ಪಾಕಿಸ್ತಾನದಲ್ಲಿ 23 ವರ್ಷಗಳ ಬಳಿಕ ಐಸಿಸಿ ಟೂರ್ನಿಯೊಂದು ನಡೆಯುತ್ತಿದೆ. ಎಂಟು ವರ್ಷದ ಬಳಿಕ ನಡೆಯುತ್ತಿರು ಐಸಿಸಿ ಮೆಗಾ ಈವೆಂಟ್ನತ್ತ ವಿಶ್ವದ ಚಿತ್ತ ನೆಟ್ಟಿದೆ. ಬುಧವಾರ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಪಾಕಿಸ್ತಾನ ಹಾಗೂ ನ್ಯೂಜಿಲೆಂಡ್ ತಂಡಗಳು ಕಾದಾಟ ನಡೆಸಲಿವೆ. ಭಾರತ ಈ ಟೂರ್ನಿಯಲ್ಲಿ ತನ್ನ ಅಭಿಯಾನವನ್ನು ಫೆಬ್ರವರಿ 20 ರಂದು ಆರಂಭಿಸಲಿದೆ. ಟೀಮ್ ಇಂಡಿಯಾ ದುಬೈನಲ್ಲಿ ಬಾಂಗ್ಲಾದೇಶ ವಿರುದ್ಧ ಕಾದಾಟವನ್ನು ನಡೆಸಲಿದೆ.
ಮಿನಿ ವಿಶ್ವಕಪ್ ಎಂದೇ ಖ್ಯಾತಿ ಪಡೆದಿರುವ ಚಾಂಪಿಯನ್ಸ್ ಟ್ರೋಫಿಗಾಗಿ ಭಾರತ ತನ್ನ ಬಲಿಷ್ಠ ತಂಡವನ್ನು ಪ್ರಕಟಿಸಿದೆ. ಈ ವೇಳೆ ಸ್ಟಾರ್ ಆಟಗಾರರು ಮೈದಾನ ಪ್ರವೇಶಿಸಲಿದ್ದಾರೆ. ಇನ್ನು ಯುವ ಆಟಗಾರರು ತಮ್ಮ ಕ್ಷಮತೆಯನ್ನು ಸಾಬೀತು ಪಡಿಸಲು ಸಿದ್ಧರಾಗಿದ್ದಾರೆ. ಇದೇ ಟೂರ್ನಿಗೂ ಮುನ್ನ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ರಾಯಭಾರಿಗಳಲ್ಲಿ ಒಬ್ಬರಾಗಿರುವ ಶಿಖರ್ ಧವನ್ ಈ ಟೂರ್ನಿಗೂ ಮುನ್ನ ದೊಡ್ಡ ಹೇಳಿಕೆಯನ್ನು ನೀಡಿದ್ದಾರೆ.

ಶಿಖರ್ ಧವನ್ ಐಸಿಸಿಗೆ ನೀಡಿದ ಸಂದರ್ಶನದಲ್ಲಿ, ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಬಗ್ಗೆ ತುಟಿ ಬಿಚ್ಚಿದ್ದಾರೆ. ಯುವ ವೇಗದ ಬೌಲರ್ ಹರ್ಷಿತ್ ರಾಣಾ ಈ ಬಾರಿ ಎಲ್ಲರ ಚಿತ್ತ ಕದಿಯುವ ಪ್ಲೇಯರ್ಗಳಲ್ಲಿ ಒಬ್ಬರು. ಈ ಬಿಗ್ ಈವೆಂಟ್ ಹರ್ಷಿತ್ ಅವರಿಗೆ ಮಹತ್ವದಾಗಿದೆ. ಇನ್ನು ಹರ್ಷಿತ್ ಯಾವುದೇ ಚಾಲೆಂಜ್ಗಳಿಗೆ ಧೃತಿ ಗೆಡುವುದಿಲ್ಲ. ಕೆಚ್ಚೆದೆಯಿಂದ ಬೌಲಿಂಗ್ ನಡೆಸುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಇವರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳುವಲ್ಲಿ ಯಶಸ್ವಿಯಾದರೆ, ಇವರು ಟೀಮ್ ಇಂಡಿಯಾದ ಎಕ್ಸ್ ಫ್ಯಾಕ್ಟರ್ ಆಗಲಿದ್ದಾರೆ ಎಂದು ಶಿಖರ್ ತಿಳಿಸಿದ್ದಾರೆ.
ಇದೇ ವೇಳೆ ಟೀಮ್ ಇಂಡಿಯಾದ ಯುವ ಬ್ಯಾಟರ್ ಬಗ್ಗೆ ಶಿಖರ್ ಧವನ್ ತಮ್ಮ ಅನಿಸಿಕೆ ವ್ಯಕ್ತ ಪಡಿಸಿದ್ದಾರೆ. ಟೀಮ್ ಇಂಡಿಯಾದ ಉಪನಾಯಕ ಶುಭಮನ್ ಗಿಲ್, ಯಾವುದೇ ಬೌಲರ್ ವಿರುದ್ಧ ಸ್ಫೋಟಕ ಆಟವನ್ನು ಆಡುವ ಕ್ಷಮತೆಯನ್ನು ಹೊಂದಿರುವ ಪ್ಲೇಯರ್. ಈ ಬಾರಿ ಭಾರತ ಟ್ರೋಫಿಗೆ ಮುತ್ತಿಡಬೇಕಾದಲ್ಲಿ ಇವರ ಕೊಡುಗಡೆಯೂ ಮಹತ್ವದಾಗಿದೆ. ಟೀಮ್ ಇಂಡಿಯಾದ ಬ್ಯಾಟಿಂಗ್ ಕ್ರಮಾಂಕ ಸಮತೋಲಿತವಾಗಿದೆ. ಅನುಭವಿ ಹಾಗೂ ಯುವ ಬ್ಯಾಟರ್ಗಳು ತಂಡದ ಬ್ಯಾಟಿಂಗ್ಗೆ ಆಧಾರ ಎಂದು ಹೇಳಿದ್ದಾರೆ.
ತಂಡದಲ್ಲಿರುವ ಸ್ಟಾರ್ ಆಟಗಾರರಾದ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಇತ್ತೀಚಿಗೆ ಇಂಗ್ಲೆಂಡ್ ವಿರುದ್ಧದ ಸರಣಿಯ ವೇಳೆ ಅಮೋಘ ಫಾರ್ಮ್ ಕಂಡುಕೊಂಡಿದ್ದಾರೆ. ಈ ಎಲ್ಲ ಅಂಶಗಳನ್ನು ನೋಡಿದಾಗ ಟೀಮ್ ಇಂಡಿಯಾ ಬಲಿಷ್ಠವಾಗಿದೆ ಎಂದು ತೋರುತ್ತದೆ. ಈ ಆಟಗಾರರ ಆಟಕ್ಕೆ ಬ್ರೇಕ್ ಹಾಕುವುದು ಕಷ್ಟ. ಇತ್ತೀಚಿನ ದಿನಗಳಲ್ಲಿ ಟೀಮ್ ಇಂಡಿಯಾ ಅಮೋಘ ಪ್ರದರ್ಶನ ನೀಡುತ್ತಿದೆ ಎಂದು ಟೀಮ್ ಇಂಡಿಯಾದ ಮಾಜಿ ಆಟಗಾರ ಶಿಖರ್ ಧವನ್ ಹೇಳಿದ್ದಾರೆ.

ಟೀಮ್ ಇಂಡಿಯಾದ ಪರ ಶಿಖರ್ ಧವನ್ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಗರಿಷ್ಠ ರನ್ ಸಾಧನೆ ಮಾಡಿದ ಆಟಗಾರ.