
ನವದೆಹಲಿ, ಜುಲೈ 13: ಡಿಸಿಶನ್ ರಿವ್ಯೂ ಸಿಸ್ಟಮ್ನಲ್ಲಿ ಬದಲಾವಣೆ ತರುವ ಬಗ್ಗೆ ಭಾರತದ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಇಂಟರ್ ನ್ಯಷನಲ್ ಕ್ರಿಕೆಟ್ ಕೌನ್ಸಿಲ್ ಅನ್ನು ಕೇಳಿಕೊಂಡಿದ್ದಾರೆ. ಎಲ್ಬಿಡಬ್ಲ್ಯೂಗಾಗಿ ಡಿಆರ್ಎಸ್ ಮೊರೆ ಹೋದಾಗ ಡಿಆರ್ಎಸ್ನಲ್ಲಿ ಚೆಂಡು ಸ್ಟಂಪ್ಗೆ ಬಡಿದಿದ್ದು ಕಂಡು ಬಂದರೆ ಬ್ಯಾಟ್ಸ್ಮನ್ನನ್ನು ಔಟ್ ಎಂದು ಪರಿಗಣಿಸಬೇಕು ಎಂದು ಸಚಿನ್ ಹೇಳಿದ್ದಾರೆ.
ಡಿಆರ್ಎಸ್ ವಿಧಾನವನ್ನು ಪ್ರಶ್ನಿಸಿ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಟ್ವೀಟ್ನಲ್ಲಿ, 'ಯಾವ ಶೇಕಡಾ ಆಧಾರದಲ್ಲಿ ಚೆಂಡು ಸ್ಟಂಪ್ಗೆ ಬಡಿಯಿತು ಅನ್ನೋದು ಮುಖ್ಯವಲ್ಲ. ಡಿಆರ್ಎಸ್ನಲ್ಲಿ ಚೆಂಡು ಸ್ಪಂಪ್ಗೆ ಬಡಿದಿದ್ದು ಕಂಡುಬಂದರೆ, ಆಲ್ ಫೀಲ್ಡ್ ಅಂಪೈರ್ ಕಾಲ್ಗೆ ಹೋಗುವ ಬದಲು ಬ್ಯಾಟ್ಸ್ಮನ್ ಔಟ್ ತೀರ್ಪು ನೀಡಬೇಕು' ಎಂದು ಸಚಿನ್ ಬರೆದುಕೊಂಡಿದ್ದಾರೆ.
ಟ್ವೀಟ್ನ ಮುಂದುವರೆದ ಭಾಗದಲ್ಲಿ, 'ಡಿಆರ್ಎಸ್ನಲ್ಲಿ ಈ ಬದಲಾವಣೆ ತಂದರೆ ತಂತ್ರಜ್ಞಾನವನ್ನು ನಾವು ಸ್ಫೂರ್ತಿದಾಯಕವಾಗಿ ಬಳಸಿದಂತಾಗುತ್ತದೆ. ನಮಗೆಲ್ಲರಿಗೂ ತಿಳಿದಿರುವಂತೆ ಮನುಷ್ಯರಂತೆ ತಂತ್ರಜ್ಞಾನಗಳೂ 100 ಶೇ. ಸರಿಯಲ್ಲ' ಎಂದು ಬರೆಯಲಾಗಿದೆ.
ಸಚಿನ್ ತೆಂಡೂಲ್ಕರ್ ಅವರ ಅಧಿಕೃತ ಟ್ವಿಟರ್ ಖಾತೆಯಲ್ಲಿ ಒಂದು ವೀಡಿಯೊ ಶೇರ್ ಮಾಡಲಾಗಿದೆ. ವೆಸ್ಟ್ ಇಂಡೀಸ್ ದಿಗ್ಗಜ ಬ್ರಿಯಾನ್ ಲಾರಾ ಮತ್ತು ಸಚಿನ್ ತೆಂಡೂಲ್ಕರ್, ಡಿಆರ್ಎಸ್ ಬಗ್ಗೆ ಚರ್ಚೆ ನಡೆಸಿದ್ದರ ವೀಡಿಯೋ ಅದು. ಈ ವೀಡಿಯೋ ಜೊತೆಗೆ ಸಚಿನ್ ಡಿಆರ್ಎಸ್ ಕುರಿತ ತನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.