* ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಭಾರತ ಸುದೀರ್ಘ ಕಾಲ ನೆನಪಿಟ್ಟುಕೊಳ್ಳುವಂತಾ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಹಾಗೂ ಬೌಲಿಂಗ್ ಎರಡೂ ವಿಭಾಗದಲ್ಲಿಯೂ ಅಮೋಘ ಪ್ರದರ್ಶನ ನೀಡಿದ ಭಾರತ ಪಾಕಿಸ್ತಾನ ತಂಡದ ವಿರುದ್ಧ ಅಮೋಘ 228 ರನ್ಗಳ ಗೆಲುವು ಸಾಧಿಸಿದೆ. ಈ ಗೆಲುವಿನ ಬಳಿಕ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ವಿರಾಟ್ ಕೊಹ್ಲಿ ಪಂದ್ಯಕ್ಕೆ ಕೊಡುಗೆ ನೀಡಿದ ವಿಶೇಷ ವ್ಯಕ್ತಿಗಳನ್ನು ಸ್ಮರಿಸಿದ್ದಾರೆ. ಪ್ರೇಮದಾಸ ಕ್ರೀಡಾಂಗಣದ ಸಿಬ್ಬಂದಿಗಳ ಶ್ರಮವನ್ನು ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಕಣ್ಣಾರೆ ಕಂಡರು. ಹೀಗಾಗಿ ಅವರ ಶ್ರಮವನ್ನು ಕೊಂಡಾಡಿದ್ದಾರೆ. ಅಲ್ಲದೆ ಪಂದ್ಯ ನಡೆಯುವಂತಾಗಲೂ ಅವರ ಈ ಶ್ರಮವೇ ಕಾರಣ ಎನ್ನುವುದನ್ನು ಉಲ್ಲೇಖಿಸಿದ್ದು ಧನ್ಯವಾದ ಹೇಳಿದ್ದಾರೆ.
* ಈ ಸೋಲಿನ ಬಳಿಕ ಪಾಕಿಸ್ತಾನ ತಂಡದ ಪ್ರದರ್ಶನಕ್ಕೆ ಅಲ್ಲಿನ ಮಾಜಿ ಕ್ರಿಕೆಟಿಗರು ಹಾಗೂ ಅಭಿಮಾನಿಗಳು ಸಾಕಷ್ಟು ಟೀಕೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ. ಇಂಥಾ ಸಂದರ್ಭದಲ್ಲಿ ಟೀಮ್ ಇಂಡಿಯಾದ ಮಾಜಿ ಕ್ರಿಕೆಟಿಗ ಇರ್ಫಾನ್ ಪಠಾಣ್ ಟ್ವಿಟ್ಟರ್ನಲ್ಲಿ ಪಾಕ್ ಅಭಿಮಾನಿಗಳ ಕಾಲೆಳೆದಿದ್ದು ಪಾಕ್ ಅಭಿಮಾನಿಗಳ ಸೋಲಿನ ಗಾಯಕ್ಕೆ ಉಪ್ಪುಸವರಿದಂತಾಗಿದೆ. ಈ ಟ್ವೀಟ್ ಈಗ ಸಾಕಷ್ಟು ವೈರಲ್ ಆಗಿದೆ. ಪಾಕಿಸ್ತಾನ ತಂಡದ ಸೋಲಿನ ಬಳಿಕ ಪಾಕಿಸ್ತಾನದ ಅಭಿಮಾನಿಗಳನ್ನು ಉದ್ದೇಶಿಸಿ ಇರ್ಫಾನ್ ಪಠಾಣ್ "ಬಹಳಷ್ಟು ಮೌನವಿದೆ.. ಈ ಬಾರಿ ನೆರೆಹೊರೆಯವರು ಟಿವಿ ಜೊತೆಗೆ ಮೊಬೈಲ್ ಫೋನ್ಗಳನ್ನು ಕೂಡ ಒಡೆದಿರುವಂತೆ ಕಾಣಿಸುತ್ತಿದೆ" ಎಂದು ಇರ್ಫಾನ್ ಪಠಾಣ್ ಟ್ವೀಟ್ ಮೂಲಕ ಪಾಕಿಸ್ತಾನದ ಅಭಿಮಾನಿಗಳನ್ನು ಕೆಣಕಿದ್ದಾರೆ.

* "ಪಾಕಿಸ್ತಾನ ವಿರುದ್ಧ ಪಂದ್ಯದ ಟಾಸ್ಗೆ 5 ನಿಮಿಷಗಳ ಮೊದಲು ರಾಹುಲ್ ದ್ರಾವಿಡ್ ಭಾಯ್ ಕರೆದು ನಾನು ಆಡುತ್ತಿದ್ದೇನೆ ಎಂದು ಹೇಳಿದರು. ನಾನು ಆಡುವ ಯೋಚನೆ ಇಟ್ಟುಕೊಂಡು ಬಂದಿರಲಿಲ್ಲ. ಏಕೆಂದರೆ ನಾನು ವಾಟರ್ ಬಾಯ್ ಆಗುತ್ತೇನೆ ಎಂದು ನಾನು ಭಾವಿಸಿದ್ದೆ. ನನ್ನ ವೃತ್ತಿಜೀವನದಲ್ಲಿ ನನಗೆ ವಿಚಿತ್ರವಾದ ಸಂಗತಿ ಸಂಭವಿಸಿತು," ಎಂದು ಕೆಎಲ್ ರಾಹುಲ್ ಸ್ಟಾರ್ ಸ್ಪೋರ್ಟ್ಸ್ನಲ್ಲಿ ತಿಳಿಸಿದ್ದಾರೆ.
* ಪಾಕಿಸ್ತಾನ ತಂಡದ ಇಬ್ಬರು ಪ್ರಮುಖ ವೇಗದ ಬೌಲರ್ಗಳಾದ ಹ್ಯಾರಿಸ್ ರೌಫ್ ಹಾಗೂ ನಸೀಮ್ ಶಾ ಭಾರತದ ವಿರುದ್ಧ ನಡೆದ ಸೂಪರ್ 4 ಪಂದ್ಯದಲ್ಲಿ ಗಾಯಕ್ಕೆ ತುತ್ತಾಗಿದ್ದಾರೆ. ಈ ಇಬ್ಬರು ಕೂಡ ಏಷ್ಯಾಕಪ್ನಲ್ಲಿ ಪಾಕಿಸ್ತಾನ ಮುಂದುವರಿಯಲು ಗೆಲ್ಲಲೇ ಬೇಕಾದ ಶ್ರೀಲಂಕಾ ವಿರುದ್ಧದ ಪಂದ್ಯಕ್ಕೆ ಅಲಭ್ಯವಾಗುವ ಸಾಧ್ಯತೆ ಹೆಚ್ಚಾಗಿದೆ. ಭಾರತದ ವಿರುದ್ಧದ ಪಂದ್ಯದಲ್ಲಿ ಭಾನುವಾರ ಹ್ಯಾರಿಸ್ ರೌಫ್ ಫ್ಲ್ಯಾಂಕ್ ಇಂಜುರಿಗೆ ಒಳಗಾಗಿದ್ದರು. ಹೀಗಾಗಿ ರೌಫ್ ಭಾರತ ಪಾಕ್ ಪಂದ್ಯ ಸೋಮವಾರ ಮುಂದುವರಿದಾಗ ಕಣಕ್ಕಿಳಿಯಲಿಲ್ಲ. ರೌಫ್ ಇಲ್ಲದೆಯೇ ಪಾಕಿಸ್ತಾನ ಬೌಲಿಂಗ್ ದಾಳಿ ನಡೆಸಬೇಕಾಗಿತ್ತು. ಭಾತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ಹಿನ್ನಡೆಗೆ ಇದು ಕೂಡ ಕಾರಣವಾಗಿತ್ತು.
* ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಭರ್ಜರಿಯಾಗಿ ಗೆದ್ದುಕೊಂಡ ಬಳಿಕ ಮಂಗಳವಾರ ಮತ್ತೊಂದು ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು ಎದುರಿಸಲು ಕಣಕ್ಕಿಳಿದಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಡುವ ಬಳಗದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದ ಶಾರ್ದೂಲ್ ಠಾಕೂರ್ ಈ ಪಂದ್ಯದಲ್ಲಿ ಹೊರಬಿದ್ದಿದ್ದು ಮತ್ತೋರ್ವ ಸ್ಪಿನ್ ಆಲ್ರೌಂಡರ್ಗೆ ಅವಕಾಶ ನೀಡಲಾಗಿದೆ. ಹೀಗಾಗಿ ಅಕ್ಷರ್ ಪಟೇಲ್ ಈ ಪಂದ್ಯದಲ್ಲಿ ಭಾತ ತಂಡದಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದ್ದಾರೆ.
* ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯವನ್ನು ಗೆದ್ದ ಮರುದಿನವೇ ಭಾರತ ಶ್ರೀಲಂಕಾ ವಿರುದ್ಧ ಕಣಕ್ಕಿಳಿದಿದೆ. ಪಾಕ್ ವಿರುದ್ಧದ ಯಶಸ್ಸಿನ ಗುಂಗಿನಲ್ಲೇ ಇದ್ದ ಭಾರತ ತಂಡಕ್ಕೆ ಈ ಪಂದ್ಯದಲ್ಲಿ ಶ್ರೀಲಂಕಾದ ಸ್ಪಿನ್ನರ್ಗಳು ಆಘಾತ ನೀಡಿದ್ದಾರೆ. ಭಾರತ ತಂಡದ ಎಲ್ಲಾ 10 ವಿಕೆಟ್ಗಳು ಕುಡ ಶ್ರೀಲಂಕಾದ ಸ್ಪಿನ್ನರ್ಗಳ ಪಾಲಾಗಿರುವುದೇ ವಿಶೇಷ. ಅದರಲ್ಲೂ ಶ್ರೀಲಂಕಾದ ಇಬ್ಬರು ಸ್ಪಿನ್ನರ್ಗಳೇ ಭಾರತ ತಂಡದ 9 ವಿಕೆಟ್ಗಳನ್ನು ಹಂಚಿಕೊಂಡಿದ್ದಾರೆ. ಅಂತಿಮ ಆಟಗಾರನಾಗಿ ಔಟಾದ ಅಕ್ಷರ್ ಪಟೇಲ್ ಮಾತ್ರವೇ ಮತೀಶ ತೀಕ್ಷಣಗೆ ವಿಕೆಟ್ ಒಪ್ಪಿಸಿದರು.