
ಟಿ20 ವಿಶ್ವಕಪ್ನ ಆರಂಭಿಕ ಪಂದ್ಯದಲ್ಲಿಯೇ ಬೃಹತ್ ಬೇಟೆಯಾಡುವ ಮೂಲಕ ನಮೀಬಿಯಾ ತಂಡ ಕ್ರಿಕೆಟ್ ಅಭಿಮಾನಿಗಳ ಮನಗೆಲ್ಲುವಲ್ಲಿ ಯಶಸ್ವಿಯಾಗಿದೆ. ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ 55 ರನ್ಗಳ ಅಂತರದಿಂದ ಗೆಲುವು ಸಾಧಿಸುವ ಮೂಲಕ ಅಚ್ಚರಿ ಮೂಡಿಸಿದೆ. ಆಫ್ರಿಕಾ ಖಂಡದ ಈ ದೇಶ ನೀಡಿದ ಈ ಪ್ರದರ್ಶನದ ಬಗ್ಗೆ ಕ್ರಿಕೆಟ್ ಅಭಿಮಾನಿಗಳು ಹಾಗೂ ಪಂಡಿತರು ಸಾಕಷ್ಟು ಪ್ರತಿಕ್ರಿಯೆ ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ಭಾರತದ ಮಾಜಿ ಆಟಗಾರ ದಿಗ್ಗಜ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಮಾಡಿದ ಟ್ವೀಟ್ ಸಾಕಷ್ಟು ವೈರಲ್ ಆಗಿದ್ದು ಕುತೂಹಲ ಮೂಡಿಸಿದೆ.
ಶ್ರೀಲಂಕಾ ತಂಡದ ವಿರುದ್ಧ ನಮೀಬಿಯಾ ತಂಡ ಪ್ರದರ್ಶಿಸಿದ ಬಿಗು ದಾಳಿಗೆ ಕ್ರಿಕೆಟ್ ಅಭಿಮಾನಿಗಳು ಅಚ್ಚರಿಗೊಳಗಾಗಿದ್ದಾರೆ. ಈ ಗೆಲುವಿನ ಬಳಿಕ ದಿಗ್ಗಜ ಆಟಗಾರ ಸಚಿನ್ ತೆಂಡೂಲ್ಕರ್ ಟ್ವಿಟ್ ಮಾಡಿದ್ದಾರೆ. ಈ ಟ್ವೀಟ್ ಮೂಲಕ ಸಚಿನ್ ತೆಂಡೂಲ್ಕರ್ ಕೂಡ ನಮೀಬಿಯಾ ಇಷ್ಟು ದೊಡ್ಡ ಗೆಲುವಿನಿಂದಾಗಿ ಅಚ್ಚರಿಗೊಂಡಿದ್ದಾರೆ ಎಂಬುದು ಸ್ಪಷ್ಟವಾಗುತ್ತಿದೆ.
ನಮೀಬಿಯಾ ಹೆಸರನ್ನು ಬಳಸಿಕೊಂಡು ಸಚಿನ್ ತೆಂಡೂಲ್ಕರ್ ಪನ್ ಟ್ವೀಟ್ ಮಾಡಿದ್ದು ಟ್ವಿಟ್ ಹೀಗಿದೆ. "ಕ್ರಿಕೆಟ್ ಜಗತ್ತಿಗೆ ನಮೀಬಿಯಾ ಇಂದು ಹೇಳುತ್ತಿದೆ... ಹೆಸರು ನೆನಪಿಟ್ಟುಕೊಳ್ಳಿ" ಎಂದು ಸಚಿನ್ ತೆಂಡೂಲ್ಕರ್ ಟ್ವೀಟ್ ಮಾಡಿದ್ದಾರೆ. ಈ ಮೂಲಕ ಜಾಗತಿಕ ಕ್ರಿಕೆಟ್ನಲ್ಲಿ ಪುಟ್ಟ ಹೆಜ್ಜೆಯಿಡುತ್ತಿರುವ ನಮೀಬಿಯಾ ತಂಡದ ಸಾಧನೆಗೆ ಮೆಚ್ಚುಗೆ ವ್ಯಕ್ತಡಿಸಿದ್ದಾರೆ.
ಈ ಪಂದ್ಯದಲ್ಲಿ ನಮೀಬಿಯಾ ತಂಡ ಬೃಹತ್ ಗೆಲುವು ಸಾಧಿಸಿರುವ ಕಾರಣದಿಂದಾಗಿ ಸೂಪರ್ 12 ಹಂತಕ್ಕೇರುವುದು ಸುಲಭವಾಗಿದೆ. ಮುಂದಿನ ಎರಡು ಪಂದ್ಯಗಳ ಪೈಕಿ ಒಂದು ಗೆಲುವು ಸಾಧಿಸಿದರು ಕೂಡ ನಮೀಬಿಯಾ ತಂಡ ಮುಖ್ಯ ಹಂತಕ್ಕೇರುವಲ್ಲಿ ಯಶಸ್ವಿಯಾಗಲಿದೆ. ಆದರೆ ಇತ್ತ ಶ್ರೀಲಂಕಾ ತನ್ನ ಹಾದಿಯನ್ನು ಕಠಿಣಗೊಳಿಸಿಕೊಂಡಿದೆ. ಮುಂದಿನ ಎರಡು ಪಂದ್ಯಗಳಲ್ಲಿ ಸಣ್ಣ ಎಚ್ಚರ ತಪ್ಪಿದರೂ ದಸುನ್ ಶನಕ ನೇತೃತ್ವದ ಲಂಕಾ ಪಡೆ ಭಾರೀ ಮುಖಂಭಂಗವನ್ನು ಅನುಭವಿಸಬೇಕಾಗುತ್ತದೆ.
ಇನ್ನು ಈ ಭರ್ಜರಿ ಗೆಲುವಿನ ಬಳಿಕ ನಮೀಬಿಯಾ ನಾಯಕ ಎರಾಸ್ಮರ್ ಪ್ರತಿಕ್ರಿಯಿಸಿದ್ದು ಹರ್ಷ ವ್ಯಕ್ತಪಡಿಸಿದ್ದಾರೆ. "ಇದೊಂದು ಅದ್ಭುತವಾದ ಪ್ರಯಾಣ. ಕಳೆದ ವರ್ಷದ ವಿಶ್ವಕಪ್ನಲ್ಲಿ ನಮಗೆ ಸಾಕಷ್ಟು ಹುಮ್ಮಸ್ಸು ದೊರೆತಿತ್ತು. ಈಗ ನಾವು ಅದ್ಭುತ ಗೆಲುವಿನೊಂದಿಗೆ ಅಗ್ರಸ್ಥಾನದಲ್ಲಿದ್ದೇವೆ" ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ. ಮುಂದುವರಿದು ಮಾತನಾಡಿದ ನಮೀಬಿಯಾ ನಾಯಕ "ಈ ಟೂರ್ನಿಯಲ್ಲಿ ಮುಂದುವರಿಯಬೇಕಾದರೆ ನಾವು ಇನ್ನು ಕೂಡ ಸಾಕಷ್ಟು ಪರಿಶ್ರಮ ಪಡಬೇಕಿದೆ. ಆದರೆ ಖಂಡಿತವಾಗಿಯೂ ಇದು ನಮ್ಮ ಪಾಲಿಗೆ ಐತಿಹಾಸಿಕವಾದ ದಿನವಾಗಿದೆ" ಎಂದಿದ್ದಾರೆ. ಇನ್ನು ಈ ಗೆಲುವಿನಲ್ಲಿ ತಂಡದ ಕೋಚ್ ಪೆರಿ ಡಿ ಬ್ರೂನ್ ಅವರ ಪರಿಶ್ರಮ ದೊಡ್ಡದಾಗಿದೆ ಎಂದು ಎರಾಸ್ಮಸ್ ತಂಡದ ಕೋಚ್ಗೆ ಗೆಲುವಿನ ಶ್ರೇಯಸ್ಸು ನೀಡಿದ್ದಾರೆ.