ಬೂಮ್ರಾ vs ಆಂಡರ್ಸನ್ ಪ್ರಕರಣ: ಅದು ಕೊಹ್ಲಿಯ ಯೋಜನೆ ಎಂದ ಮಂಜ್ರೇಕರ್

ಲಂಡನ್, ಆಗಸ್ಟ್ 20: ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಿಯ ಎರಡನೇ ಪಂದ್ಯ ಸಾಕಷ್ಟು ರೋಚಕ ಕ್ಷಣಗಳಿಗೆ ಸಾಕ್ಷಿಯಾಗಿತ್ತು. ಎರಡು ತಂಡಗಳ ನಡುವಿನ ಜಿದ್ದಾಜಿದ್ದಿನ ಹೋರಾಟ ಅಭಿಮಾನಿಗಳಿಗೆ ಸಾಕಷ್ಟು ಮನರಂಜನೆಯನ್ನು ನೀಡಿತ್ತು. ಇದರ ಜೊತೆಗೆ ಇಂಗ್ಲೆಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದ ಸಂದರ್ಭದಲ್ಲಿ ಜೇಮ್ಸ್ ಆಂಡರ್ಸನ್ ಹಾಗೂ ಭಾರತದ ವೇಗಿ ಜಸ್ಪ್ರೀತ್ ಬೂಮ್ರಾ ಮಧ್ಯೆ ನಡೆದ ಕದನ ಕೂಡ ಸಾಕಷ್ಟು ಕುತೂಹಲವನ್ನು ಮೂಡಿಸಿತ್ತು. ಇಂಗ್ಲೆಂಡ್ ಅನುಭವಿ ವೇಗಿ ಆಂಡರ್ಸನ್ ಬ್ಯಾಟಿಂಗ್ ನಡುಸುತ್ತಿದ್ದಾಗ ಬೌನ್ಸರ್ ಮೇಲೆ ಬೌನ್ಸರ್ ದಾಳಿ ಮಾಡಿದ ಬೂಮ್ರಾ ವಿರುದ್ಧ ಆಂಡರ್ಸನ್ ಹರಿಹಾಯ್ದ ಘಟನೆ ಬಳಿಕ ಪಂದ್ಯದ ಅಂತಿಮ ದಿನವೂ ಪರಿಣಾಮವನ್ನು ಬೀರಿತ್ತು ಎಂಬುದು ಗಮನಾರ್ಹ.
ಆದರೆ ಜಸ್ಪ್ರೀತ್ ಬೂಮ್ರಾ ಜೇಮ್ಸ್ ಆಂಡರ್ಸನ್ ವಿರುದ್ಧ ಬೌನ್ಸರ್ ಮೇಲೆ ಬೌನ್ಸರ್ ದಾಳಿ ಮಾಡುವ ಯೋಜನೆ ಸ್ವತಃ ಜಸ್ಪ್ರೀತ್ ಬೂಮ್ರಾದ್ದು ಆಗಿರಲಿ ಸಾಧ್ಯವಿಲ್ಲ ಎಂದಿದ್ದಾರೆ ಮಾಜಿ ಕ್ರಿಕೆಟಿಗ ಹಾಗೂ ಹಾಲಿ ಕಾಮೆಂಟೇಟರ್ ಸಂಜಯ್ ಮಂಜ್ರೇಕರ್. ಮಂಜ್ರೇಕರ್ ಪ್ರಕಾರ ಇದು ವಿರಾಟ್ ಕೊಹ್ಲಿಯ ಯೋಜನೆಯಾಗಿದ್ದು ಆಂಡರ್ಸನ್ರನ್ನು ಒಂದೋ ಸುಮ್ಮನಾಗಿಸುವುದು ಅಥವಾ ಗಾಯಗೊಳಿಸುವುದು ಅವ ಉದ್ದೇಶವಾಗಿತ್ತು ಎಂದು ಮಂಜ್ರೇಕರ್ ತಮ್ಮ ತೀರ್ಪು ನೀಡಿಬಿಟ್ಟಿದ್ದಾರೆ.
ಜಸ್ಪ್ರೀತ್ ಬೂಮ್ರಾ ಎಸೆದ ಒಂದು ಓವರ್ನಲ್ಲಿ ಜೇಮ್ಸ್ ಆಂಡರ್ಸನ್ ಬರೊಬ್ಬರಿ ಹತ್ತು ಎಸೆತಗಳನ್ನು ಎದುರಿಸಿದ್ದರು. ಇದರಲ್ಲಿ ನಾಲ್ಕು ಎಸೆತಗಳು ನೋ ಬಾರಿ ಆಗಿತ್ತು. ಇದರಲ್ಲಿ ನಾಲ್ಕು ಎಸೆತಗಳು ಯಾರ್ಕರ್ಗಳಾಗಿದ್ದರೆ ಆರು ಶಾರ್ಟ್ ಬಾಲ್ಗಳಾಗಿದ್ದವು. ಈ ಸಂದರ್ಭದಲ್ಲಿ ಬೂಮ್ರಾ ಬಳಿ ಜೇಮ್ಸ್ ಆಂಡರ್ಸನ್ ತಮ್ಮ ಅಸಮಾಧಾನವನ್ನು ಕಟುವಾಗಿ ವ್ಯಕ್ತಪಡಿಸಿದ್ದರು. ಈ ಘಟನೆ ಅಂತಿಮ ದಿನದಾಟದಲ್ಲಿ ಟೀಮ್ ಇಂಡಿಯಾ ಪ್ರವಾಸಿಗರ ವಿರುದ್ಧ ಒಗ್ಗಟ್ಟಾಗಿ ಮುಗಿಬೀಳಲು ಕಾರಣವಾಗಿತ್ತು. ಇದರಲ್ಲಿ ಮೇಲುಗೈ ಸಾಧಿಸಿದ ಭಾರತ 151 ರನ್ಗಳ ಅಂತರದಿಂದ ಪಂದ್ಯವನ್ನು ಗೆದ್ದು ಬೀಗಿದೆ.
ಈ ಘಟನೆಯ ಬಗ್ಗೆ ಸಂಜಯ್ ಮಂಜ್ರೇಕರ್ ಹಿಂದೂಸ್ತಾನ್ ಟೈಮ್ಸ್ಗೆ ಬರೆದಿರುವ ಅಂಕಣದಲ್ಲಿ ಪ್ರತಿಕ್ರಿಯಿಸಿದ್ದಾರೆ. "ಇಂಗ್ಲೆಂಡ್ ತಂಡದ ಇನ್ನಿಂಗ್ಸ್ನ ಅಂತ್ಯದ ವೇಳೆಗೆ ಬೂಮ್ರಾ 11ನೇ ಕ್ರಮಾಂಕದ ಆಟಗಾರ ಜೇಮ್ಸ್ ಆಂಡರ್ಸನ್ ಅವರ ದೇಹಕ್ಕೆ ಗುರಿಯಾಗಿಸಿ ಶಾರ್ಟ್ ಬಾಲ್ಗಳನ್ನು ಎಸೆಯಲು ಆರಂಭಿಸಿದ್ದರು. ಆದರೆ ಇದು ಬೂಮ್ರಾ ಅವರ ಶೈಲಿಯ ದಾಳಿಯಾಗಿರಲಿಲ್ಲ. ಸಾಮಾನ್ಯವಾಗಿ ಆತ ಆಂಡರ್ಸನ್ಗೆ ವೇಗದ ಎಸೆತಗಳನ್ನು ಎಸೆಯುತ್ತಾರೆ ಎಂದು ನಿರೀಕ್ಷಿಸುತ್ತೇವೆ. ಆದರೆ ಈ ಯೋಜನೆ ಬಹುಶಃ ನಾಯಕ ವಿರಾಟ್ ಕೊಹ್ಲಿಯದ್ದಾಗಿರಬಹುದು ಎಂದು ನಾನು ಊಹಿಸುತ್ತೇನೆ. ಆಂಡರ್ಸನ್ ಎದುರಾಳಿ ತಂಡದ ಮುಖ್ಯ ಆಟಗಾರನಾಗಿರುವ ಕಾರಣದಿಂದಾಗಿ ಆತನನ್ನು ಸ್ವಲ್ಪ ಮೆತ್ತಗಾಗಿಸಲು ಅಥವಾ ಹಿಮ್ಮೆಟ್ಟಿಸಲು ಅಥವಾ ಗಾಯಗೊಳಿಸುವ ಮೂಲಕ ಇಂಗ್ಲೆಂಡ್ ತಂಡಕ್ಕೆ ಹಿನ್ನಡೆಯುಂಟು ಮಾಡುವ ಯೋಜನೆ ಆತನದ್ದಾಗಿರಬಹುದು" ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ವಿರಾಟ್ ಬಗ್ಗೆ ಮಂಜ್ರೇಕರ್ ಪ್ರಶಂಸೆಯ ಮಾತು
ಆದರೆ ವಿರಾಟ್ ಕೊಹ್ಲಿ ತಂಡದ ಆಟಗಾರನಿಗೆ ನೀಡಿದ ಬೆಂಬಲದ ಬಗ್ಗೆ ಸಂಜಯ್ ಮಂಜ್ರೇಕರ್ ಮೆಚ್ಚುಗೆಯನ್ನು ವ್ಯಕ್ತಡಿಸಿದ್ದಾರೆ. "ಕಾರಣ ಏನೇ ಇರಲಿ ನಾನು ಅದನ್ನು ಇಷ್ಟಪಟ್ಟಿದ್ದೇನೆ. ಯಾಕೆಂದರೆ ನನ್ನ ವೃತ್ತಿ ಜೀವನದ ಸಂದರ್ಭದಲ್ಲಿ ಯಾವ ನಾಯಕ ಕೂಡ ಎದುರಾಳಿ ಬೌಲರ್ಗಳು ಪ್ರತಿ ದಾಳಿ ನಡೆಸಬಹುದು ಎಂದು ಹೆದರಿ ಈ ರೀತಿ ಮಾಡಿರಲಿಲ್ಲ. ಅದುವೇ ವಿರಾಟ್ ಕೊಹ್ಲಿಯ ಶ್ರೇಷ್ಠ ವ್ಯಕ್ತಿತ್ವ. ಆತ ನಿಜವಾಗಿಯೂ ಆಕ್ರಮಣಕಾರಿ ಮತ್ತು ನಿರ್ಭೀತ ನಾಯಕ. ಏನಿದ್ದರೂ ಆತ ತನ್ನ ಭಾವನೆಯ ಮೂಲಕ ವ್ಯಕ್ತಪಡಿಸುವ ಆಟಗಾರ. ಅಂತಿಮವಾಗಿ 3ನೇ ದಿನದಾಟದ ಅಂತ್ಯದಲ್ಲಿ ಇದು ಜೇಮ್ಸ್ ಆಂಡರ್ಸನ್ ಮೇಲೆ ಪರಿಣಾಮ ಬೀರಿತ್ತು. ಪ್ರತಿಸ್ಪರ್ಧುಯಾಗಿ ಆತ ತನ್ನ ತಾಳ್ಮೆಯನ್ನು ಕಳೆದುಕೊಂಡಿದ್ದ. ಅದು ಆತನ ಅಹಂಗೂ ಘಾಸಿ ಮಾಡಿದ್ದು ನನಗೆ ಕಾಣಿಸಿತ್ತು" ಎಂದು ಸಂಜಯ್ ಮಂಜ್ರೇಕರ್ ಹೇಳಿದ್ದಾರೆ.

ಆರಂಭಿಕರ ಪ್ರದರ್ಶನಕ್ಕೆ ಮಂಜ್ರೇಕರ್ ಮೆಚ್ಚುಗೆ
ಇನ್ನು ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಈ ಸರಣಿಯಲ್ಲಿ ಟೀಮ್ ಇಂಡಿಯಾದ ಆರಂಬಿಕ ಆಟಗಾರರಾಗಿ ಕಣಕ್ಕಿಳಿಯುತ್ತಿರುವ ರೋಹಿತ್ ಶರ್ಮಾ ಹಾಗೂ ಕೆಎಲ್ ರಾಹುಲ್ ಪ್ರದರ್ಶನಕ್ಕೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಟೀಮ್ ಇಂಡಿಯಾಗೆ ಈ ಜೋಡಿ ನೀಡುತ್ತಿರುವ ಪ್ರದರ್ಶನ ಅನಿರೀಕ್ಷಿತ ಬೋನಸ್ ಎಂದು ಬಣ್ಣಿಸಿದ್ದಾರೆ. ಎರಡು ತಂಡಗಳ ನಡುವಿನ ವ್ಯತ್ಯಾಸಕ್ಕೂ ಕೂಡ ಈ ಆರಂಭಿಕ ಜೋಡಿಯೇ ಕಾರಣ ಎಂದು ಮಂಜ್ರೇಕರ್ ಹೇಳಿದ್ದಾರೆ.

ಮಂಜ್ರೇಕರ್ ಬಾಯಿ ಮುಚ್ಚಿಸಿದ ರಾಹುಲ್
ಇನ್ನು ಟೀಮ್ ಇಂಡಿಯಾ ಆರಂಭಿಕನಾಗಿ ಈ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿ ಮಿಂಚುತ್ತಿರುವ ಕೆಎಲ್ ರಾಹುಲ್ ಬಗ್ಗೆ ಸಂಜಯ್ ಮಂಜ್ರೇಕರ್ ಸಾಕಷ್ಟು ನಕಾರಾತ್ಮ ಮಾತುಗಳನ್ನು ಆಡುವ ಮೂಲಕ ಟೀಕಿಸಿದ್ದರು. ಮೊದಲ ಪಂದ್ಯದಲ್ಲಿ ಕೆಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿದ ಬಳಿಕವೂ ಕೆಎಲ್ ರಾಹುಲ್ ಟೆಸ್ಟ್ ಕ್ರಿಕೆಟ್ಗೆ ಸೂಕ್ತವಾದ ಆಟಗಾರನಲ್ಲ. ಆತ ಈ ಹಿಮದಿನ ಸರಣಿಯಲ್ಲಿ ಉತ್ತಮ ಆಟವನ್ನು ಪ್ರದರ್ಶಿಸಿಲ್ಲ. ಹೀಗಾಗಿ ಆತನ ಬದಲಿಗೆ ಬೇರೆ ಯಾರಾದರೂ ಆಟಗಾರನಿಗೆ ಅವಕಾಶ ನೀಡುವುದು ಸೂಕ್ತ ಎಂದು ಹೇಳಿಕೆಯನ್ನು ನೀಡಿದ್ದರು. ಸಂಜಯ್ ಮಂಜ್ರೇಕರ್ ಅವರ ಈ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಟೀಕೆಗಳು ವ್ಯಕ್ತವಾಗಿತ್ತು. ಆದರೆ ಕೆಎಲ್ ರಾಹುಲ್ ಈ ಎಲ್ಲಾ ಮಾತುಗಳಿಗೂ ತಮ್ಮ ಬ್ಯಾಟ್ ಮೂಲಕವೇ ಉತ್ತರವನ್ನು ನೀಡಿದ್ದಾರೆ. ಲಾರ್ಡ್ಸ್ ಟೆಸ್ಟ್ನಲ್ಲಿ ಕನ್ನಡಿಗ ಆಟಗಾರ ಭರ್ಜರಿ ಶತಕವನ್ನು ಸಿಡಿಸಿ ತಂಡದ ಮೇಲುಗೈಗೆ ಕಾರಣವಾದರು. ಈ ಮೂಲಕ ಪಂದ್ಯದ ಗೆಲುವಿನಲ್ಲಿ ಮಹತ್ವದ ಪಾತ್ರವಹಿಸಿದ್ದಾರೆ ಕೆ ಎಲ್ ರಾಹುಲ್. ಈ ಕಾರಣದಿಂದಾಗಿಯೇ ಲಾರ್ಡ್ಸ್ ಅಂಗಳದಲ್ಲಿ ನಡೆದ ಸರಣಿಯ ಎರಡನೇ ಪಂದ್ಯದಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಕೂಡ ಪಡೆದುಕೊಂಡಿದ್ದಾರೆ.

ಮೂರನೇ ಪಂದ್ಯಕ್ಕೆ ಸಜ್ಜು
ಸರಣಿಯಲ್ಲಿ ಎರಡು ಪಂದ್ಯಗಳು ಈಗಾಗಲೇ ಅಂತ್ಯವಾಗಿದ್ದು ಭಾರತ 1-0 ಅಂತರದಿಂದ ಸರಣಿಯಲ್ಲಿ ಮುನ್ನಡೆ ಸಾಧಿಸಿದೆ. ಈಗ ಮೂರನೇ ಪಂದ್ಯದ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಲೀಡ್ಸ್ನ ಹೆಡಿಂಗ್ಲೇಯಲ್ಲಿ ನಡೆಯಲಿರುವ ಮೂರನೇ ಪಂದ್ಯ ಆಗಸ್ಟ್ 25ರಿಂದ ಆರಂಭವಾಗಲಿದೆ. ಈ ಪಂದ್ಯವನ್ನು ಕೂಡ ಗೆದ್ದು ಸರಣಿಯಲ್ಲಿ ಮತ್ತಷ್ಟಯು ಬಿಗಿಹಿಡಿತ ಸಾಧಿಸಲು ಭಾರತ ತಂಡ ಪ್ರಯತ್ನ ಪಟ್ಟರೆ ಆತಿಥೇಯ ಇಂಗ್ಲೆಂಡ್ ಮುಂದೆ ಸರಣಿಯನ್ನು ಸಮಬಲಗೊಳಿಸಬೇಕಾದ ಅನಿವಾರ್ಯತೆಯಿದೆ. ಹೀಗಾಗಿ ಈ ಪಂದ್ಯದ ಮೇಲೆ ಅಭಿಮಾನಿಗಳ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications