
ಮುಂಬೈ, ಮಾರ್ಚ್ 20: ಅರ್ಜುನ್ ತೆಂಡೂಲ್ಕರ್ಗೆ ತನ್ನ ಸರ್ನೇಮ್ ಹಿಂದಿನ ಒತ್ತಡದ ಬಗ್ಗೆ ಅರಿವಾಗಿರಬಹುದು. ಆದರೆ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ತನ್ನ ಮಗ ಅರ್ಜುನ್ನ ಕ್ರಿಕೆಟ್ ಕನಸಿಗೆ ಬೆಂಗಾವಲಾಗಿ ನಿಲ್ಲುತ್ತಿರುವುದಂತೂ ನಿಜ. ತೆಂಡೂಲ್ಕರ್ ಅವರು ಸ್ಫೂರ್ತಿದಾಯಕ ಮಾತುಗಳ ಮೂಲಕ ಮಗನನ್ನು, ಮಗನ ವಯಸ್ಸಿನ ಕಿರಿಯ ಆಟಗಾರರನ್ನು ಸಾಧನೆಯ ದಾರಿಗೆ ಎಳೆಯುವ ಯತ್ನ ಮಾಡುತ್ತಲೇ ಇದ್ದಾರೆ.
ಎಡಗೈ ವೇಗಿಯಾಗಿರುವ ಅರ್ಜುನ್ ತೆಂಡೂಲ್ಕರ್, ಕಳೆದ ವರ್ಷ ಅಂಡರ್ 19 ಟೆಸ್ಟ್ ತಂಡದಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದರು. ಅದಕ್ಕೂ ಮುನ್ನ ಅರ್ಜುನ್, ಅಂಡರ್ 19 ಮುಂಬೈ ತಂಡವನ್ನು ಪ್ರತಿನಿಧಿಸಿದ್ದರು. ಈಗ ಜೂನಿಯರ್ನಿಂದ ಸೀನಿಯರ್ ಆಗಿ ಅರ್ಜುನ್ ಕ್ರೀಡಾಂಗಣಕ್ಕೆ ಇಳಿಯುವುದರಲ್ಲಿದ್ದಾರೆ. ಅದು ಟಿ20 ಮುಂಬೈ ಲೀಗ್ ಟೂರ್ನಿ ಮೂಲಕ.
'ಟಿ20 ಮುಂಬೈ'ಯ ದ್ವಿತೀಯ ಆವೃತ್ತಿಯಲ್ಲಿ ಅರ್ಜುನ್ ತೆಂಡೂಲ್ಕರ್ ಸೀನಿಯರ್ ಆಗಿ ಮೈದಾನಕ್ಕಿಳಿಯುವುದರಲ್ಲಿದ್ದಾರೆ. ಈ ವೇಳೆ ಮಗನ ಆಟ ವೀಕ್ಷಿಸುವ ಕುತೂಹಲದಲ್ಲಿ ಸಚಿನ್ ಇದ್ದಾರೆ. ಅಲ್ಲದೆ ಜೂನಿಯರ್ನಿಂದ ಸೀನಿಯರ್ ಆಗಿ ಪಾದಾರ್ಪಣೆ ಮಾಡುತ್ತಿರುವ ಮಗನಿಗೆ ಸಚಿನ್ ಅಮೂಲ್ಯ ಸಲಹೆಯನ್ನೂ ನೀಡಿದ್ದಾರೆ.
ಮಗನ ಪಾದಾರ್ಪಣೆಯ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿನ್, 'ಕ್ರೀಡೆಯಲ್ಲಿ ನಿಮಗೆ ಎಷ್ಟೆಲ್ಲ ಅವಕಾಶಗಳು ಲಭಿಸುತ್ತವೆಯೋ ಅವೆಲ್ಲದಕ್ಕೂ ಭರವಸೆಯಿರಲಾರದು. ಆದರೆ ಸಿಕ್ಕ ಅವಕಾಶಗಳನ್ನು ನೀವು ಬಳಸಿಕೊಳ್ಳಬೇಕು, ನಿಮ್ಮ ಅತ್ಯತ್ತಮ ಪ್ರದರ್ಶನ ನೀಡಬೇಕು. ಆಗಲೇ ಸಿಕ್ಕ ಅವಕಾಶಕ್ಕೊಂದು ಗ್ಯಾರಂಟಿ ಲಭಿಸುತ್ತದೆ' ಎಂದು ಪ್ರತಿಕ್ರಿಯಿಸಿದರು. ಇದು ಅರ್ಜುನ್ಗಷ್ಟೇ ಅಲ್ಲ, ಎಲ್ಲಾ ಕಿರಿಯ ಆಟಗಾರರಿಗೂ ಗೆಲುವಿನ ಗುಟ್ಟಾಗಬಲ್ಲದು.