ಭಾರತ ದೇಶ ಕಂಡ ಶ್ರೇಷ್ಠ ಕೈಗಾರಿಕೋದ್ಯಮಿ, ಪದ್ಮವಿಭೂಷಣ ರತನ್ ಟಾಟಾ ಅವರು 86ನೇ ವಯಸ್ಸಿನಲ್ಲಿ ಮುಂಬೈನಲ್ಲಿ ನಿಧನರಾಗಿದ್ದಾರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ರತನ್ ಟಾಟಾ ಅವರಿಗೆ ಕಳೆದ ಮೂರು ದಿನಗಳಿಂದ ಮುಂಬೈನ ಬ್ರೀಚ್ ಕ್ಯಾಂಡಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಬುಧವಾರದಂದು ಚಿಕಿತ್ಸೆಗೆ ಸ್ಪಂದಿಸದ ರತನ್ ಟಾಟಾ ಇಹಲೋಕ ತ್ಯಜಿಸಿದ್ದಾರೆ.
ರತನ್ ಟಾಟಾ ಅವರು ಭಾರತದ ಮಧ್ಯಮ ವರ್ಗದ ಜನರ ಅಪಾರ ಪ್ರೀತಿಯನ್ನು ಗಳಿಸಿದ್ದಾರೆ. ಅವರು ತಮ್ಮ ನಿಸ್ವಾರ್ಥದ ಸಮಾಜ ಸೇವೆಯಿಂದ ಭಾರತೀಯರಿಗೆ ಸದಾ ಸ್ಪೂರ್ತಿಯಾಗಿದ್ದಾರೆ. ಹೀಗಾಗಿ ರತನ್ ಟಾಟಾ ಆಗಲಿಕೆಗೆ ಇಡೀ ದೇಶವೇ ಸಂತಾಪ ಸೂಚಿಸಿದೆ. ಭಾರತ ತಂಡದ ಮಾಜಿ ದಿಗ್ಗಜ ಬ್ಯಾಟರ್ ಸಚಿನ್ ತೆಂಡೂಲ್ಕರ್ ಅವರೂ ಕಂಬನಿ ಮಿಡಿದ್ದಾರೆ. ಇತ್ತೀಚೆಗೆ ರತನ್ ಟಾಟಾ ಅವರನ್ನು ಭೇಟಿ ಮಾಡಿರುವುದನ್ನೂ ನೆನೆದು ಸಚಿನ್ ಸಂತಾಪ ಹೇಳಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಸಚಿನ್, ರತನ್ ಟಾಟಾ ಅವರಿಗೆ ಭಾವಪೂರ್ಣ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಕಳೆದ ಭಾನುವಾರ ಸ್ಮರಣೀಯವಾಗಿದೆ. ಏಕೆಂದರೆ ಟಾಟಾ ಅವರೊಂದಿಗೆ ಸಮಯ ಕಳೆಯಲು ನನಗೆ ಅವಕಾಶ ಸಿಕ್ಕಿತು. ಅವರೊಂದಿಗೆ ಸಮಯ ಕಳೆಯಲು ನಾನು ಅದೃಷ್ಟ ಮಾಡಿದ್ದೆ. ಆದರೆ ಅವರನ್ನು ಎಂದಿಗೂ ಭೇಟಿ ಮಾಡದ ಲಕ್ಷಾಂತರ ಜನರು ಅನುಭವಿಸುತ್ತಿರುವ ದುಃಖವನ್ನು ನಾನೂ ಅನುಭವಿಸುತ್ತಿದ್ದೇನೆ.
ಭೇಟಿ ಮಾಡಿದ ಸಂದರ್ಭದಲ್ಲಿ ನಾವು ಆಟೋಮೊಬೈಲ್ಗಳು, ಪರಸ್ಪರ ಪ್ರೀತಿ, ಸಮಾಜಕ್ಕೆ ಮರಳಿ ನೀಡುವ ನಮ್ಮ ಬದ್ಧತೆ, ವನ್ಯಜೀವಿ ಸಂರಕ್ಷಣೆಯ ಬಗ್ಗೆ ಮಾಹಿತಿ ಹಂಚಿಕೊಂಡಿದ್ದೇವೆ. ಈ ರೀತಿಯ ಸಂಭಾಷಣೆಗಳು ಅತ್ಯಮೂಲ್ಯವಾಗಿವೆ. ಟಾಟಾ ಅವರು ತಮ್ಮ ಸಂಸ್ಥೆಗಳ ಮೂಲಕ ಬದುಕುತ್ತಾರೆ ಎಂದು ಭಾವನಾತ್ಮಕ ಪೋಸ್ಟ್ ಹಂಚಿಕೊಳ್ಳುವ ಮೂಲಕ ಸಂತಾಪ ವ್ಯಕ್ತಪಡಿಸಿದ್ದಾರೆ.
ಇದಲ್ಲದೆ, ಟೀಮ್ ಇಂಡಿಯಾ ಆನೇಕ ಮಾಜಿ ಮತ್ತು ಹಾಲಿ ಆಟಗಾರರು ಕೂಡ ರತನ್ ಟಾಟಾ ನಿಧನಕ್ಕೆ ಸಂತಾಪ ಹೇಳಿದ್ದಾರೆ. ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಮಾಜಿ ಹೆಡ್ ಕೋಚ್ ರವಿ ಶಾಸ್ತ್ರಿ, ವಿವಿಎಸ್ ಲಕ್ಷ್ಮಣ್, ವೀರೇಂದ್ರ ಸೆಹ್ವಾಗ್, ಸೂರ್ಯಕುಮಾರ್, ಹರ್ಭಷನ್ ಸಿಂಗ್ ಮತ್ತು ಒಲಿಂಪಿಕ್ಸ್ ಚಾಂಪಿಯನ್ ಸ್ಟಾರ್ ಜಾವೆಲಿನ್ ಎಸೆತಗಾತ ನೀರಜ್ ಚೋಫ್ರಾ ಅವರು ರತನ್ ಟಾಟಾ ಅವರ ಕಾರ್ಯವೈಖರಿಯನ್ನು ಹೊಗಳಿದ್ದಾರೆ.