Ind Vs Aus T20: ಈ ಆಟಗಾರನಿಗೆ ಬ್ಯಾಟಿಂಗ್ಗೆ ಹೆಚ್ಚಿನ ಅವಕಾಶ ಸಿಗಬೇಕು : ರೋಹಿತ್ ಶರ್ಮಾ

ಭಾರತ ತಂಡದ ನಾಯಕ ರೋಹಿತ್ ಶರ್ಮಾ ಮುಂದಿನ ತಿಂಗಳು ಟಿ20 ವಿಶ್ವಕಪ್ನಲ್ಲಿ ಭಾಗವಹಿಸುವ ಮೊದಲು ವಿಕೆಟ್ಕೀಪರ್ ಬ್ಯಾಟರ್ ದಿನೇಶ್ ಕಾರ್ತಿಕ್ಗೆ ಹೆಚ್ಚಿನ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಹೇಳಿದ್ದಾರೆ.
ಟೀಂ ಇಂಡಿಯಾದ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ಪಡೆಯಲು ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ ನಡುವೆ ಪೈಪೋಟಿ ಇದೆ. ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ಪಂತ್ರನ್ನು ಕೈಬಿಟ್ಟು ದಿನೇಶ್ ಕಾರ್ತಿಕ್ಗೆ ಆಡುವ ಬಳಗದಲ್ಲಿ ಸ್ಥಾನ ನೀಡಲಾಯಿತು. ಆದರೆ, ಸರಣಿಯಲ್ಲಿ ದಿನೇಶ್ ಕಾರ್ತಿಕ್ಗೆ ಹೆಚ್ಚಿನ ಬ್ಯಾಟಿಂಗ್ಗೆ ಅವಕಾಶ ಸಿಗಲಿಲ್ಲ.
ದಿನೇಶ್ ಕಾರ್ತಿಕ್ರನ್ನು ಕೊನೆಯವರೆಗೂ ಉಳಿಸಿಕೊಳ್ಳದೆ 13-14ನೇ ಓವರ್ ನಲ್ಲಿ ಬ್ಯಾಟಿಂಗ್ ಮಾಡಲು ಅವಕಾಶ ನೀಡಬೇಕು ಎಂದು ಹಲವು ಮಾಜಿ ಆಟಗಾರರು ಅಭಿಪ್ರಾಯಪಟ್ಟಿದ್ದಾರೆ.
"ವಿಶ್ವಕಪ್ಗೆ ಮೊದಲು ಈ ಇಬ್ಬರೂ ಆಟಗಾರರು ಹಲವಾರು ಪಂದ್ಯಗಳನ್ನು ಆಡಬೇಕೆಂದು ನಾನು ಬಯಸುತ್ತೇನೆ. ನಾವು ಏಷ್ಯಾಕಪ್ಗೆ ಹೋದಾಗ ಈ ಇಬ್ಬರೂ ಕೆಲವು ಪಂದ್ಯಗಳನ್ನು ಆಡಲು ಕಣದಲ್ಲಿದ್ದರು" ಎಂದು ರೋಹಿತ್ ಭಾನುವಾರ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಸರಣಿಯನ್ನು ಭಾರತ ವಶಪಡಿಸಿಕೊಂಡ ನಂತರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

ಡಿಕೆ ಬ್ಯಾಟಿಂಗ್ಗೆ ಇನ್ನೂ ಹೆಚ್ಚು ಅವಕಾಶ ಸಿಗಬೇಕು
ಆಸ್ಟ್ರೇಲಿಯಾ ವಿರುದ್ಧದ ಸರಣಿಯಲ್ಲಿ ದಿನೇಶ್ ಕಾರ್ತಿಕ್ಗೆ ಹೆಚ್ಚಿನ ಅವಕಾಶ ಸಿಗಲಿಲ್ಲ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ. ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಈ ವಿಚಾರದ ಬಗ್ಗೆ ಮಾತನಾಡಿದರು.
"ದಿನೇಶ್ ಕಾರ್ತಿಕ್ಗೆ ಸ್ವಲ್ಪ ಹೆಚ್ಚು ಆಟದ ಸಮಯ ಬೇಕು ಎಂದು ನಾನು ಭಾವಿಸುತ್ತೇನೆ. ಈ ಸರಣಿಯಲ್ಲಿ ಅವರು ಅಷ್ಟೇನೂ ಬ್ಯಾಟ್ ಮಾಡಲು ಆಗಲಿಲ್ಲ. ಕೆಲವೇ ಚೆಂಡುಗಳನ್ನು ಮಾತ್ರ ಅವರು ಎದುರಿಸಲು ಸಾಧ್ಯವಾಯಿತು, ಹಾಗಾಗಿ ಅವರಿಗೆ ಕ್ರೀಸ್ನಲ್ಲಿ ಹೆಚ್ಚಿನ ಸಮಯ ಕಳೆಯಲು ಆಗಲಿಲ್ಲ" ಎಂದು ಅವರು ಹೇಳಿದರು.
ದೀಪ್ತಿ ಶರ್ಮಾ ರನ್ ಔಟ್ ವಿವಾದ: MCCಯಿಂದ ಹೊರಬಿತ್ತು ಮಹತ್ವದ ಹೇಳಿಕೆ; ಇಂಗ್ಲೆಂಡ್ಗೆ ಮುಖಭಂಗ

ರಿಷಬ್ ಪಂತ್ಗೆ ಕೂಡ ಅವಕಾಶ ಸಿಗಲಿಲ್ಲ
ಕಾರ್ತಿಕ್ ಆಸ್ಟ್ರೇಲಿಯಾ ವಿರುದ್ಧ ಒಟ್ಟು ಏಳು ಎಸೆತಗಳನ್ನು ಎದುರಿಸಿದರು, ಆದರೆ ಪಂತ್ ಕೇವಲ ಒಂದು ಪಂದ್ಯವನ್ನು ಆಡಿದರು, ಅಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಗಲಿಲ್ಲ.
"ಪಂತ್ಗೆ ನಿಸ್ಸಂಶಯವಾಗಿ ಆಟದ ಸಮಯವೂ ಬೇಕು. ಆದರೆ ಈ ಸರಣಿಯು ಹೇಗಿತ್ತು ಎಂಬುದನ್ನು ನೋಡುವಾಗ ಆ ಸ್ಥಿರ ಬ್ಯಾಟಿಂಗ್ ಲೈನ್ಅಪ್ಗೆ ಅಂಟಿಕೊಳ್ಳುವುದು ನನಗೆ ಮುಖ್ಯವಾಗಿತ್ತು." ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.

ಬುಧವಾರ ದಕ್ಷಿಣ ಆಫ್ರಿಕಾ ವಿರುದ್ಧ ಪಂದ್ಯ
ಬುಧವಾರದಿಂದ ಪ್ರಾರಂಭವಾಗುವ ಮೂರು ಪಂದ್ಯಗಳ ಟಿ20 ಸರಣಿಗಾಗಿ ಭಾರತವು ದಕ್ಷಿಣ ಆಫ್ರಿಕಾವನ್ನು ಎದುರಿಸಲಿದೆ. ದಿನೇಶ್ ಕಾರ್ತಿಕ್ ಅಥವಾ ರಿಷಬ್ ಪಂತ್ ಅವರಿಗೆ ಆಡುವ 11ರ ಬಳಗದಲ್ಲಿ ಸ್ಥಾನ ನೀಡುವುದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದರು.
"ದಕ್ಷಿಣ ಆಫ್ರಿಕಾ ವಿರುದ್ಧ ನಾವು ಏನು ಮಾಡಲಿದ್ದೇವೆ ಎಂದು ನನಗೆ ತಿಳಿದಿಲ್ಲ. ನಾವು ಅವರ ಬೌಲಿಂಗ್ ಅನ್ನು ನೋಡಬೇಕಾಗಿದೆ, ಅವರು ಯಾವ ರೀತಿಯ ಬೌಲಿಂಗ್ ಲೈನ್ಅಪ್ನೊಂದಿಗೆ ಆಡುತ್ತಾರೆ ಮತ್ತು ಆ ಬೌಲಿಂಗ್ ಲೈನ್ಅಪ್ ಅನ್ನು ನಿಭಾಯಿಸಬಲ್ಲ ಅತ್ಯುತ್ತಮ ಬ್ಯಾಟರ್ ಯಾರು ಎನ್ನುವುದನ್ನು ಅವಲಂಬಿಸಿರುತ್ತದೆ." ಎಂದು ಹೇಳಿದರು.

ಅವಕಾಶ ನೀಡಲು ಯತ್ನಿಸುತ್ತೇನೆ
ನಾವು ಆ ದಿನೇಶ್ ಕಾರ್ತಿಕ್ ಮತ್ತು ರಿಷಬ್ ಪಂತ್ರನ್ನು ಬಹಳ ಎಚ್ಚರಿಕೆಯಿಂದ ನಿರ್ವಹಿಸಲು ಬಯಸುತ್ತೇವೆ. ವಿಶ್ವಕಪ್ ಆರಂಭಕ್ಕೆ ಮುನ್ನ ಇಬ್ಬರೂ ಆಟಗಾರರಿಗೆ ಹೆಚ್ಚಿನ ಆಟದ ಸಮಯ ಬೇಕು ಎಂದು ನಾನು ಅರ್ಥ ಮಾಡಿಕೊಂಡಿದ್ದೇನೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
ಆದರೆ ನಾವು ಆಡುವ 11 ಬಳಗವನ್ನು ಮಾತ್ರ ಹೊಂದಲು ಸಾಧ್ಯ. ಅವರಿಬ್ಬರಿಗೂ ಅವಕಾಶ ನೀಡುವುದು ಪರಿಸ್ಥಿತಿಯನ್ನು ಅವಲಂಬಿಸಿರುತ್ತದೆ ಎಂದು ರೋಹಿತ್ ಶರ್ಮಾ ಹೇಳಿದ್ದಾರೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications