
ಟೀಮ್ ಇಂಡಿಯಾದ ಮಾಜಿ ಆಟಗಾರ ಮೊಹಮದ್ ಕೈಫ್ 2002ರಲ್ಲಿ ಇಂಗ್ಲೆಂಡ್ ವಿರುದ್ಧದ ಐತಿಹಾಸಿಕ ನ್ಯಾಟ್ವೆಸ್ಟ್ ಸರಣಿಯನ್ನು ಭಾರತದ ಮುಡಿಗೇರಿಸಿದ ರೀತಿ ಅಂದು ಮ್ಯಾಚ್ ನೋಡಿದ ಎಲ್ಲರ ಕಣ್ಣ ಮುಂದೆಯೂ ಹಾಗೇಯೇ ಇದೆ. ಟೀಮ್ ಇಂಡಿಯಾದ ಅದ್ಭುತ ಚೇಸಿಂಗ್ನಲ್ಲಿ ಅದೂ ಒಂದು ಎಂದರೆ ತಪ್ಪಾಗಲಾರದು. ಕೈಫ್ ಆಡಿದ ಆ ಇನ್ನಿಂಗ್ಸ್ ಕ್ರಿಕೆಟ್ ಅಭಿಮಾನಿಗಳ ನೆನಪಿನಲ್ಲಿ ಎಂದೆಂದಿಗೂ ಇರುತ್ತದೆ.
ಹೀಗೆ ಹಲವು ಅದ್ಭುತ ಇನ್ನಿಂಗ್ಸ್ಗಳನ್ನು ಆಡಿದ ಕೈಫ್ ಮತ್ತೊಂದು ವಿಶೇಷ ಕಾರಣಕ್ಕೆ ಸ್ಮರಣೀಯ. ಯಸ್, ಅದು ಫೀಲ್ಡಿಂಗ್. ಟೀಮ್ ಇಂಡಿಯಾ ಕಂಡ ಅದ್ಭುತ ಫೀಲ್ಡರ್ ಮೊಹಮದ್ ಕೈಫ್. ಫೀಲ್ಡಿಂಗ್ನಲ್ಲಿ ಚುರುಕಿಲ್ಲ ಎಂಬ ಅಪವಾದವನ್ನು ಹೊತ್ತಿದ್ದ ಭಾರತ ತಂಡಕ್ಕೆ ಕೈಫ್ ಮತ್ತು ಯುವರಾಜ್ ಸಿಂಗ್ ಆ ಅಪವಾದವನ್ನು ಅಳಿಸಿ ಹಾಕಲು ಕಾರಣರಾದರು.
ಮೊಹಮದ್ ಕೈಫ್ ಫೀಲ್ಡಿಂಗ್ನಲ್ಲಿ ಈಗಲೂ ಅಷ್ಟೇ ಚುರುಕಾಗಿದ್ದಾರೆ ಎಂದು ಸವ್ಯಸಾಚಿ ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ. ಜೊತೆಗೆ ಫೀಲ್ಡಿಂಗ್ನ ಕಾರಣಕ್ಕೆ ಅವರನ್ನು ಭಾಯಿ ಸಾಹಬ್ ಎಂದೇ ಕರಿತೀವಿ ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.
ಇತ್ತೀಚೆಗೆ ನಡೆದ ವಲ್ಡ್ ರೋಡ್ ಸೇಫ್ಟಿ ಸಿರೀಸ್ ಬಗ್ಗೆ ಸಚಿನ್ ತೆಂಡೂಲಕ್ರ್ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಮೊಹಮದ್ ಕೈಫ್ ಚುರಿಕಿನ ಫೀಲ್ಡಿಂಗ್ ಬಗ್ಗೆ ಸಚಿನ್ 'ಆತನೊಬ್ಬ ಫಿಟ್ ಆಟಗಾರ, ಫಿಟ್ ಇದ್ದಾಗ ಮಾತ್ರವೇ ಆ ರೀತಿ ಡೈವ್ ಮೂಲಕ ಫೀಲ್ಡಿಂಗ್ ಮಾಡಲು ಸಾಧ್ಯ, ಆತನಿಗೆ ಡೈವ್ ನ್ಯಾಚುರಲ್ ಆಗಿ ಬರುತ್ತದೆ ಎಂದು ಹೇಳಿದ್ದಾರೆ.
'ವಲ್ಡ್ ಸಿರೀಸ್ ಸಂದರ್ಭದಲ್ಲಿ ಮೊಹಮದ್ ಕೈಫ್ ಡೈವ್ ಮಾಡುತ್ತಾ ಫೀಲ್ಡಿಂಗ್ ಮಾಡುತ್ತಿದ್ದರು. ಆಗ ನಾನು ಭಾಯಿ ಸಾಹಬ್, ಸ್ವಲ್ಪ ಜಾಗರೂಕರಾಗಿರಿ, ನಾವಿನ್ನೂ ಹಲವು ಪಂದ್ಯಗಳನ್ನು ಆಡಬೇಕು' ಎಂದು ಹೇಳಿ ಎಚ್ಚರಿಸುತ್ತಿದ್ದದ್ದಾಗಿ ಸಚಿನ್ ಹೇಳಿದ್ದಾರೆ.