
ಕೊಲಂಬೋ: ಮೂರು ಪಂದ್ಯಗಳ ಏಕದಿನ ಸರಣಿ ಮತ್ತು ಮೂರು ಪಂದ್ಯಗಳ ಟಿ20ಐ ಸರಣಿಗಾಗಿ ಭಾರತ ತಂಡ ಸದ್ಯ ಶ್ರೀಲಂಕಾದಲ್ಲಿದೆ. ಜುಲೈ 18ರಿಂದ ಜುಲೈ 29ರ ವರೆಗೆ ಈ ಪ್ರವಾಸ ಸರಣಿ ನಡೆಯಲಿದೆ. ಲಂಕಾದಲ್ಲಿರುವ ಭಾರತೀಯ ತಂಡಕ್ಕೆ ಅನುಭವಿ ಬ್ಯಾಟ್ಸ್ಮನ್ ಶಿಖರ್ ಧವನ್ ನಾಯಕರಾಗಿದ್ದಾರೆ.
ಜುಲೈ 13ರಂದು ಆರಂಭಗೊಳ್ಳಬೇಕಿದ್ದ ಭಾರತ-ಶ್ರೀಲಂಕಾ ಸರಣಿ ಕೋವಿಡ್-19 ಕಾರಣದಿಂದಾಗಿ ಜುಲೈ 18ಕ್ಕೆ ಮುಂದೂಡಲ್ಪಟ್ಟಿತ್ತು. ಈ ವೇಳೆ ಬಿಡುವಿನದಲ್ಲಿದ್ದ ಶಿಖರ್ ಧವನ್ ಮತ್ತು ಪೃಥ್ವಿ ಶಾ ಸಂಗೀತದಲ್ಲಿ ತೊಡಗಿಸಿಕೊಂಡಿದ್ದಾರೆ. ಪೃಥ್ವಿ ಮತ್ತು ಧವನ್ ಸಂಗೀತದಲ್ಲಿ ಸಮಯ ಕಳೆಯುತ್ತಿದ್ದ ವಿಡಿಯೋ ಸಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಧವನ್ ಕೊಳಲು ನುಡಿಸುವುದರಲ್ಲೂ ಪ್ರತಿಭಾವಂತರು. ಹಿಂದಿನಿಂದಲೂ ಧವನ್ ಕೊಳಲು ನುಡಿಸುತ್ತಿದ್ದಾರೆ. ಈ ಬಾರಿ ಕಿಶೋರ್ ಕುಮಾರ್ ಅವರ ಕ್ಲಾಸಿಕ್ ಸಾಂಗ್ 'ಏ ಶ್ಯಾಮ್ ಮಸ್ತಾನಿ' ಗೀತೆಗೆ ಧ್ವನಿಯಾಗಿದ್ದಾರೆ. ಪೃಥ್ವಿ ಶಾ ಹಾಡು ಹಾಡುತ್ತಿದ್ದರೆ, ಶಿಖರ್ ಧವನ್ ಕೊಳಲು ನುಡಿಸಿದ್ದಾರೆ.
"ಗುರುವಾರ (ಜುಲೈ 13) ನಮ್ಮ ಜೊತೆಯಲ್ಲೇ ಇರುವ ಸೂಪರ್ ಸ್ಟಾರ್ ಸಿಂಗರ್ ಪೃಥ್ವಿ ಶಾ ಅವರೊಟ್ಟಿಗೆ ರಾಗ ಜೋಡಿಸಿದ್ದೇವೆ," ಎಂದು ಧವನ್ ತನ್ನ ಇನ್ಸ್ಟಾಗ್ರಾಮ್ನಲ್ಲಿ ಬರೆದುಕೊಂಡಿದ್ದಾರೆ. ಜುಲೈ 18ರಂದು 3 PMಗೆ ಕೊಲಂಬೋದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಮೊದಲನೇ ಏಕದಿನ ಪಂದ್ಯ ನಡೆಯಲಿದೆ.