ಅಕ್ಟೋಬರ್ 5ರಿಂದ ನವೆಂಬರ್ 19ರವರೆಗೆ ಭಾರತದಲ್ಲೇ ನಡೆಯಲಿರುವ 2023ರ ಐಸಿಸಿ ಏಕದಿನ ವಿಶ್ವಕಪ್ ಪಂದ್ಯಾವಳಿಗೆ ಎಲ್ಲಾ ಹತ್ತು ತಂಡಗಳು ಈಗಾಗಲೇ ತಯಾರಿ ಆರಂಭಿಸಿದ್ದು, ತಂಡದ ಸಂಯೋಜನೆಯಲ್ಲಿ ತೊಡಗಿವೆ.
ತವರಿನಲ್ಲಿಯೇ ನಡೆಯುವ ಐಸಿಸಿ ಪಂದ್ಯಾವಳಿಯನ್ನು ಗೆದ್ದು ದಶಕದ ಟ್ರೋಫಿ ಬರವನ್ನು ನೀಗಿಸಿಕೊಳ್ಳಲು ಭಾರತ ತಂಡ ಎದುರು ನೋಡುತ್ತಿದೆ. 2011ರಲ್ಲಿ ಭಾರತದಲ್ಲಿಯೇ ನಡೆದಿದ್ದ ಏಕದಿನ ವಿಶ್ವಕಪ್ ಅನ್ನು ಕೊನೆಯ ಬಾರಿಗೆ ಗೆದ್ದಿತ್ತು.
ಇದೇ ವೇಳೆ ಭಾರತ ತಂಡದ ಮಾಜಿ ಬ್ಯಾಟಿಂಗ್ ಕೋಚ್ ಸಂಜಯ್ ಬಂಗಾರ್ ಅವರು 2023ರ ವಿಶ್ವಕಪ್ಗಾಗಿ ತಮ್ಮ ಆದ್ಯತೆಯ 15 ಸದಸ್ಯರ ಭಾರತ ತಂಡವನ್ನು ಆಯ್ಕೆ ಮಾಡಿದ್ದಾರೆ.

ಇದರಲ್ಲಿ ಆಲ್ರೌಂಡರ್ ಶಾರ್ದೂಲ್ ಠಾಕೂರ್ ಅವರ ಬದಲಾಗಿ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ರನ್ನು ತಮ್ಮ ತಂಡದಲ್ಲಿ ಆಯ್ಕೆ ಮಾಡುವ ಮೂಲಕ ಸಂಜಯ್ ಬಂಗಾರ್ ದೊಡ್ಡ ಆಶ್ಚರ್ಯ ಮೂಡಿಸಿದ್ದಾರೆ.
2023ರ ವಿಶ್ವಕಪ್ ಪಂದ್ಯಾವಳಿಗೆ ಮುಂಚಿತವಾಗಿ, ಭಾರತ ತಂಡವು ಏಷ್ಯಾ ಕಪ್ ಪಂದ್ಯಾವಳಿಲ್ಲಿ ಕಾಣಿಸಿಕೊಳ್ಳಲಿದ್ದು, ಬಳಿಕ ಆಸ್ಟ್ರೇಲಿಯಾ ವಿರುದ್ಧ ಮೂರು ಪಂದ್ಯಗಳ ಏಕದಿನ ತವರಿನ ಸರಣಿಯನ್ನು ಆಡಲಿದೆ. ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಹೇಳಿದಂತೆ, ಏಷ್ಯಾ ಕಪ್ಗೆ ಆಯ್ಕೆಯಾದ ತಂಡವೇ ವಿಶ್ವಕಪ್ ತಂಡವನ್ನು ಹೋಲುತ್ತದೆ.
ಇನ್ನು ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿದ ಸಂಜಯ್ ಬಂಗಾರ್ ಅವರು ಏಕದಿನ ವಿಶ್ವಕಪ್ಗಾಗಿ ತಮ್ಮ 15 ಸದಸ್ಯರ ತಂಡವನ್ನು ಹೆಸರಿಸಿದ್ದಾರೆ. ಐವರು ಸ್ಪೆಷಲಿಸ್ಟ್ ಬ್ಯಾಟರ್ಗಳು, ಇಬ್ಬರು ವಿಕೆಟ್ಕೀಪರ್-ಬ್ಯಾಟರ್ಗಳು, ಇಬ್ಬರು ಸ್ಪಿನ್-ಬೌಲಿಂಗ್ ಆಲ್ರೌಂಡರ್ಗಳು, ಒಬ್ಬ ವೇಗದ ಬೌಲಿಂಗ್ ಆಲ್ರೌಂಡರ್, ಒಬ್ಬ ಸ್ಪೆಷಲಿಸ್ಟ್ ಸ್ಪಿನ್ನರ್ ಮತ್ತು ನಾಲ್ವರು ವೇಗದ ಬೌಲರ್ಗಳೊಂದಿಗೆ ಐಸಿಸಿ ಪಂದ್ಯಾವಳಿಗಾಗಿ ಸಂಯೋಜನೆ ಇದಾಗಿದೆ ಎಂದು ವಿವರಿಸಿದ್ದಾರೆ.

ಪ್ರತಿ ವಿಭಾಗದಲ್ಲಿ ತನ್ನ ಆಯ್ಕೆಗಳನ್ನು ತಿಳಿಸಿದ 50 ವರ್ಷದ ಸಂಜಯ್ ಬಂಗಾರ್, "ನನ್ನ ಸ್ಪೆಷಲಿಸ್ಟ್ ಬ್ಯಾಟರ್ಗಳಲ್ಲಿ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್ ಇರಲಿದ್ದಾರೆ".
"ವಿಕೆಟ್ ಕೀಪರ್-ಬ್ಯಾಟರ್ಗಳಲ್ಲಿ ಇಶಾನ್ ಕಿಶನ್ ಮತ್ತು ಕೆಎಲ್ ರಾಹುಲ್. ಸ್ಪಿನ್ ಬೌಲಿಂಗ್ ಆಲ್ರೌಂಡರ್ಗಳಾಗಿ ನಾನು ಎಡಗೈ ಆಟಗಾರರಾದ ಅಕ್ಷರ್ ಪಟೇಲ್, ರವೀಂದ್ರ ಜಡೇಜಾ ಇಬ್ಬರಿಗೂ ಆದ್ಯತೆ ನೀಡುತ್ತೇನೆ," ಎಂದರು.
"ಏಕೈಕ ವೇಗದ ಬೌಲಿಂಗ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಆಗಿದ್ದರೆ, ಸ್ಪೆಷಲಿಸ್ಟ್ ಸ್ಪಿನ್ನರ್ ಕುಲದೀಪ್ ಯಾದವ್ ಆಗಿರುತ್ತಾರೆ. ಇನ್ನು ನಾಲ್ವರು ವೇಗದ ಬೌಲರ್ಗಳೆಂದರೆ ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್," ಎಂದು ಸಂಜಯ್ ಬಂಗಾರ್ ಮಾತು ಮುಗಿಸಿದರು.
ಏಕದಿನ ವಿಶ್ವಕಪ್ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮಾಜಿ ಕೋಚ್ 15 ಸದಸ್ಯರ ತಂಡದಲ್ಲಿ ಕನ್ನಡಿಗ ಪ್ರಸಿದ್ಧ್ ಕೃಷ್ಣಗೆ ಸ್ಥಾನ ನೀಡಿಲ್ಲ. ಗಮನಾರ್ಹವಾಗಿ, ಆಗಸ್ಟ್ 30ರಿಂದ ಸೆಪ್ಟೆಂಬರ್ 17ರವರೆಗೆ ನಡೆಯಲಿರುವ ಏಷ್ಯಾ ಕಪ್ಗಾಗಿ ಭಾರತ ತಂಡದಲ್ಲಿ ಪ್ರಸಿದ್ಧ್ ಕೃಷ್ಣ ಸ್ಥಾನ ಪಡೆದಿದ್ದರೆ, ಅರ್ಶ್ದೀಪ್ ಸಿಂಗ್ರನ್ನು ಪರಿಗಣಿಸಿಲ್ಲ.
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್ (ವಿಕೆಟ್ ಕೀಪರ್), ಕೆಎಲ್ ರಾಹುಲ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಮೊಹಮ್ಮದ್ ಶಮಿ, ಅರ್ಶ್ದೀಪ್ ಸಿಂಗ್.
ಸಂಜಯ್ ಬಂಗಾರ್ ಅವರು ವಿಶ್ವಕಪ್ಗಾಗಿ ತಮ್ಮ ಆಯ್ಕೆಯ 15ರ ಬಳಗದಲ್ಲಿ ಎಡಗೈ ವೇಗಿ ಅರ್ಶ್ದೀಪ್ ಸಿಂಗ್ ಅವರನ್ನು ಹೆಸರಿಸಿರುವುದು ಆಶ್ಚರ್ಯಕರವಾಗಿದೆ. ಈ ಯುವ ವೇಗಿ ಏಕದಿನ ಪಂದ್ಯಗಳಲ್ಲಿ ಹೆಚ್ಚಿನ ಅನುಭವ ಹೊಂದಿಲ್ಲ. 24 ವರ್ಷದ ಅರ್ಶ್ದೀಪ್ ಇದುವರೆಗೆ ಕೇವಲ ಮೂರು ಏಕದಿನ ಪಂದ್ಯಗಳನ್ನು ಆಡಿದ್ದಾರೆ ಮತ್ತು ಇನ್ನೂ ಒಂದು ವಿಕೆಟ್ ಪಡೆದಿಲ್ಲ.
ಆದರೆ, ಅರ್ಶ್ದೀಪ್ ಸಿಂಗ್ ಟಿ20 ಪಂದ್ಯಗಳಲ್ಲಿ ಪ್ರಭಾವಿ ದಾಖಲೆಯನ್ನು ಹೊಂದಿದ್ದಾರೆ. ಆಡಿದ 33 ಪಂದ್ಯಗಳಲ್ಲಿ 18.98ರ ಸರಾಸರಿ ಮತ್ತು 8.48ರ ಎಕಾನಮಿ ದರದಲ್ಲಿ 50 ವಿಕೆಟ್ಗಳನ್ನು ಕಬಳಿಸಿದ್ದಾರೆ.