ಬೆಂಗಳೂರು, ಜೂನ್ 07: ಕ್ರಿಕೆಟ್ ದಿಗ್ಗಜ ಸಚಿನ್ ತೆಂಡೂಲ್ಕರ್ ಅವರ ಪುತ್ರ ಅರ್ಜುನ್ ತೆಂಡೂಲ್ಕರ್ ಅವರು ಅಂಡರ್ 19 ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಬಗ್ಗೆ ಬಿಸಿಸಿಐನಿಂದ ಯಾವುದೇ ಅಧಿಕೃತ ಪ್ರಕಟಣೆ ಬಂದಿಲ್ಲ.
ಜುಲೈ ತಿಂಗಳಿನಲ್ಲಿ ಭಾರತದ ಅಂಡರ್ 19 ತಂಡವು, ಶ್ರೀಲಂಕಾದಲ್ಲಿ ನಾಲ್ಕು ದಿನಗಳ ಪಂದ್ಯ ಹಾಗೂ ಏಕದಿನ ಪಂದ್ಯಗಳನ್ನು ಆಡಲಿದೆ. ನಾಲ್ಕುದಿನಗಳ ಪಂದ್ಯಗಳಿಗೆ ಆಲ್ ರೌಂಡರ್ ಅರ್ಜುನ್ ತೆಂಡೂಲ್ಕರ್ ಆಯ್ಕೆಯಾಗಿದ್ದಾರೆ.
ದೆಹಲಿಯ ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಅನುಜ್ ರಾವತ್ ಅವರು ತಂಡಕ್ಕೆ ನಾಯಕರಾಗಿದ್ದಾರೆ. 2017-18ರ ರಣಜಿ ಟ್ರೋಫಿಯಲ್ಲಿ ಆಡಿದ್ದ ರಾವತ್, 2017ರ ಅಂಡರ್ 19ರ ಏಷ್ಯಾ ಕಪ್ ನಲ್ಲಿ ಆಡಿದ್ದರು.
ಏಕದಿನ ಪಂದ್ಯಗಳ ತಂಡವನ್ನು ಅರ್ಯನ್ ಜುಯಾಲ್ ಮುನ್ನಡೆಸಲಿದ್ದಾರೆ. ವಿಜಯ್ ಹಜಾರೆ ಟ್ರೋಫಿಯಲ್ಲಿ ಉತ್ತರಪ್ರದೇಶ ಪರ ಆಡಿದ್ದರು.
18 ವರ್ಷ ವಯಸ್ಸಿನ ಅರ್ಜುನ್ ತೆಂಡೂಲ್ಕರ್ ಅವರು ಇತ್ತೀಚೆಗೆ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಗ್ಲೋಬಲ್ ಟ್ವೆಂಟಿ20 ಸರಣಿಯಲ್ಲಿ ಆಡಿ ಉತ್ತಮ ಪ್ರದರ್ಶನ ನೀಡಿ, 27 ಎಸೆತಗಳಲ್ಲಿ 48ರನ್ ಸಿಡಿಸಿದ್ದರು.