ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಟೀಮ್ ಇಂಡಿಯಾದ ಆಲ್ರೌಮಡರ್ಗಳಾದ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಬಗ್ಗೆ ಮಾತನಾಡಿದ್ದಾರೆ. ಟೀಮ್ ಇಂಡಿಯಾದ ಪ್ರಮುಖ ಭಾಗವಾಗಿರುವ ಈ ಇಬ್ಬರು ಆಟಗಾರರನ್ನು ಮಂಜ್ರೇಕರ್ ಮುಕ್ತಕಂಠದಿಂದ ಹೊಗಳಿದರೂ ಭಾರತದ ಆ ಒಬ್ಬ ಆಟಗಾರನಿಗೆ ಇವರಿಬ್ಬರೂ ಸಮವಲ್ಲ ಎಂದು ನೇರವಾಗಿಯೇ ಹೇಳಿದ್ದಾರೆ.
ಸೂಪರ್ 4 ಹಂತದಲ್ಲಿ ಭಾರತ ಹಾಗೂ ಪಾಕಿಸ್ತಾನ ತಂಡಗಳು ಮೂಖಾಮುಖಿಯಾದ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಹಾಗೂ ವಾಕರ್ ಯೂನಿಸ್ ಸಂವಾದಲ್ಲಿ ಭಾಗಿಯಾಗಿದ್ದರು. ಈ ಸಂದರ್ಭದಲ್ಲಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ವಾಕರ್ ಯೂನಿಸ್ ಅವರ ಅನಿಸಿಕೆಗೆ ಸಂಜಯ್ ಮಂಜ್ರೇಕರ್ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯ ಮಳೆಯಿಂದಾಗಿ ಮುಂದೂಡಿಕೆಯಾದ ಸಂದರ್ಭದಲ್ಲಿ ಮಾತನಾಡುತ್ತಿದ್ದ ವಾಕರ್ ಯೂನಿಸ್ "ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರಿಂದಾಗಿ ತಂಡದ ಶಕ್ತಿಯನ್ನೊಮ್ಮೆ ನೋಡಿ. ಅವರಿಬ್ಬರು ಕೂಡ ಬ್ಯಾಟಿಂಗ್ ಹಾಗೂ ಬೌಲಿಂಗ್ನಲ್ಲಿ ಅದ್ಭುತವಾದ ಅಸ್ತ್ರಗಳನ್ನು ಹೊಂದಿದ್ದಾರೆ. ವಿಶೇಷವಾಗಿ ಹಾರ್ದಿಕ್ ಪಾಂಡ್ಯ. ಆತ ಪಾಕಿಸ್ತಾನದ ವಿರುದ್ಧ ನಡೆಸಿದ ಬ್ಯಾಟಿಂಗ್, ನಿಜಕ್ಕೂ ಆತ ಆರನೇ ಕ್ರಮಾಂಕದಲ್ಲಿ ವಿಧ್ವಂಸಕ ಬ್ಯಾಟರ್. ಯಾವುದೇ ತಂಡವಾದರೂ ಆತನಂಥಾ ಆಟಗಾರನನ್ನು ಹೊಂದುವುದಕ್ಕೆ ಇಷ್ಟ ಪಡುತ್ತದೆ. ಆತ ಬಹಳ ಆಕ್ರಮಣಕಾರಿ ಆಟಗಾರ. ಕಳೆದ ಪಂದ್ಯದಲ್ಲಿ ಆತ ಸೂಕ್ಷ್ಮ ಹಾಗೂ ಚಾಣಾಕ್ಷ ಕ್ರಿಕೆಟಿಗ ಎನ್ನುವುದನ್ನು ಕೂಡ ನೋಡಿದ್ದೇವೆ" ಎಂದಿದ್ದಾರೆ ವಾಕರ್ ಯೂನಿಸ್.
ಈ ಸಂದರ್ಭದಲ್ಲಿ ಭಾರತದ ಮಾಜಿ ಕ್ರಿಕೆಟಿಗ ಸಂಜಯ್ ಮಂಜ್ರೇಕರ್ ಭಾರತದ ಮಾಜಿ ಆಲ್ರೌಂಡರ್ ಯುವರಾಜ್ ಸಿಂಗ್ ಇವರಿಬ್ಬರಿಗಿಂತಲೂ ಶ್ರೇಷ್ಠ ಆಲ್ರೌಂಡರ್ ಎಂದಿದ್ದು ಆತ ಇನ್ನೊಂದು ಮಟ್ಟದ ಆಟಗಾರ ಎಂದಿದ್ದಾರೆ. "ಯುವರಾಜ್ ಸಿಂಗ್ ನಿಸ್ಸಂಶಯವಾಗಿ ಭಾರತ ಕಂಡ ಅತ್ಯುತ್ತಮ ವೈಟ್ಬಾಲ್ ಆಟಗಾರ. ಆತ ಪಂದ್ಯಗಳನ್ನು ಗೆಲ್ಲಿಸುತ್ತಿದ್ದ ಹಾಗೂ ಇವರಿಗಿಂತ ಸಂಪೂರ್ಣವಾಗಿ ಭಿನ್ನವಾಗಿದ್ದರು. ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಇಬ್ಬರಿಗೂ ಗೌರವ ನೀಡುತ್ತಲೇ ಅವರಿಬ್ಬರೂ ಯುವರಾಜ್ ಮಟ್ಟಕ್ಕೆ ಏರಿಲ್ಲ. ಇಬರಿಬ್ಬರು ಕೂಡ ಯುವರಾಜ್ಗಿಂತ ಅದ್ಭುತವಾದ ಬೌಲರ್ಗಳು" ಎಂದಿದ್ದಾರೆ ಮಂಜ್ರೇಕರ್.
ಟೀಮ್ ಇಂಡಿಯಾ ಈ ಬಾರಿಯ ಏಷ್ಯಾಕಪ್ನಲ್ಲಿ ಮೊದಲ ಬಾರಿಗೆ ಮುಖಾಮುಖಿಯಾಗಿದ್ದಾಗ ಭಾರತದ ಅಗ್ರ ಕ್ರಮಾಂಕದ ನಾಲ್ವರು ಆಟಗಾರರು ಅಲ್ಪ ಮೊತ್ತಕ್ಕೆ ವಿಕೆಟ್ ಕಳೆದುಕೊಂಡಿದ್ದಾಗ ಟೀಮ್ ಇಂಡಿಯಾಗೆ ಆಸರೆಯಾಗಿದ್ದು ಹಾರ್ದಿಕ್ ಪಾಂಡ್ಯ ಹಾಗೂ ಇಶಾನ್ ಕಿಶನ್. ಈ ಜೋಡಿ ಭಾರತ ತಂಡವನ್ನು ಭಾರೀ ಸಂಕಷ್ಟದಿಂದ ಮೇಲಕ್ಕೆತ್ತಿ ಗೌರವಯುತ ಮೊತ್ತವನ್ನು ಗಳಿಸಲು ಕಾರಣವಾಗಿದ್ದರು. ಈ ಪಂದ್ಯದಲ್ಲಿ 90 ಎಸೆತಗಳನ್ನು ಎದುರಿಸಿದ ಹಾರ್ದಿಕ್ ಪಾಂಡ್ಯ 87 ರನ್ಗಳನ್ನು ಗಳಿಸಿದ್ದರೆ ಇಶಾನ್ ಕಿಶನ್ 82 ರನ್ಗಳನ್ನು ಗಳಿಸಿದ್ದರು.
ಇನ್ನು ಭಾರತ ಹಾಗೂ ಪಾಕಿಸ್ತಾನ ತಂಡಗಳ ನಡುವಿನ ಸೂಪರ್ 4 ಪಂದ್ಯಕ್ಕೆ ನಿಗದಿತ ದಿನವಾದ ಭಾನುವಾರ ಮಳೆ ಅಡ್ಡಿಯಾಗಿರುವ ಕಾರಣದಿಂದಾಗಿ ಪಂದ್ಯವನ್ನು ಸೆಪ್ಟೆಂಬರ್ 11ಕ್ಕೆ ಮುಂದೂಡಲಾಗಿದೆ. ಭಾರತ ಈ ಪಂದ್ಯದಲ್ಲಿ ಅದ್ಭುತ ಆರಂಭವನ್ನು ಪಡೆದುಕೊಂಡ ಬಳಿಕ ಎರಡು ವಿಕೆಟ್ಗಳನ್ನು ಕಳೆದುಕೊಂಡಿದೆ. ಮಳೆಯಿಂದಾಗಿ ಪಂದ್ಯ ಸ್ಥಗಿತವಾದಾಗ ಟೀಮ್ ಇಂಡಿಯಾ 24.1 ಓವರ್ಗಳಲ್ಲಿ 147 ರನ್ಗಳಿಗೆ 2 ವಿಕೆಟ್ಗಳನ್ನು ಕಳೆದುಕೊಂಡಿತ್ತು. ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಶುಬ್ಮನ್ ಗಿಲ್ ಶತಕದ ಜೊತೆಯಾಟ ನೀಡಿದ್ದು ತಲಾ ಅರ್ಧ ಶತಕ ಸಿಡಿಸಿ ವಿಕೆಟ್ ಕಳೆದುಕೊಂಡಿದ್ದಾರೆ. ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ಕ್ರೀಸ್ನಲ್ಲಿದ್ದು ಆಟವನ್ನು ಮುಂದುವರಿಸಲಿದ್ದಾರೆ.