
ದುಬೈ, ಸೆಪ್ಟೆಂಬರ್ 27: ಇಂಗ್ಲೆಂಡ್ ಟೆಸ್ಟ್ ಸರಣಿ ವೇಳೆ ಬ್ಯಾಟಿಂಗ್ ವೈಫಲ್ಯ ಪ್ರದರ್ಶಿಸಿದ್ದಕ್ಕೆ ನನಗೇನೂ ನಾಚಿಕೆ ಅನ್ನಿಸಿಲ್ಲ ಎಂದು ಭಾರತದ ಆರಂಭಿಕ ಆಟಗಾರ ಶಿಖರ್ ಧವನ್ ಹೇಳಿದ್ದಾರೆ. 'ಆ ಸರಣಿ ವೇಳೆ ನನ್ನ ಆಟವನ್ನು ನಾನು ಆಡಲು ಯತ್ನಿಸುತ್ತಿದ್ದೆ. ಆದರೆ ಅಂದುಕೊಂಡಂತೆ ಆಡಲಾಗುತ್ತಿರಲಿಲ್ಲ' ಎಂದು ಧವನ್ ತಿಳಿಸಿದ್ದಾರೆ.
ಐದು ಪಂದ್ಯಗಳ ಇಂಗ್ಲೆಂಡ್ ಸರಣಿಯ ಐದೂ ಪಂದ್ಯಗಳಲ್ಲಿ ಧವನ್ ಆಡಿದ್ದರು. ಆದರೆ ಆ ವೇಳೆ ಧವನ್ ಗಮನಾರ್ಹ ಅನ್ನಿಸುವಂತ ಬ್ಯಾಟಿಂಗ್ ಒಂದೂ ಪಂದ್ಯದಲ್ಲಿ ತೋರಿಸಿರಲಿಲ್ಲ. ಹೀಗಾಗಿ ಮುಂಬರಲಿರುವ ವೆಸ್ಟ್ ಇಂಡೀಸ್ ಟೆಸ್ಟ್ ಗೆ ಧವನ್ ತಂಡದಲ್ಲಿ ಸ್ಥಾನ ಪಡೆಯುವ ಸಾಧ್ಯತೆ ಕಡಿಮೆ ಎನ್ನುತ್ತಿದೆ ಕ್ರಿಕೆಟ್ ವಲಯ.
ಅದೇ ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ ಕ್ರಿಕೆಟ್ ನಲ್ಲಿ ಧವನ್ ಆಕರ್ಷಕ ಆಟ ಪ್ರದರ್ಶಿಸಿದ್ದರು. ಆರಂಭಿಕರಾಗಿ ಇಳಿಯುತ್ತಿದ್ದ ರೋಹಿತ್ ಶರ್ಮಾ ಮತ್ತು ಧವನ್ ಇಬ್ಬರೂ ಟೂರ್ನಿಯುದ್ದಕ್ಕೂ ತಂಡದ ಬಲವಾಗಿ ನಿಂತಿದ್ದರು. ಆದರೆ ಇಂಗ್ಲೆಂಡ್ ಟೆಸ್ಟ್ ಹಿನ್ನಡೆಯೇ ಧವನ್ ಗೆ ಈಗ ಮುಳ್ಳಾದಂತಿದೆ.
ಈ ಬಗ್ಗೆ ದುಬೈಯಲ್ಲಿ ಏಷ್ಯಾ ಕಪ್ ಫೈನಲ್ ಪಂದ್ಯಕ್ಕೂ ಮುನ್ನ ಗುರುವಾರ (ಸೆ.27) ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ಶಿಖರ್, 'ಇಂಗ್ಲೆಂಡ್ ಟೆಸ್ಟ್ ಬಗ್ಗೆ ಹೇಳಬೇಕೆಂದರೆ ನಾನು ಚೆನ್ನಾಗಿ ಆಡಿಲ್ಲ ಹೌದು. ಆದರೆ ನನ್ನಿಂದ ಸಾಧ್ಯವಾದಷ್ಟು ಆಡಲು ಪ್ರಯತ್ನಿಸಿದ್ದಂತೂ ನಿಜ. ಅವತ್ತು ನಾನು ನನ್ನಿಂದ ಸಾಧ್ಯವಾಗುವುದಕ್ಕಿಂತ ಕೊಂಚ ಹೆಚ್ಚೇ ಉತ್ತಮ ಆಟ ಆಡಿದ್ದೆ. ಆದರದು ಪರಿಗಣನೆಗೆ ಬಾರದೆ ಹೋಯಿತು. ಆ ಹಿನ್ನಡೆಯನ್ನು ಒಪ್ಪಿಕೊಂಡಿದ್ದೇನೆ. ಆದರೆ ನನಗೆ ಆ ಬಗ್ಗೆ ನಾಚಿಕೆಯೇನೂ ಅನ್ನಿಸಿಲ್ಲ' ಎಂದಿದ್ದಾರೆ.
'ದುಬೈಯಲ್ಲಿ ಏಕದಿನ ಪಂದ್ಯ ಆಡಿದೆ. ಇಂಗ್ಲೆಂಡ್ ನಲ್ಲಿ ಆಡುವಾಗ ಹಾಕಿಕೊಂಡಿದ್ದ ಯೋಜನೆಯಲ್ಲೇ ಆಡಿದೆ. ಇಲ್ಲಿ ನನ್ನ ಯೋಜನೆ ಫಲಿಸಿತು. ಯಾಕೆಂದರೆ ಇಲ್ಲಿನ ವಾತಾವರಣ, ಪರಿಸ್ಥಿತಿಯೇ ಬೇರೆ. ಕೆಲವೊಮ್ಮೆ ಕೆಲ ಯೋಜನೆಗಳು ಫಲಿಸುತ್ತವೆ, ಕೆಲವೊಮ್ಮ ಇಲ್ಲ' ಎಂದು ಧವನ್ ವಿವರಿಸಿದರು.