
ಭಾರತ ಏಕದಿನ ತಂಡದಲ್ಲಿ ಸೂರ್ಯಕುಮಾರ್ ಯಾದವ್ ಸತತವಾಗಿ ವಿಫಲವಾಗಿರುವುದಕ್ಕೆ ಸಾಕಷ್ಟು ಟೀಕೆ ವ್ಯಕ್ತವಾಗುತ್ತಿದೆ. ಅವರನ್ನು ಏಕದಿನ ತಂಡದಿಂದ ಕೈಬಿಡಬೇಕು ಎಂದು ಅಭಿಮಾನಿಗಳು, ಕೆಲವು ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದಾರೆ.
ಮಾಜಿ ಪಾಕಿಸ್ತಾನ ತಂಡದ ನಾಯಕ ಸಲ್ಮಾನ್ ಬಟ್ ಸೂರ್ಯಕುಮಾರ್ ಯಾದವ್ಗೆ ಬೆಂಬಲ ಸೂಚಿಸಿದ್ದು, ಅವರನ್ನು ಭಾರತ ತಂಡದಿಂದ ತೆಗೆಯಬಾರದು ಎಂದು ಒತ್ತಾಯಿಸಿದ್ದಾರೆ. ಸೂರ್ಯಕುಮಾರ್ ಯಾದವ್ ಸದ್ಯ ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ ಎನ್ನುವುದನ್ನು ಒಪ್ಪಿಕೊಂಡರೂ ಅವರ ವಿಶೇಷ ಪ್ರತಿಭೆಯನ್ನು ಗಮನದಲ್ಲಿಟ್ಟುಕೊಂಡು ಅವರನ್ನು ತಂಡದಿಂದ ಕೈಬಿಡಬಾರದು ಎಂದು ಸಲಹೆ ನೀಡಿದ್ದಾರೆ.
"ಸೂರ್ಯಕುಮಾರ್ ಯಾದವ್ರನ್ನು ತಂಡದಿಂದ ಕೈಬಿಡುವ ಬದಲು, ಅಲ್ಪ ವಿರಾಮ ನೀಡುವ ಬಗ್ಗೆ ತಂಡದ ಆಡಳಿತ ಯೋಚಿಸಬೇಕು, ಇದರಿಂದಾಗಿ ಅವರು ಭವಿಷ್ಯದಲ್ಲಿ ಪರಿಣಾಮಕಾರಿಯಾಗಿ ವಾಪಸಾಯಿ ಮಾಡಬಹುದು, ದೊಡ್ಡ ಮೊತ್ತ ಗಳಿಸಬಹುದು" ಎಂದು ಬಟ್ ಅಭಿಪ್ರಾಯಪಟ್ಟಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಬಟ್, "ಒಬ್ಬ ಆಟಗಾರ 10 ಇನ್ನಿಂಗ್ಸ್ಗಳಲ್ಲಿ ನಿರಂತರವಾಗಿ ವಿಫಲವಾಗುವುದು ಆತಂಕಕಾರಿ ವಿಚಾರವಾಗಿದೆ. ಸೂರ್ಯಕುಮಾರ್ ಯಾದವ್ ಸದ್ಯ ಉತ್ತಮ ಪ್ರದರ್ಶನ ನೀಡದೇ ಇದ್ದರೂ, ಅವರ ಪ್ರತಿಭೆ ಮತ್ತು ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಅವರು ನೀಡಿರುವ ಪ್ರದರ್ಶನವನ್ನು ಪರಿಗಣಿಸಿ ಅವರನ್ನು ತಂಡದಲ್ಲಿ ಉಳಿಸಿಕೊಳ್ಳಬೇಕು" ಎಂದು ಹೇಳಿದರು.

ದೇಶೀಯ ಕ್ರಿಕೆಟ್ನಲ್ಲಿ ವಾಪಸಾಗುವ ಸಾಧ್ಯತೆ
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಪದೇ ಪದೇ ವಿಫಲವಾಗುತ್ತಿರುವುದಕ್ಕೆ ಕಾರಣ ಹುಡುಕಬೇಕಿದೆ. ಅವರಿಗೆ ಸಣ್ಣ ವಿರಾಮವನ್ನು ನೀಡುವ ಬಗ್ಗೆ ಕೂಡ ಬಿಸಿಸಿಐ ಯೋಚನೆ ಮಾಡಬಹುದು, ಅಥವಾ ದೇಶೀಯ ಕ್ರಿಕೆಟ್ನಲ್ಲಿ ಆಡುವ ಮೂಲಕ ತಮ್ಮ ಫಾರ್ಮ್ ಮರಳಿ ಪಡೆಯುವ ಬಗ್ಗೆ ಯೋಚಿಸಬಹುದು, ಈ ರೀತಿಯ ಸತತವಾದ ವೈಫಲ್ಯಗಳು ಆಟಗಾರನ ಮೇಲೆ ಅಪಾರ ಒತ್ತಡ ಹಾಕುತ್ತವೆ. ಕೆಲವೊಮ್ಮೆ ಒತ್ತಡವನ್ನು ದೂರಮಾಡಿಕೊಳ್ಳಲು ವಿರಾಮ ಬೇಕಾಗುತ್ತದೆ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.
ಇತ್ತೀಚೆಗಷ್ಟೇ ಮುಕ್ತಾಯಗೊಂಡ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೂರು ಪಂದ್ಯಗಳ ಏಕದಿನ ಸರಣಿಯು ಸೂರ್ಯಕುಮಾರ್ಗೆ ಅತ್ಯಂತ ಮಹತ್ವದ್ದಾಗಿತ್ತು, ಶ್ರೇಯಸ್ ಅಯ್ಯರ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಸ್ಥಾನವನ್ನು ಭದ್ರಪಡಿಸಿಕೊಳ್ಳಲು ಅವರಿಗೆ ಉತ್ತಮ ಅವಕಾಶ ಸಿಕ್ಕಿತ್ತು. ಆದರೂ ಟಿ20 ನಂಬರ್ 1 ಬ್ಯಾಟರ್ ಏಕದಿನ ಮಾದರಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡುವಲ್ಲಿ ವಿಫಲವಾದರು. ಮೂರು ಪಂದ್ಯಗಳಲ್ಲಿ ಆಡಿದ ಮೊದಲ ಎಸೆತದಲ್ಲೇ ಔಟಾಗುವ ಮೂಲಕ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

ಪದೇ ಪದೇ ಬದಲಾವಣೆ ಮಾಡಬಾರದು
ಭಾರತ ತಂಡದ ಬೆಂಚ್ ಬಲವನ್ನು ಪರೀಕ್ಷಿಸುವ ಯತ್ನದಲ್ಲಿ ಸಾಕಷ್ಟು ಬದಲಾವಣೆ ಮಾಡುವಲ್ಲಿ ಆಸಕ್ತಿ ತೋರುತ್ತದೆ, ಇದು ತಂಡದ ಪ್ರದರ್ಶನದ ಮೇಲೆ ಕೆಟ್ಟ ಪರಿಣಾಮ ಬೀಡುತ್ತದೆ ಎಂದು ಹೇಳಿದರು. ತಂಡದಲ್ಲಿ ನಿರಂತರವಾಗಿ ಬದಲಾವಣೆ ಮಾಡಿದರೆ, ನಾಯಕನಿಗೆ ಆಡುವ ಬಳಗ ಆಯ್ಕೆ ಮಾಡುವುದು ಕಷ್ಟವಾಗುತ್ತದೆ ಎಂದು ಹೇಳಿದರು.
"ಭಾರತವು ಹೆಚ್ಚಿನ ಕ್ರಿಕೆಟ್ ಪಂದ್ಯಗಳನ್ನು ಆಡಲು, ಸರದಿಯಂತೆ ಹಲವು ಆಟಗಾರರನ್ನು ಆಡಿಸುವ ಅವಕಾಶ ಹೊಂದಿದೆ, ಆದರೂ ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದು ಫಲಿತಾಂಶದ ಮೇಲೆ ಪರಿಣಾಮ ಬೀರುತ್ತದೆ. ನೀವು ಸ್ವಲ್ಪ ಮಟ್ಟಿಗೆ ಬೆಂಚ್ ಶಕ್ತಿಯನ್ನು ಪರೀಕ್ಷೆ ಮಾಡುವುದು ಒಳ್ಳೆಯದು ಆದರೆ ಮಿತಿ ಮೀರಿದ ಪ್ರಯೋಗ ಮಾಡುವುದು ಉತ್ತಮವಲ್ಲ ಎಂದು ಸಲ್ಮಾನ್ ಬಟ್ ಹೇಳಿದರು.