
ನಾಟಿಂಗ್ಹ್ಯಾಮ್, ಜೂನ್ 13: ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅವರ ಫಿಟ್ನೆಸ್ ಕುರಿತಾಗಿ ಮಾತನಾಡಿದ್ದು, ಧವನ್ ಚೇತರಿಸಿಕೊಂಡು ವಿಶ್ವಕಪ್ನಲ್ಲಿ ತಂಡಕ್ಕೆ ತಮ್ಮ ಸೇವೆ ಮುಂದುವರಿಸುತ್ತಾರೆಂಬ ಆಶಾಭಾವನೆ ವ್ಯಕ್ತ ಪಡಿಸಿದ್ದಾರೆ.
ವಿಶ್ವಕಪ್ ವೇಳಾಪಟ್ಟಿ / ಮುಖಾಮುಖಿ ದಾಖಲೆಗಳು / ಅಂಕಪಟ್ಟಿ
ಪ್ರಸಕ್ತ ಏಕದಿನ ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯ ಮಳೆಯಿಂದಾಗಿ ಟಾಸ್ ಕೂಡ ಕಾಣದಂತೆ ರದ್ದಾಯಿತು. ಟೂರ್ನಿಯಲ್ಲಿ ಇದು ಸೇರಿ ಒಟ್ಟು ನಾಲ್ಕು ಪಂದ್ಯಗಳು ಮಳೆಗೆ ಆಹುತಿಯಾಗಿವೆ. ಪಂದ್ಯ ಅಧಿಕೃತವಾಗಿ ರದ್ದಾದ ಬಳಿಕ ಮಾತನಾಡಿದ ನಾಯಕ ವಿರಾಟ್ ಶಿಖರ್ ಧವನ್ ಅವರನ್ನು ತಂಡದಲ್ಲಿ ಉಳಿಸಿಕೊಳ್ಳುವುದಾಗಿ ಹೇಳಿದ್ದಾರೆ.
ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಶತಕ ಸಿಡಿಸಿ ಜಯದ ರೂವಾರಿ ಎನಿಸಿದ ಶಿಖರ್ ಧವನ್, ಪ್ಯಾಟ್ ಕಮಿನ್ಸ್ ಅವರ ಬೌಲಿಂಗ್ನಲ್ಲಿ ಹೆಬ್ಬೆರಳಿಗೆ ಪೆಟ್ಟು ತಿಂದಿದ್ದರು. ಬಳಿಕ ಅವರ ಗಾಯದ ಸಮಸ್ಯೆ ಗಂಭೀರವಾಗಿದ್ದ ಕಾರಣ, ಕಾಯ್ದಿರಿಸಲ್ಪಟ್ಟ ಆಟಗಾರ ರಿಷಭ್ ಪಂತ್ಗೆ ತಂಡ ಸೇರಿಕೊಳ್ಳುವಂತೆ ಬುಲಾವ್ ನೀಡಲಾಯಿತು. ಮುನ್ನೆಚ್ಚರಿಕೆಯ ಕ್ರಮವಾಗಿ ಬಿಸಿಸಿಐ ಈಗಾಗಲೇ ಪಂತ್ ಅವರನ್ನು ಇಂಗ್ಲೆಂಡ್ಗೆ ಕಳುಹಿಸಿದೆ.
"ಒಂದೆರಡು ವಾರಗಳ ಕಾಲ ಶಿಖರ್ ತಮ್ಮ ಕೈಗೆ ಪ್ಲಾಸ್ಟರ್ ತೊಡಲಿದ್ದಾರೆ. ಲೀಗ್ ಹಂತದ ಕೊನೆಯ ಪಂದ್ಯಗಳು ಮತ್ತು ಸೆಮಿಫೈನಲ್ಸ್ಗೆ ಅವರ ಸೇವೆ ಲಭ್ಯವಾಗುತ್ತದೆ ಎಂಬ ಆಶಯದಲ್ಲಿದ್ದೇವೆ. ಅವರು ಕೂಡ ಚೇತರಿಸುವ ಆತ್ಮವಿಶ್ವಾಸದಲ್ಲಿದ್ದಾರೆ. ಹೀಗಾಗಿ ಅವರನ್ನು ತಂಡದಲ್ಲೇ ಉಳಿಸಿಕೊಳ್ಳಲಿದ್ದೇವೆ,'' ಎಂದು ವಿರಾಟ್ ಸುದ್ದಿಗಾರರಿಗೆ ತಿಳಿಸಿದ್ದಾರೆ.
ಇದೇ ವೇಳೆ ಭಾನುವಾರ (ಜೂನ್ 16) ನಡೆಯಲಿರುವ ಇಂಡೊ-ಪಾಕ್ ಪಂದ್ಯದ ಕುರಿತಾಗಿಯೂ ಮಾತನಾಡಿದ ಕೊಹ್ಲಿ, "ನಮ್ಮ ಗೇಮ್ ಪ್ಲಾನ್ ಏನಿದ್ದರೂ ಅಲ್ಲಿ ಹೋಗಿ ಉತ್ತಮ ಆಟವಾಡುವುದಷ್ಟೇ. ನಮ್ಮ ಯೋಜನೆಗಳನ್ನು ಕಾರ್ಯರೂಪಕ್ಕೆ ತಂದು ಜಯ ದಾಖಲಿಸುವುದನ್ನು ಎದುರು ನೋಡುತ್ತಿದ್ದೇವೆ. ವಿಶ್ವಕಪ್ನಂತಹ ಟೂರ್ನಿಯಲ್ಲಿ ಇಷ್ಟು ಮಹತ್ವದ ಪಂದ್ಯವನ್ನಾಡುವುದು ನಮ್ಮ ತಂಡದ ಶ್ರೇಷ್ಠ ಪ್ರದರ್ಶನವನ್ನು ಹೊರತರುವಂತೆ ಮಾಡುತ್ತದೆ,'' ಎಂದಿದ್ದಾರೆ.
{headtohead_cricket_3_5}