ಮುಂಬೈ ಇಂಡಿಯನ್ಸ್ ಈ ಬಾರಿಯ ಐಪಿಎಲ್ ಟೂರ್ನಿಗಳಿಗೂ ಮುನ್ನ ಭಾರೀ ಸುದ್ದಿಯಲ್ಲಿದೆ. ಮುಂಬೈ ತಂಡ ತನ್ನ ಸ್ಟಾರ್ ನಾಯಕನನ್ನು ಕೆಳಗಿಳಿಸಿದೆ. ಅಲ್ಲದೆ ರೋಹಿತ್ ಶರ್ಮಾ ಅವರಿಂದ ನಾಯಕತ್ವ ಕಸಿದುಕೊಂಡು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ ನೀಡಲಾಗಿದೆ. ಇದರಿಂದ ತಂಡದಲ್ಲಿ ಅಸಮಾಧಾನದ ಹೊಗೆ ಮನೆ ಮಾಡಿದೆ.
ರೋಹಿತ್ ಶರ್ಮಾ ಅವರ ನಾಯಕತ್ವವನ್ನು ಕಸಿದುಕೊಂಡಿದ್ದು, ಹಿಟ್ ಮ್ಯಾನ್ಗೆ ಬೇಸರ ತಂದಿದೆ ಎಂಬ ಚರ್ಚೆ ಆರಂಭವಾಗಿದೆ. ಇನ್ನು ತಂಡ ರೋಹಿತ್ ಶರ್ಮಾ ಅವರನ್ನು ನಡೆಸಿಕೊಂಡ ರೀತಿಯ ಬಗ್ಗೆ ಆಟಗಾರರಲ್ಲೂ ಅಸಮಾಧಾನ ವ್ಯಕ್ತವಾಗಿದೆ. ಇನ್ನು ತಂಡದ ನಾಯಕತ್ವದ ಮೇಲೆ ಕಣ್ಣು ನೆಟ್ಟಿದ್ದ ಸ್ಟಾರ್ ಆಟಗಾರರಾದ ಜಸ್ಪ್ರಿತ್ ಬುಮ್ರಾ ಹಾಗೂ ಸೂರ್ಯಕುಮಾರ್ ಯಾದವ್ ಬೇಸರಗೊಂಡಿದ್ದಾರೆ.

ತಂಡದ ಮಾಜಿ ನಾಯಕನನ್ನು ನಡೆಸಿಕೊಂಡ ರೀತಿಯ ಬಗ್ಗೆ ತಂಡದ ಐಕಾನಿಕ್ ಪ್ಲೇಯರ್ ಸಚಿನ್ ತೆಂಡೂಲ್ಕರ್ ಸಹ ಬೇಸರಗೊಂಡಿದ್ದಾರೆ. ಅಲ್ಲದೆ ರೋಹಿತ್ ಶರ್ಮಾ ಅವರಿಗೆ ಆದ ಅನ್ಯಾಯವನ್ನು ಸಹಿಸಿಕೊಳ್ಳದೆ ಸಚಿನ್ ತೆಂಡೂಲ್ಕರ್ ತಂಡವನ್ನು ತೊರೆದ ಸುದ್ದಿಗಳು ಬಂದಿವೆ. ಆದರೆ ಮುಂಬೈ ಇಂಡಿಯನ್ಸ್ ತಂಡದಿಂದ ಇನ್ನು ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಹೊರ ಬಂದಿಲ್ಲ. ಆದರೆ ಸಾಮಾಜಿಕ ತಾಣದಲ್ಲಿ ಈ ಸುದ್ದಿ ಭಾರೀ ವೈರಲ್ ಆಗುತ್ತಿದೆ.
ರೋಹಿತ್ ಶರ್ಮಾ ಅವರನ್ನು ನಾಯಕತ್ವದಿಂದ ಕೆಳಗಿಳಿಸಿದ್ದ ಬಗ್ಗೆ ಸಚಿನ್ ಸಹ ಅಸಮಾಧಾನಗೊಂಡಿದ್ದಾರೆ ಎಂದು ಸಾಮಾಜಿಕ ತಾಣಗಳಲ್ಲಿ ಭಾರೀ ಚರ್ಚೆಗೆ ಗ್ರಾಸವಾಗುತ್ತಿದೆ. ವಿಶ್ವ ಕ್ರಿಕೆಟ್ನಲ್ಲಿ ತನ್ನದೇ ಛಾಪು ಮೂಡಿಸಿರುವ ದಿಗ್ಗಜ ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ಪರ ಆಡಿ ಸೈ ಎನಿಸಿಕೊಂಡಿದ್ದಾರೆ. ಸಚಿನ್ ಮುಂಬೈ ಪರ 78 ಪಂದ್ಯಗಳಲ್ಲಿ 2334 ರನ್ ಬಾರಿಸಿದ್ದಾರೆ. ಇದರಲ್ಲಿ ಒಂದು ಶತಕ, 13 ಅರ್ಧಶತಕಗಳು ಸೇರಿವೆ.

ರೋಹಿತ್ ಶರ್ಮಾ ಮುಂದಾಳತ್ವದಲ್ಲಿ ಮುಂಬೈ ಇಂಡಿಯನ್ಸ್ ಐದು ಬಾರಿ ಚಾಂಪಿಯನ್ ಪಟ್ಟವನ್ನು ಅಲಂಕರಿಸಿದೆ. ಇದರ ಹಿಂದೆ ಸಚಿನ್ ತೆಂಡೂಲ್ಕರ್ ಅವರ ಮಾರ್ಗದರ್ಶನ ದೊಡ್ಡದಾಗಿದೆ. ಇನ್ನು ಸಚಿನ್ ತೆಂಡೂಲ್ಕರ್ ಮುಂಬೈ ಇಂಡಿಯನ್ಸ್ ತಂಡವನ್ನು ತೊರೆದಿಲ್ಲ. ಇನ್ನು ಮುಂದಿನ ವರ್ಷವೂ ಇವರು ಮುಂಬೈ ಇಂಡಿಯನ್ಸ್ ಡಗ್ಔಟ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ತಂಡದ ಮೂಲಗಳು ತಿಳಿಸಿವೆ.
ನಾಯಕರಾಗಿ ಹಾರ್ದಿಕ್ ಪಾಂಡ್ಯ ಹಾಗೂ ಮೆಂಟರ್ ಆಗಿ ಸಚಿನ್ ತೆಂಡೂಲ್ಕರ್ ಅವರ ಜುಗಲ್ಬಂಧಿ ಮುಂಬರುವ ಐಪಿಎಲ್ನಲ್ಲಿ ಕಮಾಲ್ ಪ್ರದರ್ಶನ ನೀಡುತ್ತದಾ ಎಂಬ ಪ್ರಶ್ನೆಗಳು ಎದ್ದಿದ್ದು, ಇದಕ್ಕೆ 2024ರಲ್ಲಿ ಉತ್ತರ ಸಿಗಲಿದೆ. ಅಲ್ಲದೆ ಹಾರ್ದಿಕ್ ನಾಯಕರಾಗಿ ತಂಡವನ್ನು ಹೇಗೆ ಮುನ್ನಡೆಸಲಿದ್ದಾರೆ? ಎಲ್ಲರ ವಿಶ್ವಾಸ ಗೆದ್ದು ತಂಡವನ್ನು ಮುನ್ನಡೆಸುತ್ತಾ ಎಂಬ ಪ್ರಶ್ನೆಗಳು ಸಹ ಎದ್ದಿವೆ.