗ ತಮ್ಮ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪುನರಾಗಮನವನ್ನು ನಿರೀಕ್ಷಿಸುತ್ತಿದ್ದಾರೆ.
ಕೆಲವು ವರದಿಗಳ ಪ್ರಕಾರ, ಮುಂಬರುವ ಐರ್ಲೆಂಡ್ ವಿರುದ್ಧದ ಟಿ20 ಸರಣಿಯಲ್ಲಿ ಜಸ್ಪ್ರೀತ್ ಬುಮ್ರಾ ಭಾರತ ತಂಡದ ವೇಗದ ಬೌಲಿಂಗ್ ದಾಳಿ ಮುನ್ನಡೆಸಲಿದ್ದಾರೆ ಎನ್ನಲಾಗಿದೆ.

ಬೌಲಿಂಗ್ ದಾಳಿಯಲ್ಲಿ ಜಸ್ಪ್ರೀತ್ ಬುಮ್ರಾ ನಿರ್ಣಾಯಕ ಪಾತ್ರವನ್ನು ಪರಿಗಣಿಸಿ, ಅವರ ಉಪಸ್ಥಿತಿಯು ಭಾರತೀಯ ಕ್ರಿಕೆಟ್ ತಂಡಕ್ಕೆ ದೊಡ್ಡ ಉತ್ತೇಜನ ಸಿಗಲಿದೆ.
ಜಸ್ಪ್ರೀತ್ ಬುಮ್ರಾ ಅವರ ಭಾರತ ತಂಡಕ್ಕೆ ನಿರ್ಣಾಯಕ ಸಮಯದಲ್ಲಿ ಪುನರಾಗಮನ ಮಾಡುತ್ತಿದ್ದಾರೆ. 2023ರ ಏಕದಿನ ವಿಶ್ವಕಪ್ಗೆ ಕೇವಲ ಎರಡು ತಿಂಗಳ ಅಂತರವಿದೆ. ಇದಕ್ಕೂ ಮುನ್ನ ಐರ್ಲೆಂಡ್ ವಿರುದ್ಧದ ಸರಣಿ ಮತ್ತು ಏಷ್ಯಾ ಕಪ್ನಲ್ಲಿ ಅವರು ಅಡುವುದರಿಂದ ಭಾರತದ ತಯಾರಿ ಮತ್ತು ಐಸಿಸಿ ಪಂದ್ಯಾವಳಿಯಲ್ಲಿ ಯಶಸ್ಸಿನ ಅವಕಾಶಗಳಲ್ಲಿ ಪ್ರಮುಖವಾಗಿದೆ.
ರೋಹಿತ್ ಶರ್ಮಾ ನಾಯಕತ್ವದ ಭಾರತ ತಂಡವು ಅಕ್ಟೋಬರ್ 8ರಂದು ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧ ಸೆಣಸಾಡುವ ಮೂಲಕ 2023ರ ವಿಶ್ವಕಪ್ ಅಭಿಯಾನವನ್ನು ಆರಂಭಿಸಲಿದೆ.

ಗುರುವಾರ, ಜುಲೈ 27ರಂದು ನಡೆಯುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಏಕದಿನ ಪಂದ್ಯಕ್ಕೂ ಮುನ್ನ ನಡೆದ ಪತ್ರಿಕಾಗೋಷ್ಠಿಯಲ್ಲಿ, ಭಾರತ ತಂಡದ ನಾಯಕ ರೋಹಿತ್ ಶರ್ಮಾ ಅವರು ಜಸ್ಪ್ರೀತ್ ಬುಮ್ರಾ ಅವರ ಚೇತರಿಕೆ ಕುರಿತು ಹೊಸ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
ಜಸ್ಪ್ರೀತ್ ಬುಮ್ರಾ ಅವರ ಅನುಭವದ ಪ್ರಾಮುಖ್ಯತೆಯನ್ನು ರೋಹಿತ್ ಶರ್ಮಾ ಎತ್ತಿ ತೋರಿಸಿದರು ಮತ್ತು ಅವರ ಗಾಯದ ಸ್ವರೂಪವನ್ನು ಗಮನದಲ್ಲಿಟ್ಟುಕೊಂಡು ಎಚ್ಚರಿಕೆಯ ಅಗತ್ಯತೆಯ ಬಗ್ಗೆ ಗಮನ ಸೆಳೆದರು.
ಗಂಭೀರ ಗಾಯದಿಂದ ಹಿಂದಿರುಗಿತ್ತಿರುವ ಆಟಗಾರನಿಗೆ ಪಂದ್ಯದ ಫಿಟ್ನೆಸ್ ನಿರ್ಣಾಯಕ ಅಂಶವಾಗಿದೆ. ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ತಂಡದ ಮ್ಯಾನೇಜ್ಮೆಂಟ್ ಜಸ್ಪ್ರೀತ್ ಬುಮ್ರಾ ಅವರ ಪ್ರಗತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡುತ್ತದೆ.
ಜಸ್ಪ್ರೀತ್ ಬುಮ್ರಾ ಅವರಲ್ಲಿರುವ ಅನುಭವದ ಪ್ರಮಾಣವು ಬಹಳ ಮುಖ್ಯವಾಗಿದೆ. ಇದೀಗ ಅವರು ಗಂಭೀರ ಗಾಯದಿಂದ ಬರುತ್ತಿದ್ದಾರೆ. ತಂಡವನ್ನು ಇನ್ನೂ ಘೋಷಿಸದ ಕಾರಣ ಅವರು ಐರ್ಲೆಂಡ್ಗೆ ಪ್ರಯಾಣಿಸುತ್ತಾರೆಯೇ ಎಂದು ನನಗೆ ತಿಳಿದಿಲ್ಲ,'' ಎಂದು ರೋಹಿತ್ ಶರ್ಮಾ ಹೇಳಿದರು.
"ಜಸ್ಪ್ರೀತ್ ಬುಮ್ರಾ ಸ್ಪರ್ಧಾತ್ಮಕ ಕ್ರಿಕೆಟ್ಗೆ ಪುನರಾಗಮನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆ ಮತ್ತು ಅವರು ವಿಶ್ವಕಪ್ಗೂ ಮುನ್ನ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ಆಟಗಾರನು ಗಂಭೀರವಾದ ಗಾಯದಿಂದ ಹಿಂದಿರುಗಿದಾಗ, ಪಂದ್ಯಕ್ಕೆ ಬೇಕಾದ ಫಿಟ್ನೆಸ್, ಹೊಂದಾಣಿಕೆಯ ಭಾವನೆಯು ಕೆಲವು ಪ್ರಮುಖ ಅಂಶಗಳಾಗಿವೆ. ಎಲ್ಲವೂ ಆತನ ಚೇತರಿಕೆಯ ಮೇಲೆ ಅವಲಂಬಿತವಾಗಿರುತ್ತದೆ. ನಾವು ಎನ್ಸಿಎಯೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಮತ್ತು ಈ ಸಮಯದಲ್ಲಿ ವಿಷಯಗಳು ಸಕಾರಾತ್ಮಕವಾಗಿ ಕಾಣುತ್ತಿವೆ," ಎಂದು ಭಾರತ ತಂಡದ ನಾಯಕ ರೋಹಿತ್ ಶರ್ಮಾ ತಿಳಿಸಿದರು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಜುಲೈ 21ರಂದು ಜಸ್ಪ್ರೀತ್ ಬುಮ್ರಾ ಅವರ ಪುನರ್ವಸತಿ ಪ್ರಕ್ರಿಯೆಯ ವೈದ್ಯಕೀಯ ಮತ್ತು ಫಿಟ್ನೆಸ್ ನವೀಕರಣ ಒದಗಿಸಿದೆ.
ಭಾರತೀಯ ಅನುಭವಿ ವೇಗಿ ಪ್ರಸ್ತುತ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ ಪುನರ್ವಸತಿ ಪಡೆಯುತ್ತಿದ್ದಾರೆ. ಜಸ್ಪ್ರೀತ್ ಬುಮ್ರಾ ತರಬೇತಿಯ ಅಂತಿಮ ಹಂತದಲ್ಲಿದ್ದಾರೆ ಮತ್ತು ನೆಟ್ಸ್ನಲ್ಲಿ ಪೂರ್ಣ ಪ್ರಮಾಣದಿಂದ ಬೌಲಿಂಗ್ ಮಾಡುತ್ತಿದ್ದಾರೆ ಎಂದು ಬಿಸಿಸಿಐ ತಿಳಿಸಿದೆ.
ಜಸ್ಪ್ರೀತ್ ಬುಮ್ರಾ ಸಿದ್ಧತೆಯನ್ನು ಮತ್ತಷ್ಟು ಅಳೆಯಲು, ಎನ್ಸಿಎ ಅಭ್ಯಾಸ ಪಂದ್ಯಗಳನ್ನು ಆಯೋಜಿಸುತ್ತದೆ. ಬಿಸಿಸಿಐ ವೈದ್ಯಕೀಯ ತಂಡವು ಈ ಪಂದ್ಯಗಳ ನಂತರ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಹಿಂದಿರುಗುವ ಅಂತಿಮ ನಿರ್ಧಾರ ತೆಗೆದುಕೊಳ್ಳುವ ಮೊದಲು ಜಸ್ಪ್ರೀತ್ ಬುಮ್ರಾ ಅವರನ್ನು ಮೌಲ್ಯಮಾಪನ ಮಾಡಲಾಗುತ್ತದೆ.