ಇತ್ತೀಚೆಗೆ ಮುಕ್ತಾಯವಾದ ಮಹಾರಾಜ ಟ್ರೋಫಿ ಟಿ20 ಟೂರ್ನಿಯಲ್ಲಿ ಟೀಮ್ ಇಂಡಿಯಾ ಮಾಜಿ ನಾಯಕ ಮತ್ತು ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರ ಪುತ್ರ ಸಾಕಷ್ಟು ಸದ್ದು ಮಾಡಿದ್ದರು. ಮೈಸೂರು ವಾರಿಯರ್ಸ್ ತಂಡ ಪರ ಸಮಿತ್ ದ್ರಾವಿಡ್ ಅದ್ಭುತ ಪ್ರರ್ದಶನ ನೀಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.
ಇದರ ಫಲವಾಗಿ ಸಮಿತ್ ದ್ರಾವಿಡ್ ಆಸ್ಟ್ರೇಲಿಯಾ ವಿರುದ್ಧದ ಸರಣಿಗಾಗಿ ಭಾರತ ಅಂಡರ್-19 ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಈಗ ಸಮಿತ್ ದ್ರಾವಿಡ್ ಅವರಿಗೆ ಭಾರೀ ಹಿನ್ನಡೆಯಾಗಿದೆ. ಭಾರತ ತಂಡಕ್ಕಾಗಿ ಆಡುವ ಅವರ ಕನಸು ಭಗ್ನಗೊಂಡಿದೆ.

ಪುದುಚೇರಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಯಿಂದ ಹೊರಗುಳಿದಿದ್ದ ಆಲ್ರೌಂಡರ್ ಸಮಿತ್ ದ್ರಾವಿಡ್ ಮೊಣಕಾಲಿನ ಗಾಯದಿಂದ ಇನ್ನೂ ಚೇತರಿಸಿಕೊಂಡಿಲ್ಲ. ಚೆನ್ನೈನಲ್ಲಿ ಸೋಮವಾರದಿಂದ ಆರಂಭವಾಗಿರುವ ಆಸ್ಟ್ರೇಲಿಯಾ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಿಂದ ಸಮಿತ್ ದ್ರಾವಿಡ್ ಹೊರಬಿದ್ದಿದ್ದಾರೆ.
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಸಮಿತ್ ದ್ರಾವಿಡ್ ಸದ್ಯ ಬೆಂಗಳಳೂರಿನಲ್ಲಿರುವ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯಲ್ಲಿ (ಎನ್ಸಿಎ) ಇದ್ದಾರೆ. ಪುದುಚೇರಿಯಲ್ಲಿ ಭಾರತ ಅಂಡರ್-19 ತಂಡದ ಪರ ಸಮಿತ್ ದ್ರಾವಿಡ್ ಅವರು ಪಾದರ್ಪಣೆ ಮಾಡುವ ಕನಸು ಕಂಡಿದ್ದರು. ಆದರೆ ಅವರು ಮೂರು ಏಕದಿನ ಪಂದ್ಯಗಳನ್ನು ಆಡಲು ಸಾಧ್ಯವಾಗಲಿಲ್ಲ. ಸಮಿತ್ ಅನುಪಸ್ಥಿತಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 3-0 ಅಂತರದಲ್ಲಿ ಸರಣಿ ಗೆದ್ದಿತ್ತು.
ಸಮಿತ್ ದ್ರಾವಿಡ್ ಅವರ ಬಗ್ಗೆ ಭಾರತ ಅಂಡರ್-19 ತಂಡದ ಹೆಡ್ ಕೋಚ್ ಹೃಷಿಕೇಶ್ ಕಾನಿಟ್ಕರ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.' ಸಮಿತ್ ಪ್ರಸ್ತುತ ಎನ್ಸಿಎಯಲ್ಲಿದ್ದು, ಮೊಣಕಾಲಿನ ಗಾಯದಿಂದ ಚೇತರಿಸಿಕೊಳ್ಳುತ್ತಿದ್ದಾರೆ. ಈಗಲೇ ಏನನ್ನೂ ಹೇಳಲಾರೆ. ಆದರೆ ಅವನು ಸದ್ಯಕ್ಕೆ ಆಡುವುದು ಕಷ್ಟಕರವಾಗಿದೆ ಎಂದು ತಿಳಿಸಿದ್ದಾರೆ.
ಬಲಗೈ ಬ್ಯಾಟರ್ ಆಗಿರುವ ಸಮಿತ್ ದ್ರಾವಿಡ್ ಮಧ್ಯಮ ವೇಗದ ಬೌಲಿಂಗ್ ಕೂಡ ಬಲ್ಲರು. ಮಹಾರಾಜ ಟ್ರೋಫಿಯಲ್ಲಿ ಅಪ್ಪನಂತೆ ಕ್ಲಾಸಿಕ್ ಆಗಿ ಬ್ಯಾಟ್ ಬೀಸಿದ ಅವರು ಸೈ ಎನಿಸಿಕೊಂಡಿದ್ದರು. ಈಗ ಭಾರತ ಅಂಡರ್-19 ತಂಡಕ್ಕೆ ಆಯ್ಕೆಯಾದರು ಗಾಯದ ಕಾರಂ ಆಸ್ಟ್ರೇಲಿಯಾ ವಿರುದ್ಧ ಏಕದಿನ ಮತ್ತು ಟೆಸ್ಟ್ ಸರಣಿಗಳಿಂದ ಹೊರಗುಳಿದಿರುವ ಸಮಿತ್ ದ್ರಾವಿಡ್ ಅಂಡರ್-19 ವಿಶ್ವಕಪ್ ಆಡುತ್ತಾರಾ ಎಂಬ ಚರ್ಚೆಗಳು ಶುರುವಾಗಿವೆ.
ಸಮಿತ್ ದ್ರಾವಿಡ್ ನವೆಂಬರ್ 10, 2005 ರಂದು ಜನಿಸಿದ್ದು, ಕೇವಲ ಒಂದು ತಿಂಗಳಲ್ಲಿ ತಮ್ಮ 19ನೇ ವರ್ಷದ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳಲಿದ್ದಾರೆ. ಮುಂದಿನ ಅಂಡರ್-19 ವಿಶ್ವಕಪ್ 2026ರಲ್ಲಿ ಜಿಂಬಾಬ್ವೆ ಮತ್ತು ನಮೀಬಿಯಾ ದೇಶಗಳಲ್ಲಿ ನಡೆಯಲಿದೆ. 2026ರ ಅಂಡರ್-19 ವಿಶ್ವಕಪ್ ವೇಳೆಗೆ ಅವರಿಗೆ 20 ವರ್ಷಕ್ಕೂ ಹೆಚ್ಚು ವಯಸ್ಸಾಗಲಿದೆ. ಈ ಕಾರಣದಿಂದ ಸಮಿತ್ ದ್ರಾವಿಡ್ 2026ರ ಅಂಡರ್-19 ವಿಶ್ವಕಪ್ನಲ್ಲಿ ಆಡುವುದಕ್ಕೆ ಅವಕಾಶವಿಲ್ಲ.