Arjun Tendulkar Marriage: ಭಾರತ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರು ಮಂಗಳವಾರ ತಮ್ಮ ಕುಟುಂಬದೊಂದಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿಯಾದರು. ಈ ವೇಳೆ ತಮ್ಮ ಪುತ್ರ ಅರ್ಜುನ್ ತೆಂಡೂಲ್ಕರ್ ಮತ್ತು ಸಾನಿಯಾ ಚಾಂದ್ಹೋಕ್ ಅವರ ವಿವಾಹಕ್ಕೆ ಅವರನ್ನು ಆಹ್ವಾನಿಸಿದ್ದಾರೆ. ಈ ಫೋಟೋಗಳನ್ನು ಕ್ರಿಕೆಟ್ ದೇವರು ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡು ಬರಹವೊಂದನ್ನು ಬರೆದುಕೊಂಡಿದ್ದಾರೆ. ಇದು ಸದ್ಯ ಎಲ್ಲೆಡೆ ಸಖತ್ ಸದ್ದು ಮಾಡುತ್ತಿದೆ.
ಮೋದಿ ಭೇಟಿಯಾದ ಕ್ರಿಕೆಟ್ ದೇವರು: ಈ ಭೇಟಿಯ ಫೋಟೋಗಳನ್ನು ಸಚಿನ್ ತೆಂಡೂಲ್ಕರ್ ತಮ್ಮ ಸಾಮಾಜಿಕ ಜಾಲತಾಣ ಖಾತೆಯಲ್ಲಿ ಹಂಚಿಕೊಂಡಿದ್ದು, ಪ್ರಧಾನಿ ಮೋದಿ ಅವರೊಂದಿಗೆ ಇರುವ ಚಿತ್ರಗಳು ಈಗ ವೈರಲ್ ಆಗಿವೆ. ಕುಟುಂಬ ಸಮೇತ ಭೇಟಿ ನೀಡಿ, ವಿವಾಹ ಕಾರ್ಯಕ್ರಮಕ್ಕೆ ನೀಡಿದ ಆಹ್ವಾನಕ್ಕಾಗಿ ಪ್ರಧಾನಿ ಮೋದಿಯವರು ಶುಭಾಶಯಗಳನ್ನು ತಿಳಿಸಿದ್ದಾರೆ ಎಂದು ತಿಳಿದುಬಂದಿದೆ.

ಕ್ರಿಕೆಟ್ ದೇವರ ಬರಹ ವೈರಲ್: "ಅರ್ಜುನ್ ಮತ್ತು ಸಾನಿಯಾ ಅವರ ವಿವಾಹಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ ಜೀ ಅವರನ್ನು ಆಹ್ವಾನಿಸುವ ಅವಕಾಶ ನಮಗೆ ಗೌರವದ ವಿಷಯವಾಗಿತ್ತು. ಯುವ ಜೋಡಿಗೆ ನೀಡಿದ ನಿಮ್ಮ ಆಶೀರ್ವಾದ ಮತ್ತು ಆತ್ಮೀಯ ಸಲಹೆಗಳಿಗೆ ಧನ್ಯವಾದಗಳು ಮೋದಿ ಜೀ," ಎಂದು ಸಚಿನ್ ತೆಂಡೂಲ್ಕರ್ ಅವರು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.
ವಿವಾಹ ಯಾವಾಗ?: ಅರ್ಜುನ್ ತೆಂಡೂಲ್ಕರ್ ಶೀಘ್ರದಲ್ಲೇ ಖ್ಯಾತ ಕೈಗಾರಿಕೋದ್ಯಮಿ ಹಾಗೂ ಗ್ರಾವಿಸ್ ಗ್ರೂಪ್ನ ಮುಖ್ಯಸ್ಥರಾದ ರವಿ ಘೈ ಅವರ ಮೊಮ್ಮಗಳು ಸಾನಿಯಾ ಚಂದೋಕ್ ಅವರೊಂದಿಗೆ ಸಪ್ತಪದಿ ತುಳಿಯಲು ಸಿದ್ಧರಾಗಿದ್ದಾರೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ಇಬ್ಬರೂ ತಮ್ಮ ಸಂಬಂಧದ ಬಗ್ಗೆ ಅಧಿಕೃತವಾಗಿ ಘೋಷಿಸಿದ್ದರು. ಬಳಿಕ ಖಾಸಗಿ ಸಮಾರಂಭದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಮೂಲಗಳ ಪ್ರಕಾರ, ಅರ್ಜುನ್ ಮತ್ತು ಸಾನಿಯಾ ತಮ್ಮ ವಿವಾಹದ ದಿನಾಂಕವನ್ನು ಈಗಾಗಲೇ ನಿಗದಿಪಡಿಸಿಕೊಂಡಿದ್ದು, ಈ ವರ್ಷದ ಮಾರ್ಚ್ ತಿಂಗಳಲ್ಲಿ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಜೀವನ: ಅರ್ಜುನ್ ತೆಂಡೂಲ್ಕರ್ ಅವರು ಭಾರತದ ಕ್ರಿಕೆಟ್ ದಿಗ್ಗಜ ಹಾಗೂ ಕ್ರಿಕೆಟ್ ದೇವರು ಅಂತಲೇ ಪ್ರಸಿದ್ಧಿಯಾಗಿರುವ ಸಚಿನ್ ತೆಂಡೂಲ್ಕರ್ ಅವರ ಪುತ್ರ. ಅರ್ಜುನ್ ಅವರು ಕ್ರಿಕೆಟ್ನಲ್ಲಿ ಆಲ್ರೌಂಡರ್ ಆಗಿ ಗುರುತಿಸಿಕೊಂಡಿದ್ದು, ದೇಶೀಯ ಕ್ರಿಕೆಟ್ನಲ್ಲಿ ಗೋವಾ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ.
ಅರ್ಜುನ್ ತೆಂಡೂಲ್ಕರ್ ಈವರೆಗೆ 22 ಪ್ರಥಮ ದರ್ಜೆ ಪಂದ್ಯಗಳು, 23 ಲಿಸ್ಟ್ ಎ ಪಂದ್ಯಗಳು ಹಾಗೂ 29 ಟಿ20 ಪಂದ್ಯಗಳಲ್ಲಿ ಆಡಿದ್ದಾರೆ. ಅರ್ಜುನ್ ಅವರನ್ನು ಮೊದಲು ಮುಂಬೈ ಇಂಡಿಯನ್ಸ್ ತಂಡ 2021ರ ಐಪಿಎಲ್ ಹರಾಜಿನಲ್ಲಿ ಖರೀದಿಸಿತು. ಆರಂಭದಲ್ಲಿ ತಂಡದೊಂದಿಗೆ ನೆಟ್ ಬೌಲರ್ ಹಾಗೂ ಬ್ಯಾಕಪ್ ಆಟಗಾರರಾಗಿ ಅಷ್ಟೇ ಉಳಿದುಕೊಂಡಿದ್ದರು. ಬಳಿಕ ತಂಡದ ಸದಸ್ಯರಾಗುವ ಅವಕಾಶ ಪಡೆದರು. 2023ರ ಐಪಿಎಲ್ ಆವೃತ್ತಿಯಲ್ಲಿ ಅಧಿಕೃತವಾಗಿ ಐಪಿಎಲ್ಗೆ ಪಾದಾರ್ಪಣೆ ಮಾಡಿದರು. ಪಂದ್ಯದಲ್ಲಿ ಎಡಗೈ ವೇಗದ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಬ್ಯಾಟಿಂಗ್ ಕೂಡ ಮಾಡಲಿದ್ದಾರೆ.
ಯಾರಿಗೆಲ್ಲಾ ಆಹ್ವಾನ?: ತಮ್ಮ ಪುತ್ರನ ವಿವಾಹಕ್ಕೆ ಸಚಿನ್ ತೆಂಡೂಲ್ಕರ್ ಅವರು ಸ್ನೇಹಿತರು, ಹಳೆಯ ಟೀಮ್ಮೇಟ್ಸ್, ಕ್ರಿಕೆಟ್ ವಲಯದ ಗಣ್ಯರು, ಹಲವು ಗಣ್ಯ ವ್ಯಕ್ತಿತ್ವಗಳಿಗೆ ಆಹ್ವಾನ ನೀಡಿದ್ದಾರೆ. ತಮ್ಮ ಕುಟುಂಬದೊಂದಿಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರಪತಿ ದ್ರೌಪದಿ ಮುರ್ಮು, ರಾಹುಲ್ ಗಾಂಧಿ ಅವರನ್ನು ಭೇಟಿಯಾಗಿ, ಪುತ್ರ ಅರ್ಜುನ್ ಮತ್ತು ಸಾನಿಯಾ ಅವರ ವಿವಾಹಕ್ಕೆ ಆಹ್ವಾನ ನೀಡಿದ್ದಾರೆ. ಈ ಭೇಟಿಯ ವೇಳೆ ಅವರು ಯುವ ಜೋಡಿಗೆ ಆಶೀರ್ವಾದಿಸಿದ್ದಾರೆ.
ವಿವಾಹ ಎಲ್ಲಿ?: ಮಾರ್ಚ್ ತಿಂಗಳಲ್ಲಿ ನಡೆಯಲಿರುವ ಈ ವಿವಾಹ ಸಮಾರಂಭ ಕ್ರಿಕೆಟ್ ಮತ್ತು ಉದ್ಯಮ ವಲಯದಲ್ಲಿ ಸಾಕಷ್ಟು ಕುತೂಹಲ ಮೂಡಿಸಿದ್ದು, ದೇಶದ ಹಲವು ಗಣ್ಯರ ಭಾಗವಹಿಸುತ್ತಾರೆ ಎಂದು ನಿರೀಕ್ಷಿಸಲಾಗಿದೆ. ಮುಂಬೈನಲ್ಲಿ ಅದ್ಧೂರಿಯಾಗಿ ಮದುವೆ ಸಮಾರಂಭ ನಡೆಯಲಿದೆ ಎಂದು ತಿಳಿದುಬಂದಿದೆ.