
ಮುಂಬೈ, ಜನವರಿ 2: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರಿಗೆ ಗುರುವಾಗಿದ್ದ ರಮಾಕಾಂತ್ ಅಚ್ರೇಕರ್ (87) ಬುಧವಾರ ನಿಧನರಾದರು.
ಸಚಿನ್ ತೆಂಡೂಲ್ಕರ್ ಅವರ ಎಳೆಯ ವಯಸ್ಸಿನಿಂದಲೂ ವೃತ್ತಿ ಬದುಕಿಗೆ ಸೂಕ್ತ ರೂಪು ನೀಡುವಲ್ಲಿ ಅಚ್ರೇಕರ್ ಅವರ ಪಾತ್ರ ಪ್ರಮುಖವಾದದ್ದು.
ವಯೋಸಹಜ ಸಮಸ್ಯೆಗಳಿಂದ ಬಳಲುತ್ತಿದ್ದ ಅಚ್ರೇಕರ್, ಲಘು ಪಾರ್ಶ್ವವಾಯುವಿಗೂ ಒಳಗಾಗಿದ್ದರು. ಬುಧವಾರ ಸಂಜೆ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದರು.
1932ರಲ್ಲಿ ಜನಿಸಿದ್ದ ಅಚ್ರೇಕರ್, ಮುಂಬೈನ ದಾದರ್ನಲ್ಲಿರುವ ಶಿವಾಜಿಪಾರ್ಕ್ನಲ್ಲಿ 'ಕಾಮತ್ ಮೆಮೋರಿಯಲ್ ಕ್ರಿಕೆಟ್ ಕ್ಲಬ್' ನಡೆಸುತ್ತಿದ್ದರು. ಅಲ್ಲಿ ನೂರಾರು ಎಳೆಯ ಕ್ರಿಕೆಟಿಗರಿಗೆ ತರಬೇತಿ ನೀಡುತ್ತಿದ್ದರು. ಅಜಿತ್ ಅಗರ್ಕರ್, ಸಂಜಯ್ ಬಂಗಾರ್, ಬಲ್ವಿಂದರ್ ಸಿಂಗ್ ಸಂಧು, ವಿನೋದ್ ಕಾಂಬ್ಳಿ, ಪ್ರವೀಣ್ ಆಮ್ರೆ ಮತ್ತು ರಮೇಶ್ ಪೊವಾರ್ ಅವರಂತಹ ಆಟಗಾರರು ಕೂಡ ಅವರ ಬಳಿ ಆಟದ ತಂತ್ರಗಳನ್ನು ಕಲಿತವರು.
ಅವರ ಗರಡಿಯಲ್ಲಿ ಬೆಳೆದ ಸಚಿನ್ ತೆಂಡೂಲ್ಕರ್ ಕ್ರಿಕೆಟ್ ಇತಿಹಾಸದಲ್ಲಿ ದಿಗ್ಗಜರ ಸಾಲಿನಲ್ಲಿ ನಿಂತವರು. ಶಾಲಾ ದಿನಗಳಲ್ಲಿ ಕ್ರಿಕೆಟ್ ಬಗ್ಗೆ ಅಪಾರ ಆಸಕ್ತಿ ಹೊಂದಿದ್ದ ಸಚಿನ್ ತೆಂಡೂಲ್ಕರ್ ಅವರನ್ನು ಸಹೋದರ ಅಜಿತ್ ತೆಂಡೂಲ್ಕರ್, ಅಚ್ರೇಕರ್ ಅವರ ಗರಡಿಗೆ ಸೇರಿಸಿದ್ದರು.
ಸಚಿನ್ ಅವರಲ್ಲಿದ್ದ ಪ್ರತಿಭೆ ಗುರುತಿಸಿದ್ದ ಅಚ್ರೇಕರ್, ಅವರ ಶಿಕ್ಷಣವನ್ನು ನ್ಯೂ ಇಂಗ್ಲಿಷ್ ಸ್ಕೂಲ್ನಿಂದ ಅತ್ಯಂತ ಪ್ರಬಲ ಕ್ರಿಕೆಟ್ ತಂಡ ಹೊಂದಿದ್ದ ಶಾರದಾಶ್ರಮ ವಿದ್ಯಾ ಮಂದಿರಕ್ಕೆ ಬದಲಿಸಲು ಸಲಹೆ ನೀಡಿದ್ದರು.
ಈ ಶಾರದಾಶ್ರಮ ಶಾಲೆಯಲ್ಲಿಯೇ ಸಚಿನ್ ತೆಂಡೂಲ್ಕರ್ ಮತ್ತು ವಿನೋದ್ ಕಾಂಬ್ಳಿ 1988ರಲ್ಲಿ ಸೇಂಟ್ ಕ್ಸೇವಿಯರ್ ತಂಡದ ವಿರುದ್ಧ 664 ರನ್ಗಳ ದಾಖಲೆಯ ಜೊತೆಯಾಟವಾಡಿದ್ದು. ಅದಾಗಿ ಒಂದು ವರ್ಷದಲ್ಲಿಯೇ ಸಚಿನ್ ಕರಾಚಿಯಲ್ಲಿ ಪಾಕಿಸ್ತಾನದ ವಿರುದ್ಧ ತಮ್ಮ ಚೊಚ್ಚಲ ಟೆಸ್ಟ್ ಪಂದ್ಯವಾಡಿದ್ದರು.
ಪ್ರತಿ ಶಿಕ್ಷಕರ ದಿನಾಚರಣೆ ಸಂದರ್ಭದಲ್ಲಿಯೂ ತೆಂಡೂಲ್ಕರ್ ತಮ್ಮ ಹಳೆಯ ಕೋಚ್ ಹಾಗೂ ಗುರು ಅಚ್ರೇಕರ್ ಅವರನ್ನು ಭೇಟಿ ಮಾಡಿ ಗೌರವ ಅರ್ಪಿಸುತ್ತಿದ್ದರು.
ಕ್ರೀಡಾ ವಿಭಾಗದ ತರಬೇತುದಾರರಿಗೆ ನೀಡುವ ದ್ರೋಣಾಚಾರ್ಯ ಪ್ರಶಸ್ತಿಯ ಗೌರವ 1990ರಲ್ಲಿ ಅಚ್ರೇಕರ್ ಅವರಿಗೆ ಒಲಿದಿತ್ತು. 2010ರಲ್ಲಿ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳಲ್ಲಿ ಒಂದಾದ ಪದ್ಮಶ್ರೀ ನೀಡಿ ಗೌರವಿಸಲಾಗಿತ್ತು. ಅದೇ ವರ್ಷ ಗ್ಯಾರಿ ಕರ್ಸ್ಟನ್ ಅವರ ಸಂಸ್ಥೆಯ ಜೀವಮಾನ ಸಾಧನೆ ಪ್ರಶಸ್ತಿಯನ್ನು ನೀಡಲಾಗಿತ್ತು.
ಅಚ್ರೇಕರ್ ಅವರ ಅಂತಿಮ ಸಂಸ್ಕಾರ ಗುರುವಾರ ಬೆಳಿಗ್ಗೆ 10 ಗಂಟೆ ಸುಮಾರಿಗೆ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.