ಮುಂಬೈ, ಜ. 08: ಸಾವಿರ ರನ್ ಗಳ ಸರದಾರ, ವಿಶ್ವ ದಾಖಲೆ ವೀರ ಪ್ರಣವ್ ಧನವಾಡೆಗೆ ಎಲ್ಲೆಡೆಯಿಂದ ಪ್ರಶಂಶೆ, ಪಾರಿತೋಷಕ, ಸ್ಕಾಲರ್ ಶಿಪ್ ಸಿಗುತ್ತಿದೆ. ಕ್ರಿಕೆಟ್ ದೇವರು ಸಚಿನ್ ಅವರು ಮೆಚ್ಚುಗೆಯ ಮಾತುಗಳನ್ನಾಡಿ, ಬ್ಯಾಟ್ ವೊಂದನ್ನು ಗಿಫ್ಟ್ ನೀಡಿದ್ದಾರೆ.
ಮುಂಬೈ ಕ್ರಿಕೆಟ್ ಸಂಸ್ಥೆ ಆಯೋಜಿಸಿದ್ದ ಅಂತರ್-ಶಾಲಾ ಟೂರ್ನಿಯಲ್ಲಿ 1009 ರನ್ ಗಳಿಸಿ ಅಜೇಯವಾಗಿ ಉಳಿದು ವಿಶ್ವ ದಾಖಲೆ ನಿರ್ಮಿಸಿದ್ದ ಮುಂಬೈ ಬಾಲಕ ಪ್ರಣವ್ ಧನವಾಡೆ ಈಗ ಎಲ್ಲರ ಆಕರ್ಷಣೆಯ ಕೇಂದ್ರ ಬಿಂದು. [ಸಾವಿರ ರನ್ ಬಾರಿಸಿ ಇತಿಹಾಸ ನಿರ್ಮಿಸಿದ ಪ್ರಣವ್]
ಸಚಿನ್ ತೆಂಡೂಲ್ಕರ್ ಅವರು ಪ್ರಣವ್ ಗೆ ಕಿವಿಮಾತು ಹೇಳಿ ಟ್ವೀಟ್ ಮಾಡಿದ ಬಳಿಕ ತಮ್ಮ ಆಟೋಗ್ರಾಫ್ ಇರುವ ಬ್ಯಾಟನ್ನು ಧನವಾಡೆಗೆ ಉಡುಗೊರೆಯಾಗಿ ನೀಡಿ ಶುಭ ಹಾರೈಸಿದ್ದಾರೆ. ಪ್ರಣವ್ರ ವಿಶ್ವ ದಾಖಲೆಯ ಸಾಧನೆಗೆ ಸಚಿನ್ ಈ ಕೊಡುಗೆ ನೀಡಿದ್ದಾರೆ ಎಂದು ಬಿಸಿಸಿಐ ಟ್ವೀಟ್ ಮಾಡಿದೆ.

ಇನಿಂಗ್ಸ್ವೊಂದರಲ್ಲಿ 1009 ರನ್ ಗಳಿಸಿದ ಮೊದಲ ಕ್ರಿಕೆಟ್ ಆಟಗಾರ ಎನಿಸಿಕೊಂಡಿರುವ ಪ್ರಣವ್ ಧನವಾಡೆಗೆ ಅಭಿನಂದನೆಗಳು. ಕಠಿಣ ಶ್ರಮದ ಮೂಲಕ ಉತ್ತಮ ಸಾಧನೆ ಮಾಡಿರುವೆ. ನೀನು ಇನ್ನೂ ಎತ್ತರಕ್ಕೆ ಏರಬೇಕು ಎಂದು ತೆಂಡುಲ್ಕರ್ ಮಂಗಳವಾರ ಟ್ವೀಟ್ ಮಾಡಿದ್ದರು.
ಏರ್ ಇಂಡಿಯಾದ ಪ್ರೋತ್ಸಾಹ: 1009 ರನ್ ಗಳಿಸಿ ಕ್ರಿಕೆಟ್ನಲ್ಲಿ ಹೊಸ ಇತಿಹಾಸ ನಿರ್ಮಿಸಿದ ಮುಂಬೈ ಬಾಲಕ, ಆಟೋರಿಕ್ಷಾ ಚಾಲಕ ಪ್ರಶಾಂತ್ ಅವರ ಪುತ್ರ ಪ್ರಣವ್ ಧನವಾಡೆಗೆ ದೇಶದ ವಿಮಾನ ಯಾನ ಸಂಸ್ಥೆ ಏರ್ ಇಂಡಿಯಾದ ಕ್ರಿಕೆಟ್ ತಂಡದಲ್ಲಿ ಆಡಲು ಆಹ್ವಾನ ನೀಡಲಾಗಿದೆ.
15ರ ಹರೆಯದ ಕ್ರಿಕೆಟಿಗ ಧನವಾಡೆಗೆ ಏರ್ ಇಂಡಿಯಾ ಹೀಗೊಂಡು ಆಫರ್ನ್ನು ನೀಡಿದೆ. ಶಿಷ್ಯ ವೇತನದ ಆಧಾರದಲ್ಲಿ ಏರ್ ಇಂಡಿಯಾಗೆ ಸೇರ್ಪಡೆಯಾಗುವಂತೆ ನಾವು ಪ್ರಣವ್ಗೆ ತಿಳಿಸಿದ್ದೇವೆ ಎಂದು ಏರ್ ಇಂಡಿಯಾದ ಮೂಲಗಳು ತಿಳಿಸಿವೆ. ಮುಂಬೈ ಕ್ರಿಕೆಟ್ ಅಸೋಸಿಯೇಷನ್ಸ್ ಈಗಾಗಲೇ ಪ್ರಣವ್ ಅವರ ಕೋಚಿಂಗ್ ಖರ್ಚುವೆಚ್ಚ ಭರಿಸಲು ಮುಂದಾಗಿದೆ. ಪ್ರಣವ್ ಅವರ ವಿದ್ಯಾಭ್ಯಾಸದ ಹೊಣೆ ಹೊರುವುದಾಗಿ ಮಹಾರಾಷ್ಟ್ರ ಸರ್ಕಾರ ಘೋಷಿಸಿದೆ.(ಒನ್ ಇಂಡಿಯಾ ಸುದ್ದಿ)