
ಶಿಖರ್ ಧವನ್ ಭಾರತ ತಂಡದ ಅತ್ಯುತ್ತಮ ಆರಂಭಿಕ ಆಟಗಾರ ಮಾತ್ರವಲ್ಲದೆ ತಮ್ಮ ವಿಭಿನ್ನ ಮ್ಯಾನರಿಸಂ ಮೂಲಕ ಯಾವಾಗಲೂ ಲವಲವಿಕೆಯಿಂದ ಇರುವ ವ್ಯಕ್ತಿ. ತಮ್ಮ ವಿಚಿತ್ರವಾದ ಮ್ಯಾನರಿಸಂನಿಂದ ಗಬ್ಬರ್ ಎಂದು ಹೆಸರು ಪಡೆದುಕೊಂಡಿದ್ದಾರೆ.
ಸಾಮಾಜಿಕ ಮಾಧ್ಯಮಗಳಲ್ಲಿ ತಮಾಷೆಯ ವಿಡಿಯೋಗಳನ್ನು ಮಾಡುವುದರಲ್ಲಿ ಶಿಖರ್ ಧವನ್ ಸಿದ್ಧಹಸ್ತರಾಗಿದ್ದಾರೆ. ಕಳೆದ ವರ್ಷದಲ್ಲಿ ಹಲವು ಪಂದ್ಯಗಳಲ್ಲಿ ಭಾರತ ಏಕದಿನ ತಂಡದ ನಾಯಕತ್ವ ವಹಿಸಿಕೊಂಡಿದ್ದ ಶಿಖರ್ ಧವನ್, ಯಶಸ್ವೀ ನಾಯಕರಾಗಿದ್ದಾರೆ.
2023ರಲ್ಲಿ ಭಾರತದ ಪರವಾಗಿ ಇನ್ನೂ ಒಂದು ಪಂದ್ಯವನ್ನಾಡದಿದ್ದರೂ, ಬಿಸಿಸಿಐನ ಒಪ್ಪಂದ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿ ಗ್ರೇಡ್ನಲ್ಲಿ ಅವರು ಬಿಸಿಸಿಐ ಒಪ್ಪಂದ ಪಡೆದುಕೊಂಡಿದ್ದು 1 ಕೋಟಿ ರುಪಾಯಿ ಸಂಬಳ ಪಡೆಯಲಿದ್ದಾರೆ. ಮುಂದಿನ ದಿನಗಳಲ್ಲಿ ಭಾರತ ತಂಡದ ಪರವಾಗಿ ಮತ್ತೆ ಆಡುವ ಸಾಧ್ಯತೆ ಕೂಡ ಇದೆ.
ಅದಕ್ಕೂ ಮುನ್ನ ಐಪಿಎಲ್ನಲ್ಲಿ ಮಿಂಚಲು ಸಿದ್ಧವಾಗಿದ್ದಾರೆ ಭಾರತದ ಎಡಗೈ ಬ್ಯಾಟರ್ ಧವನ್. 2023ರ ಐಪಿಎಲ್ ಆವೃತ್ತಿಯಲ್ಲಿ ಪಂಜಾಬ್ ಕಿಂಗ್ಸ್ ತಂಡದ ನಾಯಕತ್ವ ವಹಿಸಿಕೊಂಡಿರುವ ಧವನ್, ತಂಡಕ್ಕೆ ಮೊದಲ ಟ್ರೋಫಿ ಗೆಲ್ಲುವ ವಿಶ್ವಾಸದಲ್ಲಿದ್ದಾರೆ. ಐಪಿಎಲ್ ಆರಂಭಕ್ಕೂ ಮುನ್ನ ಶಿಖರ್ ಧವನ್ ಆಜ್ ತಕ್ ಎನ್ನುವ ಸುದ್ದಿವಾಹಿನಿಯಲ್ಲಿ ಮಾತನಾಡಿದ್ದು, ಹಲವು ಆಸಕ್ತಿಕರ ವಿಚಾರಗಳನ್ನು ಹಂಚಿಕೊಂಡಿದ್ದಾರೆ.

ಮನಾಲಿಯಲ್ಲಿ ಟ್ಯಾಟೂ ಹಾಕಿಸಿಕೊಂಡಿದ್ದ ಧವನ್
ಬಾಲ್ಯದಿಂದಲೇ ಸಾಕಷ್ಟು ಚೇಷ್ಟೆಗಳನ್ನು ಮಾಡುತ್ತಿದ್ದೆ ಎನ್ನುವ ವಿಚಾರವನ್ನು ಶಿಖರ್ ಧವನ್ ಒಪ್ಪಿಕೊಂಡಿದ್ದಾರೆ. ಒಂದು ಬಾರಿ ಮನಾಲಿಗೆ ಹೋಗಿ ಬಂದ ನಂತರ ಹೆಚ್ಐವಿ ಪರೀಕ್ಷೆ ಮಾಡಿಸಿಕೊಂಡಿದ್ದ ಘಟನೆ ಬಗ್ಗೆ ನೆನಪು ಮಾಡಿಕೊಂಡಿದ್ದಾರೆ.
14-15ನೇ ವಯಸ್ಸಿನವರಿದ್ದಾಗ ಮನಾಲಿಗೆ ಹೋಗಿದ್ದ ಸಂದರ್ಭದಲ್ಲಿ ಶಿಖರ್ ಧವನ್ ಬೆನ್ನಿನ ಮೇಲೆ ಹಚ್ಚೆ(ಟ್ಯಾಟೂ) ಹಾಕಿಸಿಕೊಂಡಿದ್ದರು. ಆದರೆ ಮನೆಯವರು ಬೈಯುತ್ತಾರೆ ಎನ್ನುವ ಭಯದಿಂದ ಯಾರಿಗೂ ಹೇಳದೆ ಅದನ್ನು ಮರೆಮಾಚಿದ್ದರು. ನಂತರ ಅವರ ತಂದೆಗೆ ಧವನ್ ಬೆನ್ನಿನ ಮೇಲಿದ್ದ ಹಚ್ಚೆಯ ಸಂಗತಿ ತಿಳಿದಿದೆ. ಈ ವೇಳೆ ಶಿಖರ್ ಧವನ್ಗೆ ಹೊಡೆದ ಅಪ್ಪ, ಹಚ್ಚೆಯ ಪರಿಣಾಮಗಳ ಬಗ್ಗೆ ಹೇಳಿದ್ದಾರೆ.
ಅಪ್ಪನ ಮಾತು ಕೇಳಿ ಭಯಬಿದ್ದ ಶಿಖರ್ ಧವನ್ ಆಸ್ಪತ್ರೆಗೆ ತೆರಳಿ ಹೆಚ್ಐವಿ ಪರೀಕ್ಷೆ ಮಾಡಿಸಿಕೊಂಡಿದ್ದಾರೆ. ಕಾರಣ, ಅವರು ಟ್ಯಾಟೂ ಹಾಕಿಸಿಕೊಂಡ ಸೂಜಿಯಲ್ಲಿ ಅವರಿಗೂ ಮೊದಲು ಎಷ್ಟು ಜನರಿಗೆ ಟ್ಯಾಟೂ ಹಾಕಲಾಗಿತ್ತು ಎನ್ನುವ ಮಾಹಿತಿ ಇರಲಿಲ್ಲವಂತೆ. ಇದೇ ಕಾರಣಕ್ಕೆ ಭಯಪಟ್ಟು ಪರೀಕ್ಷೆಗೆ ಒಳಗಾಗಿದ್ದರಂತೆ, ಆದರೆ ವರದಿ ನೆಗೆಟಿವ್ ಬಂದಿತು ಎಂದು ಹೇಳಿದ್ದಾರೆ.

ವಿವಾದಗಳಿಗೆ ಭಯಪಟ್ಟು ಸಂದರ್ಶನ ನೀಡಲ್ಲ
ಇದೇ ವೇಳೆ ಕ್ರಿಕೆಟಿಗರು ಯಾಕೆ ಹೆಚ್ಚಿನದಾಗಿ ಮಾಧ್ಯಮಗಳಿಗೆ ಸಂದರ್ಶನ ನೀಡುವುದಿಲ್ಲ ಎನ್ನುವ ಬಗ್ಗೆ ಧವನ್ ಮಾತನಾಡಿದ್ದಾರೆ. ಯಾವುದೇ ಕ್ರಿಕೆಟಿಗರು ತಮ್ಮ ವೃತ್ತಿಜೀವನದಲ್ಲಿ ಬೇಗನೆ ನೆಲೆ ಕಂಡುಕೊಳ್ಳುವುದು ಮುಖ್ಯವಾಗುತ್ತದೆ. ಮಾಧ್ಯಮಗಳಿಂದ ವಿವಾದ ಉಂಟಾಗಬಹುದು ಎನ್ನುವ ಭಯದಿಂದ ಅವರು ಸಂದರ್ಶನ ನೀಡಲು ಹಿಂಜರಿಯುತ್ತಾರೆ ಎಂದು ಹೇಳಿದರು.
"7-8 ವರ್ಷಗಳ ಹಿಂದೆ ನನಗೆ ಸಂದರ್ಶನ ನೀಡುವಂತೆ ಕೇಳಿದ್ದರೆ, ಆ ಸಮಯದಲ್ಲಿ ನನಗೆ ಪ್ರಬುದ್ಧತೆ ಇರಲಿಲ್ಲ. ಮಾಧ್ಯಮದವರು ಏನು ಪ್ರಶ್ನೆ ಕೇಳುತ್ತಾರೊ ಎಂದು ಹೆದರಿ ಸಂದರ್ಶನಕ್ಕೆ ಬರಲು ನಿರಾಕರಿಸುವ ಬಗ್ಗೆ ಯೋಚಿಸುತ್ತಿದ್ದೆ, ಯಾವುದೇ ಕ್ರಿಕೆಟಿಗರು ತಮ್ಮ ವೃತ್ತಿಜೀವನ ಮತ್ತು ಭವಿಷ್ಯದ ಬಗ್ಗೆ ಯೋಚಿಸುತ್ತಾರೆ" ಎಂದು ಹೇಳಿದರು.