19ನೇ ಆವೃತ್ತಿಯ 9ನೇ ಪಂದ್ಯ ರಾಜಸ್ಥಾನ್ ರಾಯಲ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವಣ ಫೈಟ್ ಅಹಮದಾಬಾದ್ನಲ್ಲಿ ನಡೆಯಿತು. ಮೊದಲ ಗೆಲುವಿನ ಹುಡುಕಾಟದಲ್ಲಿ ಟೈಟಾನ್ಸ್ ಇದ್ದರೆ, ಎರಡನೇ ಗೆಲುವಿನ ಕನಸು ರಾಜಸ್ಥಾನ ತಂಡದ್ದಾಗಿತ್ತು. ನಿಶ್ಚಿತವಾಗಿ ಸುಲಭವಾಗಿ ಪಂದ್ಯವನ್ನು ಗೆಲ್ಲಬಹುದಾದ ಪಂದ್ಯವನ್ನು ಟೈಟಾನ್ಸ್ ಕೈ ಚೆಲ್ಲಿದೆ. ಕೊನೆಯಲ್ಲಿ ಕಮಾಲ್ ಮಾಡಿದ ರಾಜಸ್ಥಾನ 2 ಅಂಕವನ್ನು ಕಲೆ ಹಾಕಿ ಬೀಗಿದೆ. ಅಂದಹಾಗೆ ಟೈಟಾನ್ಸ್ ಪಾಳಯದಿಂದ ಗೆಲುವನ್ನು ಕಸಿದುಕೊಂಡು ಬಂದವರು ಯಾರು? ಎಂಬ ಪ್ರಶ್ನೆ ಉದ್ಭವಿಸುತ್ತದೆ. ಅದಕ್ಕೆ ಉತ್ತರ ಇಲ್ಲಿದೆ.
ರಾಜಸ್ಥಾನ್ ಲೀಗ್ ನಲ್ಲಿ ಸತತ ಎರಡನೇ ಗೆಲುವು ದಾಖಲಿಸುವಲ್ಲಿ ಪ್ರಮುಖವಾಗಿ ಹಲವು ಅಂಶಗಳು ಕಂಡು ಬರುತ್ತವೆ. ಅದರಲ್ಲಿ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್ ಅವರ ಭರ್ಜರಿ ಅರ್ಧಶತಕ ಹಾಗೂ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಿದ ವಿಕೆಟ್ ಕೀಪರ್ ಬ್ಯಾಟರ್ ಧ್ರುವ್ ಜುರೇಲ್ ಅವರ 75 ರನ್ಗಳ ಇನಿಂಗ್ಸ್ ಸೇರಿದೆ. ಇದೇ ಪಂದ್ಯದಲ್ಲಿ ಶಿಮ್ರೋನ್ ಹೆಟ್ಮೆಯರ್ ಬ್ಯಾಟಿಂಗ್ ಮಾಡುವಾಗ 13.4ನೇ ಓವರ್ನಲ್ಲಿ ಗುಜರಾತ್ ಟೈಟಾನ್ಸ್ ಡಿಆರ್ಎಸ್ ಪಡೆಯದೇ ಇರುವುದು ಸಹ ಟರ್ನಿಂಗ್ ಪಾಯಿಂಟ್ಗಳಲ್ಲಿ ಒಂದಾಗಿದೆ.

ರಾಜಸ್ಥಾನ್ ರಾಯಲ್ಸ್ ತಂಡದ ಪರ ಇಂಪ್ಯಾಕ್ಟ್ ಪ್ಲೇಯರ್ ರೂಪದಲ್ಲಿ ಬೌಲಿಂಗ್ ಮಾಡಿದ ರವಿ ಬಿಷ್ಣೋಯಿ ಸಹ ಕಮಾಲ್ ಬೌಲಿಂಗ್ ಪ್ರದರ್ಶನ ನೀಡಿದರು. ಇವರು ನಾಲ್ಕು ಓವರ್ಗಳಲ್ಲಿ 41 ರನ್ ನೀಡಿ 4 ಪ್ರಮುಖ ವಿಕೆಟ್ ಪಡೆದರು. ಇದು ಇವರ ಐಪಿಎಲ್ ವೃತ್ತಿ ಜೀವನದ ಉತ್ತಮ ಸ್ಪೇಲ್ ಆಗಿದೆ. ಇವರು ಸಾಯಿ ಸುದರ್ಶನ್, ಗ್ಲೆನ್ ಫಿಲಿಪ್ಸ್, ವಾಶಿಂಗ್ಟನ್ ಸುಂದರ್, ರಾಹುಲ್ ತೆವಾಟಿಯಾ ಅವರನ್ನು ಪೆವಿಲಿಯನ್ಗೆ ಅಟ್ಟುವಲ್ಲಿ ಸಫಲರಾದರು. ಇದು ಸಹ ರಾಜಸ್ಥಾನ್ ಗೆಲುವಿನ ದಾರಿಯನ್ನು ಸುಗಮಗೊಳಿಸಿತು.
ಆದರೆ ಈ ಎಲ್ಲದಕ್ಕಿಂತ ದೊಡ್ಡ ತಿರುವು ನೀಡಿದ್ದು ಕೊನೆಯ ಎರಡು ಓವರ್. 19ನೇ ಓವರ್ ಬೌಲ್ ಮಾಡಿದ ಜೋಫ್ರಾ ಆರ್ಚರ್ ಬಿಗುವಿನ ದಾಳಿ ನಡೆಸಿದರು. 12 ಎಸೆತಗಳಲ್ಲಿ ಟೈಟಾನ್ಸ್ ಗೆಲುವಿಗೆ 15 ರನ್ ಅವಶ್ಯಕತೆ ಇತ್ತು. ಆಗ ಆರ್ಚರ್ ಕೇವಲ 4 ರನ್ ನೀಡಿ ತಮ್ಮ ಸಾಮರ್ಥ್ಯವನ್ನು ಸಾಬೀತು ಪಡಿಸಿದರು. ಇನ್ನು ಕೊನೆಯ ಓವರ್ ನಾಂಡ್ರೆ ಬರ್ಗರ್ ಮಾಡುತ್ತಾರೆ ಎಂಬ ಲೆಕ್ಕಾಚಾರವನ್ನೇ ಎಲ್ಲರೂ ಹಾಕಿಕೊಂಡಿದ್ದರು. ಆದರೆ ನಾಯಕ ರಿಯಾನ್ ಪರಾಗ್ ಚೆಂಡನ್ನು ತುಷಾರ್ ದೇಶಪಾಂಡೆ ಅವರ ಕೈಗೆ ನೀಡಿದರು. ಇವರು ಸಹ ನಾಯಕನ ವಿಶ್ವಾಸವನ್ನು ಉಳಿಸಿಕೊಳ್ಳುವಲ್ಲಿ ಸಫಲರಾದರು. ಅಲ್ಲದೆ 11 ರನ್ ಗಳನ್ನು ನೀಡದಂತೆ ತಡೆದರು. ಅಲ್ಲದೆ ರಾಜಸ್ಥಾನ ಗೆಲುವಿನ ಹೀರೋ ಆದರು.