ಭಾರತ ಟಿ20 ವಿಶ್ವಕಪ್ ಸೆಮಿಫೈನಲ್ ಪ್ರವೇಶಿಸಿದೆ. ಭಾನುವಾರ ಕೋಲ್ಕತ್ತಾದಲ್ಲಿ ನಡೆದ ಸೂಪರ್ 8 ಹಂತದ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಟೀಮ್ ಇಂಡಿಯಾ ವೆಸ್ಟ್ ಇಂಡೀಸ್ ತಂಡವನ್ನು ಮಣಿಸಿ ಮುಂದಿನ ಹಂತಕ್ಕೆ ಪ್ರವೇಶ ಪಡೆದಿದೆ. ಮಹತ್ವದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ ಸಂಜು ಸ್ಯಾಮ್ಸನ್ ಅಬ್ಬರಿಸಿದ್ದಾರೆ. ಸಿಕ್ಕ ಅವಕಾಶವನ್ನು ಎರಡೂ ಕೈಗಳಿಂದ ಬಳಸಿಕೊಂಡಿರುವ ಸಂಜು ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ಪಡೆದಿದ್ದಾರೆ.
ಈಡನ್ ಗಾರ್ಡನ್ ಅಂಗಳದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ವಿಂಡೀಸ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 195 ರನ್ ಕಲೆ ಹಾಕಿತು. ಇದಕ್ಕುತ್ತರವಾಗಿ ಬ್ಯಾಟ್ ಮಾಡಿದ ಭಾರತ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 199 ರನ್ ಸಿಡಿಸಿ ಜಯ ಸಾಧಿಸಿತು. ಈ ಪಂದ್ಯದಲ್ಲಿ ಟೀಮ್ ಇಂಡಿಯಾದ ಆರಂಭಿಕ ಆಟಗಾರ ಸಂಜು ಸ್ಯಾಮ್ಸನ್ 12 ಬೌಂಡರಿ, 4 ಸಿಕ್ಸರ್ ಸಹಾಯದಿಂದ ಅಜೇಯ 97 ರನ್ ಸಿಡಿಸಿದರು.

ಸಂಜು ಅವರ ಭರ್ಜರಿ ಬ್ಯಾಟಿಂಗ್ ಪ್ರದರ್ಶನದ ಬಲದಿಂದ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿಯನ್ನು ನೀಡಲಾಯಿತು. ಬಳಿಕ ಮಾತನಾಡಿದ ಅವರು, ಟಿ20 ಕ್ರಿಕೆಟ್ನ್ನು ನಾನು ದಶಕದಿಂದ ಆಡುತ್ತಿದ್ದೇನೆ. ದೇಶಕ್ಕಾಗಿಯೂ ಹಲವು ಪಂದ್ಯಗಳನ್ನು ಆಡಿದ್ದೇನೆ. ನಾನು ಕ್ರಿಕೆಟ್ ಆಟವಾಡಲು ಆರಂಭಿಸಿದ ದಿನದಿಂದ ದೇಶಕ್ಕಾಗಿ ಆಡಲು ಬಯಸಿದ್ದೆ. ಬಹು ವರ್ಷದಿಂದ ಇಂತಹ ದಿನಕ್ಕಾಗಿ ನಾನು ಕಾಯುತ್ತಿದ್ದೆ. ಈ ಪ್ರಯಾಣ ವಿಶೇಷವಾಗಿದೆ. ನಂಬಿಕೆಯನ್ನು ಉಳಿಸಿಕೊಂಡು ಬ್ಯಾಟ್ ಮಾಡಿದ್ದರಿಂದ ಇಂದು ಇಂತಹ ದಿನವನ್ನು ನೋಡಲು ಸಾಧ್ಯವಾಗಿದೆ ಎಂದು ಸಂಜು ಸ್ಯಾಮ್ಸನ್ ತಿಳಿಸಿದ್ದಾರೆ.
ಈ ಪಂದ್ಯದಲ್ಲಿ ನಾನು ಮೊದಲ ಎಸೆತದಿಂದ ದೊಡ್ಡ ಸ್ಕೋರ್ ಮಾಡಲು ಬಯಸಿದ್ದೆ. ಆದರೆ ಭಾನುವಾರದ ಪಂದ್ಯ ನಿಜಕ್ಕೂ ವಿಭಿನ್ನವಾಗಿತ್ತು. ವಿಕೆಟ್ಗಳು ಬಿದ್ದಾಗ ಜೊತೆಯಾಟಗಳ ಬಗ್ಗೆ ನಾನು ಗಮನಹರಿಸಿದೆ. ತಂಡ ನನಗೆ ನೀಡಿದ ನನ್ನ ಪಾತ್ರವನ್ನು ಚೆನ್ನಾಗಿ ಅರ್ಥ ಮಾಡಿಕೊಂಡು ಆಡಿದ್ದೇನೆ. ಇದು ನನ್ನ ಜೀವನದ ಅತ್ಯುತ್ತಮ ದಿನಗಳಲ್ಲಿ ಒಂದು ಎಂದು ನಾನು ಭಾವಿಸುತ್ತೇನೆ ಎಂದಿದ್ದಾರೆ.
ನಾನು ಡಗೌಟ್ನಿಂದ ಪಂದ್ಯಗಳನ್ನು ಹೆಚ್ಚು ನೋಡಿದ್ದೇನೆ. ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ಶ್ರೇಷ್ಠ ಆಟಗಾರರಿಂದ ನಾನು ಕಲಿಯುತ್ತಿದ್ದೇನೆ. ಶ್ರೇಷ್ಠ ಆಟಗಾರ ಮೈದಾನದಲ್ಲಿ ಏನು ಮಾಡುತ್ತಿದ್ದರು ಎಂಬುದನ್ನು ನೋಡಿ ಕಲಿತಿದ್ದೇನೆ. ಇದರಿಂದ ನನ್ನ ಆಟ ಸುಧಾರಿಸಿತು ಎಂದು ತಿಳಿಸಿದ್ದಾರೆ.