ಸೋಮವಾರ ಜೈಪುರ್ದ ಸವಾಯಿ ಮಾನಸಿಂಗ್ ಸ್ಟೇಡಿಯಂನಲ್ಲಿ ಕ್ರಿಕೆಟ್ನ ಹೊಸ ಸ್ಟಾರ್ ಜನನವಾಗಿದೆ. ಇವರ ಬ್ಯಾಟಿಂಗ್ ವೈಭವ ಕಂಡು ಇಡೀ ಕ್ರಿಕೆಟ್ ಜಗತ್ತು ಎದ್ದು ನಿಂತು ಸಲಾಂ ಎಂದಿದೆ. ಬಿಹಾರದ 14 ವರ್ಷದ ಯುವ ಆಟಗಾರ ನಿಜಕ್ಕೂ ಕ್ರಿಕೆಟ್ ವಲಯದಲ್ಲಿ ಸಂಚಲನ ಮೂಡಿಸಿದ್ದಾರೆ. ತಮ್ಮ ಸ್ಥಿರ ಬ್ಯಾಟಿಂಗ್ನಿಂದ ರಾಜಸ್ಥಾನ ಗೆಲುವಿನಲ್ಲಿ ಮಿಂಚಿರುವ ವೈಭವ್, ಫ್ಯೂಚರ್ ಸೂಪರ್ ಸ್ಟಾರ್ ಆಗುವ ಕನಸನ್ನು ತೆರೆದಿಟ್ಟಿದ್ದಾರೆ. ಇವರ ಬ್ಯಾಟಿಂಗ್ ಕಂಡು ಸಚಿನ್ ತೆಂಡೂಲ್ಕರ್ ಸಹ ಮನಸೋತಿದ್ದಾರೆ.
ಗುಜರಾತ್ ಟೈಟಾನ್ಸ್ ನೀಡಿದ್ದ ಸವಾಲಿನ ಗುರಿಯನ್ನು ಬೆನ್ನಟ್ಟಿದಾಗ ರಾಜಸ್ಥಾನ ಯುವ ಬ್ಯಾಟರ್ ಆರ್ಭಟ ನಡೆಸಿದರು. ಐಪಿಎಲ್ ಇತಿಹಾಸದ ಅತ್ಯಂತ ವೇಗದ ಎರಡನೇ ಶತಕವನ್ನು ಬಾರಿಸಿದ ಇವರು, ದಶಕದ ಹಿಂದಿನ ದಾಖಲೆಯನ್ನು ಅಳಿಸಿ ಹಾಕಿದರು. ಇವರ ಇನಿಂಗ್ಸ್ನಲ್ಲಿ ಬೌಂಡರಿಗಿಂತ ಹೆಚ್ಚು ಸಿಕ್ಸರ್ಗಳು ಸೇರಿದ್ದವು. ಇವರ ಕ್ಲಾಸ್ ಬ್ಯಾಟಿಂಗ್ ಕಂಡು ದಿ ವಾಲ್ ಖ್ಯಾತಿಯ ರಾಹುಲ್ ದ್ರಾವಿಡ್ ಸಹ ಎದ್ದು ನಿಂತು ತಮ್ಮ ನೋವನ್ನು ಮರೆತು ಸಂಭ್ರಮಿಸಿದರು. ಈಗ ಯುವ ಆಟಗಾರ ಆಟ ಕಂಡು ಸಚಿನ್ ತೆಂಡೂಲ್ಕರ್ ಬೆನ್ನು ತಟ್ಟಿದ್ದಾರೆ.

ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಸಾಮಾಜಿಕ ತಾಣದಲ್ಲಿ ಈ ಬಗ್ಗೆ ಬರೆದುಕೊಂಡಿದ್ದಾರೆ. ವೈಭವ್ ಉತ್ತಮ ಬೌಲರ್ಗಳ ವಿರುದ್ಧ ಆಡಿದ ಧಾಟಿ ಸಚಿನ್ ತೆಂಡೂಲ್ಕರ್ ಮನ ಗೆದ್ದಿದೆ. ವೈಭವ್ ನಿರ್ಭಯದಿಂದ ಬ್ಯಾಟಿಂಗ್ ಮಾಡುವುದು, ಅವರ ವೇಗದ ಬ್ಯಾಟಿಂಗ್, ಲೆಂತ್ನ್ನು ಮೊದಲೇ ಗುರುತಿಸುವುದು, ಮತ್ತು ದೊಡ್ಡ ಶಾಟ್ಗಳನ್ನು ಪ್ರಯೋಗಿಸಲು ಶಕ್ತಿಯನ್ನು ವರ್ಗಾಯಿಸುವುದು ಇವರ ಇನಿಂಗ್ಸ್ನ ಹೈಲೇಟ್ಸ್ ಎಂದು ಸಚಿನ್ ಪೋಸ್ಟ್ ಹಂಚಿಕೊಂಡಿದ್ದಾರೆ.
ವೈಭವ್ ಸೂರ್ಯವಂಶಿ ಮೈಚಳಿ ಬಿಟ್ಟು ಬ್ಯಾಟ್ ಮಾಡಿರುವುದಕ್ಕೆ ಟಿ20 ಕ್ರಿಕೆಟ್ನ ನಂಬರ್ ಒನ್ ಬೌಲರ್ ರಶೀದ್ ಖಾನ್ ಅವರಿಗೂ ಅವರು ದಂಡಿಸಿದರು. ಇವರಿಗೆ ಇವರು ಸಿಕ್ಸರ್ ಬಾರಿಸಿದ್ದನ್ನು ಕಂಡು ಎಲ್ಲರೂ ಆಶ್ಚರ್ಯಚಕಿತರಾದರು. ಈ ಗೆಲುವಿನ ಮೂಲಕ ರಾಜಸ್ಥಾನ ರಾಯಲ್ಸ್ ಪ್ಲೇ ಆಫ್ ಆಸೆಯನ್ನು ಜೀವಂತವಾಗಿಟ್ಟುಕೊಂಡಿದೆ.
ಭರ್ಜರಿ ಶತಕ ಬಾರಿಸಿದ ವೈಭವ್ ಸೂರ್ಯವಂಶಿ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಸಂದಿತು. ಈ ವೇಳೆ ಮಾತನಾಡಿದ ಅವರು, ಶತಕ ಬಾರಿಸಿದ್ದು ಖುಷಿ ನೀಡಿದೆ. ಕಳೆದ ಮೂರ್ನಾಲ್ಕು ತಿಂಗಳುಗಳಿಂದ ನಾನು ಕಠಿಣ ಪರಿಶ್ರಮ ಪಡುತ್ತಿದೆ. ಅದಕ್ಕೆ ಇಂದು (ಏ.28) ಫಲ ಲಭಿಸಿದೆ ಎಂದು ತಿಳಿಸಿದರು. ವೈಭವ್ ತಮ್ಮ ಐಪಿಎಲ್ ವೃತ್ತಿ ಜೀವನದ ಮೂರನೇ ಇನಿಂಗ್ಸ್ನಲ್ಲೇ ಶತಕ ಬಾರಿಸಿ ದಾಖಲೆಯ ಪುಟಕ್ಕೆ ಎಂಟ್ರಿ ಪಡೆದರು.

"ನನ್ನ ಗಮನವೆಲ್ಲಾ ಚೆಂಡಿನ ಮೇಲೆ ಇರುತ್ತದೆ. ಯಶಸ್ವಿ ಜೊತೆಗೆ ಬ್ಯಾಟಿಂಗ್ ಮಾಡುವುದು ಆತ್ಮವಿಶ್ವಾಸವನ್ನು ಇಮ್ಮಡಿಗೊಳಿಸಿತು. ಯಶಸ್ವಿ ಯಾವಾಗಲು ನನಗೆ ಹುರಿದುಂಬಿಸುತ್ತಲೇ ಇರುತ್ತಾರೆ. ಐಪಿಎಲ್ನಲ್ಲಿ ಶತಕ ಗಳಿಸುವುದು ಕನಸು ನನಸಾದಂತೆ. ಯಾವುದೇ ಬೌಲರ್ನನ್ನು ಎದುರಿಸಲು ನನಗೆ ಭಯವಿಲ್ಲ ಎಂದು ವೈಭವ್ ತಿಳಿಸಿದ್ದಾರೆ.